ಇತ್ತೀಚೆಗೆ ರಾಜ್ಯಸಭೆಯಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ನೂತನ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್ಪಿಎಸ್) ಸದಸ್ಯರ ಸಂಗ್ರಹ ನಿಧಿಯನ್ನು ರಾಜ್ಯಗಳಿಗೆ “ಮರುಪಾವತಿ ಮತ್ತು ಠೇವಣಿ” ಮಾಡಲು ಅನುಮತಿಸುವ ಯಾವುದೇ ನಿಯಮ ಇಲ್ಲ ಎಂದು ಪುನರುಚ್ಛರಿಸುರುವುದು ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್) ಮರಳಲು ಯೋಚಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆಯ ಘಂಟೆ ಆಗಬೇಕು. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಕಾಯಿದೆ, ೨೦೧೩, ಪಿಎಫ್ಆರ್ಡಿಎ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ನಿರ್ಗಮನ ಮತ್ತು ಹಿಂಪಡೆಯುವಿಕೆ) ನಿಯಮಗಳು, ೨೦೧೫ ಮತ್ತು ಇತರ ನಿಯಮಗಳನ್ನು ಸಚಿವಾಲಯದ ನಿಲುವು ಪ್ರತಿಬಿಂಬಿಸುತ್ತದೆ. ಒಪಿಎಸ್ಗೆ ಮರಳುವ ಯಾವುದೇ ಪ್ರಸ್ತಾಪವನ್ನು ಪರಿಗಣಿಸುತ್ತಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸುತ್ತಿದೆ. ಒಪಿಎಸ್ಗೆ ಮರಳುವುದರಿಂದ ಕೂಡಲೇ ಆಗುವ ಕೊಂಚ ಹಣಕಾಸು ಉಳಿತಾಯವು ಅಲ್ಪಕಾಲಿಕವಾಗಿದ್ದು ನಂತರದ ದಿನಗಳಲ್ಲಿ ಪಿಂಚಣಿ ಪಾವತಿಯ ರೂಪದಲ್ಲಿ ಬರುವ ಹೊಣೆಗಾರಿಕೆಯು ಅಗಾಧವಾಗಿದೆ ಎಂದು ತಜ್ಞರು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದಾರೆ. ನಮ್ಮ ದೇಶದಲ್ಲಿ ಅನೇಕರಿಗೆ ಸಾಮಾಜಿಕ ಸುರಕ್ಷತಾ ಜಾಲವೇ ಇಲ್ಲದಿರುವಾಗ ಸಾರ್ವಜನಿಕರಿಗಿಂತ ಸರ್ಕಾರಿ ನೌಕರರಿಗೆ ಹೆಚ್ಚಿನ ಸವಲತ್ತು ನೀಡುವುದು ಪ್ರತಿಗಾಮಿ ನಡೆ ಎಂದಿದ್ದಾರೆ ಮಾಜಿ ಆರ್ಬಿಐ ಗವರ್ನರ್ ಡಿ. ಸುಬ್ಬರಾವ್.
ಆದರೆ ಸರ್ಕಾರಿ ನೌಕರರು ಅಥವಾ ಸರ್ಕಾರಿ ನಿಯಂತ್ರಿತ ಉದ್ಯಮಗಳಲ್ಲಿರುವವರು ಅದಕ್ಕಾಗಿ ಹೋರಾಡುತ್ತಿರುವುದರಿಂದ ಸಮಸ್ಯೆ ಇನ್ನೂ ಹಾಗೆ ಇದೆ. ಉದಾಹರಣೆಗೆ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕಗಳಲ್ಲಿ ಒಪಿಎಸ್ಗೆ ಮರಳಲು ಒತ್ತಾಯಿಸಿ ಸಿಬ್ಬಂದಿ ಮುಷ್ಕರ ಹೂಡಿದ್ದಾರೆ. ಗುಣಮಟ್ಟದ ನಿವೃತ್ತ ಜೀವನದ ಆಕಾಂಕ್ಷಿಗಳಾಗಿರುವ ಅವರು ಎನ್ಪಿಎಸ್ ಅಡಿಯಲ್ಲಿ ಅವರಿಗೆ ಬರುವ ಪಿಂಚಣಿ ಮೊತ್ತದ ಬಗೆಗಿನ ಅನಿಶ್ಚಿತತೆಯ ಬಗ್ಗೆ ಕಳವಳಗೊಂಡಿರುವುದನ್ನು ಅರ್ಥ ಮಾಡಿಕೊಳ್ಳಬಹುದು. ಪಿಎಫ್ಆರ್ಡಿಎ ನಿಯಂತ್ರಿತವಾಗಿದ್ದರೂ ಎನ್ಪಿಎಸ್ ಮಾರುಕಟ್ಟೆ-ಸಂಯೋಜಿತವಾಗಿದ್ದು ಎಷ್ಟು ಪಿಂಚಣಿ ದೊರೆಯುತ್ತದೆ ಎಂಬುದರ ಬಗ್ಗೆ ನಿರ್ದಿಷ್ಟತೆ ಇಲ್ಲ. ಆದರೆ ಒಪಿಎಸ್ ಅಡಿ ಫಲಾನುಭವಿಗಳು ಸಾಮಾನ್ಯವಾಗಿ ತಮ್ಮ ಅಂತಿಮ ಸಂಬಳದ ಶೇ. ೫೦ರಷ್ಟನ್ನು ಪಿಂಚಣಿಯಾಗಿ ಪಡೆಯುತ್ತಾರೆ ಮತ್ತು ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಆದ್ದರಿಂದ ಒಪಿಎಸ್ ಬೇಡಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತದೆ. ಕೇಂದ್ರ ಸರ್ಕಾರವು ಒಪಿಎಸ್ ಮತ್ತು ಎನ್ಪಿಎಸ್ ಎರಡೂ ಯೋಜನೆಗಳ ವೈಶಿಷ್ಟ್ಯಗಳನ್ನು ಸಂಯೋಜಿಸಿ ಹೊಸ ಯೋಜನೆಯನ್ನು ರೂಪಿಸುವ ಸಮಯ ಬಂದಿದೆ ಎನಿಸುತ್ತದೆ. ನೌಕರರ ಕೊಡುಗೆಯ ಅಂಶವನ್ನು ಉಳಿಸಿಕೊಂಡು ಈ ಹೊಸ ಯೋಜನೆಯು ಸರ್ಕಾರದ ಕೊಡುಗೆಯನ್ನು ಹೆಚ್ಚಿಸಬಹುದು. ಮುಖ್ಯವಾಗಿ ಯೋಜನೆಯಡಿ ಫಲಾನುಭವಿಗಳಿಗೆ ಒಂದು ನಿಗದಿತ ಕನಿಷ್ಠ ಪಿಂಚಣಿ ಮೊತ್ತ ಲಭ್ಯವಾಗದಿದ್ದರೆ ಸರ್ಕಾರವು ಮಧ್ಯ ಪ್ರವೇಶಿಸಿ ಅದನ್ನು ಕೊಡಿಸುವ ಕುರಿತು ನಿಬಂಧನೆಗಳಿರಬೇಕು. ಈ ನಿಟ್ಟಿನಲ್ಲಿ ಕಳೆದ ವರ್ಷದ ಆಂಧ್ರಪ್ರದೇಶದ ಪ್ರಸ್ತಾವನೆಯು ಗಮನಾರ್ಹವಾಗಿದೆ. ಎನ್ಪಿಎಸ್ ಅಡಿಯಲ್ಲಿಯೇ ಮೂಲ ವೇತನದ ಶೇ. ೩೩ರಷ್ಟನ್ನು ಕನಿಷ್ಠ ಮಾಸಿಕ ಪಿಂಚಣಿ ಎಂದು ಇದು ನಿಗದಿ ಪಡಿಸುತ್ತದೆ. ಇತರ ರಾಜ್ಯಗಳ ಅವಶ್ಯಕತೆಗಳಿಗೆ ಹೊಂದುವಂತೆ ಇದನ್ನು ತಿದ್ದಬಹುದು. ಉತ್ತಮ ಆರೋಗ್ಯ ವಿಮಾ ಸೌಲಭ್ಯಗಳನ್ನೂ ಇದು ಒಳಗೊಳ್ಳಬಹುದು. ಉದ್ಯೋಗಿಗಳು ಪಟ್ಟು ಹಿಡಿಯದೇ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು.
This editorial has been translated from English, which can be read here.