ಫೆಬ್ರವರಿ ೨೭ ರಂದು ಹೊಸ ವಿಧಾನಸಭೆ ಚುನಾಯಿಸಲಿರುವ ನಾಗಾಲ್ಯಾಂಡ್ನಲ್ಲಿ ರಾಜಕೀಯ ಚಟುವಟಿಕೆ ನೀರಸವಾಗಿದೆ. ಬಹುವರ್ಷಗಳಿಂದ ಪೂರ್ವದ ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಯ ಸುತ್ತ ಪ್ರಾಂತೀಯ ಸ್ವಾಯತ್ತತೆಯ ಪ್ರಶ್ನೆಗಳಿದ್ದಾಗ್ಯೂ, ನಾಗಾಲ್ಯಾಂಡ್ ಕೊಡು-ಕೊಳ್ಳುವ ರಾಜಕಾರಣದ ಒಂದು ವಿಶಿಷ್ಟ ಸಮತೋಲನವನ್ನು ಸಾಧಿಸಿದಂತಿದೆ. ಬಿಜೆಪಿ ಮತ್ತು ಅದರ ಪ್ರಾದೇಶಿಕ ಮಿತ್ರಪಕ್ಷ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿ (ಎನ್ಡಿಪಿಪಿ), ೨೦೧೮ರ ಸೀಟು ಹಂಚಿಕೆ ಸೂತ್ರವನ್ನು ಮುಂದುವರೆಸುತ್ತಾ ಕ್ರಮವಾಗಿ ೨೦ ಮತ್ತು ೪೦ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಉಗ್ರಗಾಮಿ ಗುಂಪುಗಳೊಂದಿಗೆ, ವಿಶೇಷವಾಗಿ ಎನ್.ಎಸ್.ಸಿ.ಎನ್. (ಐಸಾಕ್-ಮುಯಿವಾ) ಗುಂಪಿನೊಂದಿಗೆ, ಒಪ್ಪಂದ ಮಾಡಿಕೊಂಡು “ಇಂಡೋ-ನಾಗಾ” ರಾಜಕೀಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು “ಯುನೈಟೆಡ್ ಪುಶ್” ಹೆಸರಿನಲ್ಲಿ ಪ್ರತಿಪಕ್ಷ ನಾಗಾ ಪೀಪಲ್ಸ್ ಫ್ರಂಟ್ (ಎನ್.ಪಿ.ಎಫ್) ೨೦೨೧ರ ಆಗಸ್ಟ್ನಲ್ಲಿ ಎನ್ಡಿಪಿಪಿ-ಬಿಜೆಪಿ ಸರ್ಕಾರವನ್ನು ಸೇರಿಕೊಂಡಿತು. ಮತದಾರರು, ಪಕ್ಷಗಳು ಮತ್ತು ಇತರ ಗುಂಪುಗಳು ನಿಜದಲ್ಲಿ ಪ್ರತಿಪಕ್ಷವೇ ಇಲ್ಲದ ಈ ರಾಜಕೀಯ ವ್ಯವಸ್ಥೆಯನ್ನು ಒಪ್ಪಿದ್ದಾರೆನಿಸುತ್ತದೆ. ಎನ್.ಪಿ.ಎಫ್.ನ ೨೫ ಶಾಸಕರಲ್ಲಿ ೨೧ ಮಂದಿ ಏಪ್ರಿಲ್ ೨೦೨೨ರಲ್ಲಿ ಎನ್ಡಿಪಿಪಿಯಲ್ಲಿ ವಿಲೀನಗೊಂಡರು. ಆದರೆ ಅವರಲ್ಲಿ ಹೆಚ್ಚಿನವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ. ಅದರಲ್ಲಿ ಒಬ್ಬರು ಬಿಜೆಪಿಗೆ ಹಾರಿ ಅಲ್ಲಿ ಅಭ್ಯರ್ಥಿಯಾಗಿದ್ದಾರೆ. ೨೦೧೮ರಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ೨೪ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಒಮ್ಮೆ ಪ್ರಬಲವಾಗಿದ್ದ ಎನ್.ಪಿ.ಎಫ್. ೨೨ ಅಭ್ಯರ್ಥಿಗಳನ್ನಷ್ಟೇ ನಿಲ್ಲಿಸುತ್ತಿದೆ.
೨೦ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯದ ಪೂರ್ವ ಭಾಗದ ಆರು ಜಿಲ್ಲೆಗಳಾದ್ಯಂತ, ಪ್ರತ್ಯೇಕ ಫ್ರಾಂಟಿಯರ್ ನಾಗಾಲ್ಯಾಂಡ್ ರಾಜ್ಯಕ್ಕಾಗಿ ಹೋರಾಡುತ್ತಿರುವ ಸಂಘಟನೆಯು ಚುನಾವಣಾ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಂಡರೂ, ಪ್ರತ್ಯೇಕ ರಾಜ್ಯದ ಕೂಗು ಗಟ್ಟಿಯಾಗಿಯೇ ಇದೆ. ೨೦೦೩ರ ನಂತರದ ಎಲ್ಲ ಚುನಾವಣೆಗಳಂತೆ ಈ ಬಾರಿಯೂ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಉಗ್ರಗಾಮಿ ಗುಂಪುಗಳೊಂದಿಗಿನ ಶಾಂತಿ ಪ್ರಕ್ರಿಯೆ. ನಾಗಾಲ್ಯಾಂಡ್ನ ರಾಜಕೀಯದಲ್ಲಿ ಸಿದ್ಧಾಂತಕ್ಕೆ ಮೊದಲಿಂದಲೂ ಸೀಮಿತ ಪಾತ್ರ. ವ್ಯಕ್ತಿಗಳ ಸುತ್ತ ಮತ್ತು ದೆಹಲಿಯ ಆಳುವ ಸರ್ಕಾರಕ್ಕೆ ಅವರ ಸಾಮೀಪ್ಯದ ಸುತ್ತಲೇ ಚುನಾವಣೆಗಳು ನಡೆಯುತ್ತವೆ. ರಾಜ್ಯದ ರಾಜಕೀಯ ಆರ್ಥಿಕತೆಯ ಅಡಿಪಾಯವಾಗಿರುವ ಕೇಂದ್ರ ಸರ್ಕಾರದ ನಿಧಿಗಳ ಸುತ್ತಲೇ ಎಲ್ಲ ಚುನಾವಣಾ ಲೆಕ್ಕಾಚಾರಗಳೂ ಗಿರಕಿ ಹೊಡೆಯುತ್ತವೆ. ಬಿಜೆಪಿ-ಎನ್ಡಿಪಿಪಿ ಮೈತ್ರಿಕೂಟವು ೨೦೧೮ರ ಚುನಾವಣೆಯನ್ನು ಸ್ವಾಯತ್ತತೆಯ ಪ್ರಶ್ನೆಯ ‘ಪರಿಹಾರಕ್ಕಾಗಿ ಚುನಾವಣೆ’ ಎಂದು ಬಿಂಬಿಸಿತ್ತು. ಕೇಂದ್ರವು ಆಗಸ್ಟ್ ೨೦೧೫ ರಲ್ಲಿ ಎನ್.ಎಸ್.ಸಿ.ಎನ್. (ಐಸಾಕ್-ಮುಯಿವಾ) ದೊಂದಿಗೆ ಫ್ರೇಮ್ವರ್ಕ್ ಒಪ್ಪಂದಕ್ಕೆ ಸಹಿ ಹಾಕಿತು. ನವೆಂಬರ್ ೨೦೧೭ರಲ್ಲಿ ಶಾಂತಿ ಮಾತುಕತೆಯಲ್ಲಿ ಸೇರಿಕೊಂಡ ಏಳು ಸಂಘಟನೆಗಳ ಒಕ್ಕೂಟವಾದ ನಾಗಾ ರಾಷ್ಟ್ರೀಯ ರಾಜಕೀಯ ಗುಂಪುಗಳೊಂದಿಗೆ ಸಹ ಒಪ್ಪಂದ ಮಾಡಿಕೊಂಡಿತು. ಆದರೆ ಇದು ಬಹುದಿನ ಉಳಿಯಲಿಲ್ಲ. ಪ್ರತ್ಯೇಕ ನಾಗಾ ಧ್ವಜ ಮತ್ತು ನಾಗಾ ಸಂವಿಧಾನದ ವಿಷಯವಾಗಿ ಸಮಸ್ಯೆ ತಲೆದೋರಿದೆ. ಬಿಜೆಪಿ ನಾಗಗಳಿಗೆ ನಂಬಿಕೆ ದ್ರೋಹ ಮಾಡಿದೆ ಎಂದು ಆಪಾದಿಸುತ್ತಿರುವ ಉಗ್ರಗಾಮಿ ಗುಂಪುಗಳು ಮತದಾನಕ್ಕೂ ಮುನ್ನ ರಾಜಕೀಯ ಪರಿಷ್ಕಾರಕ್ಕೆ ಆಗ್ರಹಿಸಿವೆ. ಹೊಸ ಸರ್ಕಾರಕ್ಕೆ ಹಲವು ಸಮಸ್ಯೆಗಳು ಎದುರಾಗಲಿವೆ.
This editorial has been translated from English, which can be read here.