ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಇತ್ತೀಚಿನ ಆಯವ್ಯಯವು ೨೦೭೦ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲದ ಹೊರಸೂಸುವಿಕೆಯತ್ತ ಸಾಗುವ ಸರ್ಕಾರದ ಬದ್ಧತೆಗೆ ಒತ್ತು ನೀಡಿರುವುದು ಗಮನಾರ್ಹವಾಗಿದೆ. ವೇಗವಾಗಿ ಬೆಳೆಯುತ್ತಿರುವ ಭಾರತದ ಇಂಧನ ಅವಶ್ಯಕತೆಗಳ ಹಿನ್ನೆಲೆಯಲ್ಲಿ, ಜಾಗತಿಕ ಹವಾಮಾನ ಬದಲಾವಣೆಯನ್ನು ತಡೆಯುವ ಗುರಿಗಳನ್ನು ಸಾಧಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬೇಕು ಎಂದು ಕಳೆದ ತಿಂಗಳು ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಮಂಡಿಸಿದ ಒಂದು ಲೇಖನದಲ್ಲಿ ವಾದಿಸಲಾಗಿದೆ. ದೇಶದ ಜನಸಂಖ್ಯೆಯು ಈ ವರ್ಷ ಚೀನಾವನ್ನು ಹಿಂದಿಕ್ಕುವುದರಲ್ಲಿದ್ದು, ಆರ್ಥಿಕತೆಯ ದಾಪುಗಾಲಿಗೆ ಇಂಧನದ ಅವಶ್ಯಕತೆ ಘಾತೀಯವಾಗಿ ಏರಲಿದೆ. ಆದ್ದರಿಂದ ಪಳೆಯುಳಿಕೆ ಇಂಧನಗಳ ಮೇಲಿನ ಪ್ರಸ್ತುತ ಅತಿ ಅವಲಂಬನೆಯಿಂದ ಹಸಿರು ಪರ್ಯಾಯಗಳಿಗೆ ಹೊರಳುವುದು ಅನಿವಾರ್ಯವಾಗಿದೆ. ಇದು ಹೊಸ ಕೈಗಾರಿಕೆಗಳನ್ನು ಉತ್ತೇಜಿಸಲು ಮತ್ತು ಅದರ ಮೂಲಕ ಗಣನೀಯ ಪ್ರಮಾಣದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಒಟ್ಟಾರೆ ಆರ್ಥಿಕ ಉತ್ಪಾದನೆಯನ್ನು ಹೆಚ್ಚಿಸಲು ಕೂಡ ಉತ್ತಮ ಅವಕಾಶ. ಇದನ್ನು ಒಪ್ಪಿಯೇ, ೨೦೨೩-೨೪ರ ಆಯವ್ಯಯವು ಅಗತ್ಯವಾಗಿರುವ ಹಸಿರು ಕೈಗಾರಿಕಾ ಮತ್ತು ಆರ್ಥಿಕ ಪರಿವರ್ತನೆಗೆ ಸಾಕಷ್ಟು ಗಮನ ನೀಡಿದೆ. ಎಲೆಕ್ಟ್ರಿಕ್ ವೆಹಿಕಲ್ (ಇವಿ) ಕ್ರಾಂತಿಯೊಂದಿಗೆ ಇಲ್ಲಿನ ಹೆಚ್ಚಿದ ಬೇಡಿಕೆ ಪೂರೈಸಲು ಎಲ್ಲ ಪ್ರಮುಖ ಆಟೋಮೊಬೈಲ್ ಕಂಪೆನಿಗಳು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಈ ಇವಿ ಗಾಡಿಗಳ ದರವನ್ನು ತಗ್ಗಿಸಲು ಸ್ಥಳೀಯವಾಗಿ ಉತ್ಪಾದಿಸಲಾದ ಲಿಥಿಯಂ-ಐಯಾನ್ ಬ್ಯಾಟರಿಗಳ ಲಭ್ಯತೆಯು ಅವಶ್ಯಕವಾಗಿದೆ. ಇವಿ ಬ್ಯಾಟರಿಗಳಲ್ಲಿ ಬಳಸುವ ಲಿಥಿಯಂ-ಐಯಾನ್ ಸೆಲ್ಗಳನ್ನು ತಯಾರಿಸಲು ಅಗತ್ಯವಿರುವ ಮೂಲ ಸರಕುಗಳು ಮತ್ತು ಯಂತ್ರೋಪಕರಣಗಳ ಆಮದನ್ನು ಆಯವ್ಯಯವು ಸುಂಕ ರಹಿತಗೊಳಿಸಿದೆ. ಇವಿ ಬ್ಯಾಟರಿ ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸುತ್ತಿರುವ ಸ್ಥಳೀಯ ಕಂಪನಿಗಳಿಗೆ ಇದು ಪೂರಕ.
ಮತ್ತೊಂದು ಪ್ರಮುಖ ಪ್ರಸ್ತಾವನೆಯು ೪,೦೦೦ MWh ಸಾಮರ್ಥ್ಯದ ಶಕ್ತಿ ಶೇಖರಣಾ ಬ್ಯಾಟರಿಗಳನ್ನು ನಿರ್ಮಿಸಲು ಸಹಾಯವಾಗಿ ಕಾರ್ಯಸಾಧ್ಯತೆಯ ಅಂತರ್ನಿಧಿಯ (Viability Gap Fund) ಸ್ಥಾಪನೆ. ಭಾರತವು ಸೌರ ಮತ್ತು ಗಾಳಿ ಸೇರಿದಂತೆ ವಿದ್ಯುತ್ ಉತ್ಪಾದನೆಯ ಪರ್ಯಾಯ ಮೂಲಗಳ ಮೇಲೆ ತನ್ನ ಅವಲಂಬನೆಯನ್ನು ಹೆಚ್ಚಿಸುತ್ತಿರುವ ಈ ಹೊತ್ತಿನಲ್ಲಿ ಪವರ್ ಗ್ರಿಡ್ ಸ್ಥಿರೀಕರಣದಲ್ಲಿ ಶಕ್ತಿ ಶೇಖರಣಾ ವ್ಯವಸ್ಥೆಗಳ ಪಾತ್ರ ನಿರ್ಣಾಯಕವಾಗಿದೆ. ವಿಂಡ್ ಟರ್ಬೈನ್ ಫಾರ್ಮ್ಗಳು ಮತ್ತು ಸೌರ ವಿದ್ಯುಜ್ಜನಕ ಯೋಜನೆಗಳು ನಿಯಮಿತವಾಗಿ ಸಮಪ್ರಮಾಣದ ವಿದ್ಯುತ್ ಉತ್ಪಾದಿಸುವುದಿಲ್ಲ. ಬ್ಯಾಟರಿ ಶೇಖರಣಾ ವ್ಯವಸ್ಥೆಗಳು ಈ ಉತ್ಪಾದಕರು ತಮ್ಮ ಗರಿಷ್ಟ ಮಟ್ಟದಲ್ಲಿ ಉತ್ಪಾದಿಸುವ ವಿದ್ಯುಚ್ಛಕ್ತಿಯನ್ನು ಶೇಖರಿಸಿ ಅದನ್ನು ಗೃಹ ಅಥವಾ ಕೈಗಾರಿಕಾ ಗ್ರಾಹಕರಿಂದ ಗ್ರಿಡ್ಗೆ ಬರುವ ಬೇಡಿಕೆಯನ್ನು ಹೊಂದಿಸಿ ಸರಬರಾಜು ಮಾಡಲು ಅನುವು ಮಾಡಿಕೊಡುತ್ತವೆ. ಶ್ರೀಮತಿ ಸೀತಾರಾಮನ್ ಅವರು ಲಡಾಖ್ನಿಂದ ೧೩ GW ನವೀಕರಿಸಬಹುದಾದ ಶಕ್ತಿಯ ಪ್ರಸರಣ ಮತ್ತು ಗ್ರಿಡ್ ಏಕೀಕರಣಕ್ಕಾಗಿ ಅಂತರ-ರಾಜ್ಯ ಪ್ರಸರಣ ವ್ಯವಸ್ಥೆಯನ್ನು ನಿರ್ಮಿಸಲು ₹೨೦೭೦೦ ಕೋಟಿ ವೆಚ್ಚದ ಯೋಜನೆಗೆ ₹೮೩೦೦ ಕೋಟಿಗಳನ್ನು ಮೀಸಲಿತ್ತಿದ್ದಾರೆ. ವಿಶಾಲವಾದ ಬಂಜರು ಭೂಮಿ ಮತ್ತು ದೇಶದ ಅತಿ ತೀಕ್ಷ್ಣ ಸೂರ್ಯನ ಬೆಳಕಿನ ಲಭ್ಯತೆ ಇರುವುದರಿಂದ, ಸೌರ ವಿದ್ಯುಜ್ಜನಕ ಯೋಜನೆಗಳನ್ನು ಸ್ಥಾಪಿಸಲು ಲಡಾಖ್ ಸೂಕ್ತ ಸ್ಥಳವೆಂದು ಪರಿಗಣಿಸಲಾಗಿದೆ. ಈ ದುರ್ಗಮ ಪ್ರಾಂತ್ಯವು ದೇಶದ ಮುಖ್ಯ ವಿದ್ಯುತ್ ಗ್ರಿಡ್ನಿಂದ ಅನತಿ ದೂರದಲ್ಲಿರುವುದರಿಂದ ಇಲ್ಲಿ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸಲು ಇದ್ದ ಅಡಚಣೆಯನ್ನು ಈ ನೂತನ ಪ್ರಸರಣ ಮಾರ್ಗವು ಪರಿಹರಿಸುತ್ತದೆ.
This editorial has been translated from English, which can be read here.