ಖೈದಿಗಳನ್ನು ಗಲ್ಲಿಗೇರಿಸುವುದನ್ನು ಕ್ರೂರ ಅಥವಾ ಅನಾಗರಿಕ ಎಂದು ಕರೆಯಲಾಗುವುದಿಲ್ಲ ಎಂದು ತೀರ್ಪು ನೀಡಿದ ನಲವತ್ತು ವರ್ಷಗಳ ನಂತರ ಭಾರತದ ಸರ್ವೋಚ್ಚ ನ್ಯಾಯಾಲಯ ಈಗ ಮರಣದಂಡನೆ ಜಾರಿಗೊಳಿಸಲು ಹೆಚ್ಚು ಘನತೆ ಮತ್ತು ಕಡಿಮೆ ನೋವಿನ ವಿಧಾನವಿದೆಯೇ ಎಂಬ ಪ್ರಶ್ನೆ ಎತ್ತಿದೆ. ಕಡಿಮೆ ಕ್ರೌರ್ಯದ ಮತ್ತು ಕಡಿಮೆ ನೋವಿನ ಪರ್ಯಾಯ ವಿಧಾನದ ಹುಡುಕಾಟವು ಮರಣದಂಡನೆಯನ್ನು ರದ್ದುಗೊಳಿಸಬೇಕೆ ಬೇಡವೇ ಎಂಬ ವ್ಯಾಪಕ ಚರ್ಚೆಯ ಭಾಗವೇ ಆಗಿದೆ. ಇದುವರೆಗೂ ನ್ಯಾಯಾಂಗ ಮತ್ತು ಆಡಳಿತಾತ್ಮಕ ಚಿಂತನೆಯು ಮರಣದಂಡನೆ ಮತ್ತು ಗಲ್ಲಿಗೇರಿಸುವುದು ಎರಡನ್ನೂ ಬೆಂಬಲಿಸಿದೆ. ಮರಣದಂಡನೆಯನ್ನು ಅಮಲು ಮಾಡಲು ಗಲ್ಲಿಗೇರಿಸುವುದಕ್ಕಿಂತ ಹೆಚ್ಚು ಮಾನವೀಯ ವಿಧಾನ ಇದೆ ಎಂಬ ವಾದವನ್ನು ಪುಷ್ಟೀಕರಿಸಲು ಸುಪ್ರೀಂ ಕೋರ್ಟ್ ಪೀಠವು ತಾಜಾ ಸಾಕ್ಷ್ಯ ಕೇಳಿದೆ. ಈ ವಿಷಯದ ಕುರಿತು ಎರಡು ಪ್ರಮುಖ ತೀರ್ಪುಗಳಿವೆ. ಬಚನ್ ಸಿಂಗ್ vs ಸ್ಟೇಟ್ ಆಫ್ ಪಂಜಾಬ್ (೧೯೮೦) ತೀರ್ಪು ಮರಣದಂಡನೆಯನ್ನು ಎತ್ತಿಹಿಡಿಯುತ್ತಾ ಅದನ್ನು “ಅಪರೂಪದಲ್ಲಿ ಅಪರೂಪದ ಪ್ರಕರಣಗಳಿಗೆ” ಸೀಮಿತಗೊಳಿಸಿತು. ದೀನ ದಯಾಳ್ vs ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು (೧೯೮೩) ಪ್ರಕರಣದಲ್ಲಿ ಗಲ್ಲಿಗೇರಿಸುವುದನ್ನು “ಸಾಧ್ಯವಾದಷ್ಟು ನೋವುರಹಿತ” ಮತ್ತು “ಈವರೆಗೂ ತಿಳಿದಿರುವ ಯಾವುದೇ ವಿಧಾನಕ್ಕಿಂತ ಕಡಿಮೆ ನೋವುಂಟುಮಾಡುವ ವಿಧಾನ” ಅನುಸರಿಸಬೇಕು ಎಂದು ತೀರ್ಪು ನೀಡುವ ಮೂಲಕ ಗಲ್ಲಿಗೇರಿಸುವುದನ್ನು ಎತ್ತಿಹಿಡಿಯಿತು. ಕಾನೂನು ಆಯೋಗದ (೧೯೬೭) ೩೫ನೇ ವರದಿಯು ವಿದ್ಯುದಾಘಾತ, ಗ್ಯಾಸ್ ಚೇಂಬರ್ ಬಳಕೆ ಮತ್ತು ಮಾರಣಾಂತಿಕ ಚುಚ್ಚುಮದ್ದು ಕಡಿಮೆ ನೋವಿನಿಂದ ಕೂಡಿದೆ ಎಂದು ಕೆಲವರು ಪರಿಗಣಿಸಿದ್ದರೂ ಆ ಕುರಿತು ತಾನು ಯಾವುದೇ ತೀರ್ಮಾನಕ್ಕೆ ಬರುವ ಸ್ಥಿತಿಯಲ್ಲಿಲ್ಲ ಎಂದು ಟಿಪ್ಪಣಿ ಬರೆದು ಯಾವುದೇ ಬದಲಾವಣೆಯನ್ನು ಶಿಫಾರಸ್ಸು ಮಾಡಲಿಲ್ಲ.
ಸರ್ವೋಚ್ಚ ನ್ಯಾಯಾಲಯವು ಮರಣದಂಡನೆಯ ಸಂಪೂರ್ಣ ರದ್ದತಿಗೆ ಒಲವು ತೋರದಿದ್ದರೂ ಅದನ್ನು ಬೇಕಾಬಿಟ್ಟಿಯಾಗಿ ಅಮಲು ಮಾಡಲು ಕಷ್ಟವಾಗುವಂತೆ ದೃಢವಾದ ಮತ್ತು ಮಾನವೀಯ ನ್ಯಾಯಶಾಸ್ತ್ರವನ್ನು ರೂಪಿಸಿದೆ. ಸುಪ್ರೀಂ ಕೋರ್ಟ್ ಮರಣದಂಡನೆಯನ್ನು “ಅಪರೂಪದಲ್ಲಿ ಅಪರೂಪದ ಪ್ರಕರಣಗಳಿಗೆ” ಮಾತ್ರ ನಿರ್ಬಂಧಿಸಿದೆ. ಇಡೀ ಪ್ರಕ್ರಿಯೆಯಲ್ಲಿ ಹಲವಾರು ಅಡೆ -ತಡೆಗಳನ್ನು ನಿರ್ಮಿಸಿ ಸಮತೋಲನ ಸಾಧಿಸಲು ಪ್ರಯತ್ನಿಸಿದೆ ಮತ್ತು ಮೇಲ್ಮನವಿಯ ನಂತರದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮುಕ್ತ ನ್ಯಾಯಾಲಯದಲ್ಲಿ ನಡೆಸಲು ಅನುಮತಿಸಿದೆ. ಕ್ಷಮಾದಾನ ಅರ್ಜಿಗಳ ಮೇಲಿನ ನಿರ್ಧಾರವನ್ನೂ ನ್ಯಾಯಾಲಯ ತನ್ನ ಅವಲೋಕನೆಗೆ ಒಳಪಡಿಸಿದೆ ಮತ್ತು ಈ ಅರ್ಜಿಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬವನ್ನು ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವ ಮೂಲಕ ದಂಡಿಸುತ್ತದೆ. ಈಗ ನ್ಯಾಯಾಲಯದ ಮುಂದಿರುವ ಪ್ರಶ್ನೆ ಇಡೀ ಮರಣದಂಡನೆಯ ಪ್ರಕ್ರಿಯೆಯನ್ನು ಮತ್ತಷ್ಟು ಮಾನವೀಯಗೊಳಿಸಲು ಮತ್ತೊಂದು ಅವಕಾಶ ಒದಗಿಸುತ್ತದೆ. ಪ್ರಾಯೋಗಿಕ ಪುರಾವೆಗಳು ಗಲ್ಲಿಗೇರಿಸುವುದು ತ್ವರಿತ ಅಥವಾ ನೋವಿನ ಸಾವಿಗೆ ಕಾರಣವಾಗುತ್ತದೆ ಎಂದೇನೂ ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ವಿದ್ಯುದಾಘಾತ ಮತ್ತು ಮಾರಣಾಂತಿಕ ಚುಚ್ಚುಮದ್ದು ನೀಡುವುದೂ ಸಹ ಕ್ರೌರ್ಯರಹಿತವಲ್ಲ. ಕೇಂದ್ರ ಸರ್ಕಾರವು ನೇಣಿಗೇರಿಸುವುದು ಇರುವುದರಲ್ಲಿ ಅತ್ಯಂತ ಕಡಿಮೆ ಬಾರಿ ವಿಫಲವಾಗಿರುವ ಮರಣದಂಡನೆಯ ವಿಧಾನವಾಗಿದ್ದು ಅದು ಕ್ರೂರವೂ ಅಲ್ಲ ಅಮಾನವೀಯವೂ ಅಲ್ಲವಾದ್ದರಿಂದ ಅದನ್ನೇ ಮುಂದುವರೆಸಬೇಕು ಎಂದು ವಾದಿಸಿದೆ. ಆದರೆ ಯಾವುದೇ ರೀತಿಯ ಮರಣದಂಡನೆಯು ಮಾನವೀಯತೆಯ ಪತನವೇ ಆಗಿದೆ. ಅದು ಕ್ರೌರ್ಯವಾಗಿದ್ದು ಮಾನವ ಘನತೆಗೆ ಕುಂದು ತರುತ್ತದೆ ಎಂಬುದು ಸತ್ಯ. ಮರಣದಂಡನೆಯನ್ನು ಅಮಲು ಮಾಡುವ ವಿಧಾನವನ್ನು ಚರ್ಚಿಸುವುದು ಒಂದು ಹತ್ಯೆಗೆ ಮರಣದಂಡನೆಯು ಉತ್ತಮ ಪ್ರತಿಕ್ರಿಯೆಯೇ ಎಂಬ ನೈತಿಕ ಸಂದಿಗ್ಧತೆಯನ್ನು ಇನ್ನಷ್ಟು ಆಳವಾಗಿಸುತ್ತದೆ. ಕ್ರೌರ್ಯ ತೊಡೆದು ಹಾಕಿ ಮಾನವೀಯ ಘನತೆಯನ್ನು ಎತ್ತಿ ಹಿಡಿಯುವುದೇ ಗುರಿಯಾಗಿದ್ದರೆ ಮರಣದಂಡನೆಯನ್ನು ಸಂಪೂರ್ಣ ರದ್ದುಗೊಳಿಸುವುದೇ ಉತ್ತರವಾಗಿದೆ.
This editorial has been translated from English, which can be read here.