ಈ ತಿಂಗಳು ತಮಿಳುನಾಡಿನಲ್ಲಿ ಪ್ರಕ್ಷುಬ್ಧತೆಯ ಕಾಲ. ಎರಡು ವಾರಗಳ ಹಿಂದೆ ರಾಜ್ಯದ ಕರಾವಳಿಗೆ ಅಪ್ಪಳಿಸಿದ ಮೈಚಾಂಗ್ ಚಂಡಮಾರುತದಿಂದ ರಾಜ್ಯದ ಉತ್ತರ ಭಾಗಗಳು, ಚೆನ್ನೈ ಮತ್ತು ನೆರೆಯ ಜಿಲ್ಲೆಗಳು ಚೇತರಿಸಿಕೊಳ್ಳುತ್ತಿರುವಾಗಲೇ, ದಕ್ಷಿಣ ಭಾಗಗಳು, ವಿಶೇಷವಾಗಿ ತೂತುಕುಡಿ, ತಿರುನಲ್ವೇಲಿ, ತೆಂಕಾಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳು, ಮೊನ್ನೆ ಭಾನುವಾರ ಭೀಕರ ಮಳೆಯಿಂದ ಜರ್ಝರಿತವಾಗಿವೆ. ಮೇಲಿನ ಗಾಳಿಯ ಪ್ರಸರಣದಿಂದ ಇಷ್ಟು ಮಳೆಯಾಗಿದೆ ಎಂದು ಹೇಳಲಾಗಿದೆ. ೩೯ ಸ್ಥಳಗಳಲ್ಲಿ “ಅತ್ಯಂತ ಭಾರೀ ಮಳೆ” (೨೪ ಘಂಟೆಗಳಲ್ಲಿ ೨೧ ಸೆಂಟಿಮೀಟರಿಗಿಂತ ಹೆಚ್ಚಿನ ಮಳೆ) ದಾಖಲಾಗಿದೆ. ಇದೇ ಅವಧಿಯಲ್ಲಿ ತೂತುಕುಡಿಯ ಕಾಯಲ್ಪಟ್ಟಿಣಂನಲ್ಲಿ ಬರೋಬ್ಬರಿ ೯೫ ಸೆಂ.ಮೀ. ಮತ್ತು ಇತರ ಎಂಟು ಸ್ಥಳಗಳಲ್ಲಿ ೫೦ ಸೆಂ.ಮೀ. ಮಳೆ ದಾಖಲಾಗಿದೆ. ಇದನ್ನು ವಿಜ್ಞಾನಿಗಳು ಈಶಾನ್ಯ ಮುಂಗಾರಿನ ಒಂದು ವಿಲಕ್ಷಣ ಘಟನೆ ಎಂದು ಕರೆದಿದ್ದಾರೆ. ಸುಮಾರು ನಾಲ್ಕು ಮಿಲಿಯನ್ ಜನ “ಅತ್ಯಂತ ಕೆಟ್ಟದಾಗಿ ಬಾಧಿತರಾಗಿದ್ದಾರೆ” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ತಾಮಿರಪರಣಿ ನದಿ ಒಂದು ಸೆಕೆಂಡಿಗೆ ೧.೫ ಲಕ್ಷ ಕ್ಯೂಸೆಕ್ಸ್ ಹರಿವು ಕಂಡಿದೆ. ಇದು ಕೂಡಾ ಅಪರೂಪ. ಪ್ರಾಣ ನಷ್ಟದ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲವಾದರೂ ಅದು ಕಡಿಮೆಯೇ ಇರಲಿದೆ. ತಿರುಚೆಂದೂರಿನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಸುಮಾರು ೮೦೦ ಪ್ರಯಾಣಿಕರಿದ್ದ ರೈಲನ್ನು ಶ್ರೀವೈಕುಂಟಂ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಆರಂಭಿಕ ವರದಿಗಳ ಪ್ರಕಾರ ಮೂಲಭೂತ ಸೌಕರ್ಯಗಳು - ರಸ್ತೆಗಳು, ರೈಲು ಮಾರ್ಗಗಳು, ಕಾಲುವೆಗಳು, ಟ್ಯಾಂಕ್ಗಳು ಮತ್ತು ವಿದ್ಯುತ್ ಕಂಬಗಳು ಮತ್ತು ಅನೇಕ ಮನೆಗಳು - ತೀವ್ರ ಹೊಡೆತ ತಿಂದಿವೆ. ಹಲವಾರು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದರೆ, ರಾಜ್ಯಪಾಲ ಆರ್.ಎನ್. ರವಿ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಇಲಾಖೆಗಳ ಮುಖ್ಯಸ್ಥರ ಸಭೆ ಕರೆದರು.
ಈ ಘಟನೆ ಮತ್ತೆ ಹವಾಮಾನ ಮುನ್ಸೂಚನೆ ಮತ್ತು ಸನ್ನದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಳೆಯ ಅಗಾಧತೆಯು ರಾಜ್ಯವನ್ನು ಆಶ್ಚರ್ಯಗೊಳಿಸಿದೆ. ಹವಾಮಾನ ಇಲಾಖೆಯು ಅದರ ಪ್ರಮಾಣ ಮತ್ತು ವ್ಯಾಪ್ತಿಯ ಯಾವುದೇ ಸೂಚನೆಯನ್ನು ಏಕೆ ನೀಡಲಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಆದರೆ ಇಲಾಖೆಯು ಡಿಸೆಂಬರ್ ೧೪ ರಿಂದ ಮೂರು ದಿನಗಳ ಕಾಲ “ಅತಿ ಭಾರೀ ಮತ್ತು ಅತ್ಯಂತ ಭಾರೀ” ಮಳೆಯ ಎಚ್ಚರಿಕೆ ನೀಡಿದ್ದಾಗಿ ಹೇಳಿದೆ. ದೇಶದ ಹವಾಮಾನ ಮುನ್ಸೂಚನಾ ವ್ಯವಸ್ಥೆಯು ನಿಖರ ಸ್ಥಳಗಳಲ್ಲಿ ಎಷ್ಟು ಪ್ರಮಾಣದ ಮಳೆ ಬರಬಹುದು ಎಂದು ಊಹಿಸಲು ಸಾಧ್ಯವಾಗುವ ಮಟ್ಟಿಗೆ ಪ್ರಗತಿ ಸಾಧಿಸಿಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದರೆ ವೈಜ್ಞಾನಿಕ ಸಮುದಾಯವು ನಿಖರ ಮುನ್ಸೂಚನೆಯ ಕಡೆಗೆ ಕೆಲಸ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸಂಧರ್ಭಗಳಲ್ಲಿ ಎಲ್ಲ ಇಲಾಖೆ ಮತ್ತು ಸಂಸ್ಥೆಗಳ ನಡುವೆ ನಿಕಟ ಸಮನ್ವಯದ ಅಗತ್ಯ ಇದೆ. ಉದಾಹರಣೆಗೆ, ಹವಾಮಾನ ಇಲಾಖೆ ಮತ್ತು ಭಾರತೀಯ ರೈಲ್ವೆ ಇಲಾಖೆಯ ನಡುವೆ ಉತ್ತಮ ಸಮನ್ವಯ ಇದ್ದಿದ್ದರೆ ತಿರುಚೆಂದೂರು ರೈಲು ಪ್ರಯಾಣ ಬೆಳೆಸುತ್ತಲೇ ಇರಲಿಲ್ಲ. ದಕ್ಷಿಣ ಜಿಲ್ಲೆಗಳಲ್ಲಿ ಮಳೆ ಬಂದ ನಂತರ ಮಾತ್ರ ಕೆಲವು ರೈಲು ಸೇವೆಗಳಿಗೆ ಬದಲಾವಣೆಗಳನ್ನು ಮಾಡಲಾಯಿತೇ ಹೊರತು, ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲ. ವಿವಿಧ ಇಲಾಖೆಗಳ ನಡುವೆ ಹೆಚ್ಚು ಸಮನ್ವಯ ಇದ್ದರೆ ಇಂತಹ ವಿಪತ್ತುಗಳ ದುಷ್ಪರಿಣಾಮಗಳನ್ನು ತಗ್ಗಿಸಬಹುದು.