ಚೆಸ್ ಒಲಿಂಪಿಯಾಡ್ನಲ್ಲಿ ದೊಡ್ಡ ಸಂಚಲನ ಉಂಟುಮಾಡಿದ ಒಂದು ವರ್ಷದ ನಂತರ ಡಿ. ಗುಕೇಶ್ ಮತ್ತೊಮ್ಮೆ ಗಮನ ಸೆಳದಿದ್ದಾರೆ. ಹದಿನೇಳು ವರ್ಷ ವಯಸ್ಸಿನ ಗುಕೇಶ್ ಅಜರ್ಬೈಜಾನ್ ರಾಜಧಾನಿ ಬಕುವಿನಲ್ಲಿ ನಡೆಯುತ್ತಿರುವ ಚೆಸ್ ವಿಶ್ವಕಪ್ ಸಂಧರ್ಭ ಗುರುವಾರ ಲೈವ್ ರೇಟಿಂಗ್ನಲ್ಲಿ ಭಾರತದ ನಂ. ೧ ಚೆಸ್ ಆಟಗಾರನ ಸ್ಥಾನಕ್ಕೇರಿದರು. ಪ್ರವೀಣ್ ತಿಪ್ಸಾಯಿ ಅವರನ್ನು ಸೋಲಿಸಿ ೧೯೮೬ರಲ್ಲಿ ಭಾರತದ ನಂ.೧ ಆಟಗಾರರಾದ ಬಳಿಕ ಕಳೆದ ೩೭ ವರ್ಷಗಳಿಂದ ವಿಶ್ವನಾಥನ್ ಆನಂದ್ ಅವರೇ ಭಾರತದ ನಂ. ೧ ಆಟಗಾರರಾಗಿದ್ದಾರೆ. ೨೦೧೬ರಲ್ಲಿ ಸ್ವಲ್ಪ ಕಾಲ ಮಾತ್ರ ಪಿ. ಹರಿಕೃಷ್ಣ ಹೀಗೆಯೇ ೫ ಬಾರಿ ವಿಶ್ವ ಚಾಂಪಿಯನ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ನಂ.೧ ಆಟಗಾರನಾಗಿದ್ದರು. ಗುಕೇಶ್ ಈಗ ಈ ಅಮೋಘ ಓಟವನ್ನು ಕೊನೆಗೊಳಿಸುವ ಹಂತದಲ್ಲಿದ್ದಾರೆ. ಇನ್ನೊಂದು ತಿಂಗಳಲ್ಲಿ ಬಿಡುಗಡೆಯಾಗಲಿರುವ ಮುಂದಿನ ಫೈಡ್ ರಾಂಕಿಂಗ್ ಪಟ್ಟಿಯಲ್ಲಿ ಇದು ಸಂಭವಿಸಬಹುದು. ಇದು ನಿಸ್ಸಂದೇಹವಾಗಿ ಗಮನಾರ್ಹ ಸಾಧನೆ ಮತ್ತು ಇದು ಗುಕೇಶ್ ಆವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದಷ್ಟೇ ಅಲ್ಲ ಅವರು ವಿಶ್ವದ ಅಗ್ರ ೧೦ ಆಟಗಾರರ ಪಟ್ಟಿಯೊಳಗೆ ಸ್ಥಾನ ಪಡೆಯಬಹುದಾಗಿದೆ. ಇದು ಬೇಧಿಸಲು ಅತ್ಯಂತ ಕಠಿಣವಾದ ಕೋಟೆಯಾಗಿದೆ. ಇನ್ನೂ ಮುಖ್ಯವಾದ ವಿಷಯವೆಂದರೆ ಗುಕೇಶ್ ಹದಿಹರೆಯದಲ್ಲೇ ಈ ಸಾಧನೆ ಮಾಡುತ್ತಿರುವುದು. ಹದಿನೈದು ದಿನಗಳ ಹಿಂದೆ ಗುಕೇಶ್ ೨೭೫೦ ಎಲೋ ಪಾಯಿಂಟುಗಳನ್ನು ಮುಟ್ಟಿದಾಗ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದರು.
ಆಗಸ್ಟ್ ೬ರ ಲೈವ್ ರೇಟಿಂಗ್ ಪ್ರಕಾರ, ಗುಕೇಶ್ ೨೭೫೬ ಅಂಕಗಳನ್ನು ಗಳಿಸಿದ್ದಾರೆ ಮತ್ತು ಆನಂದ್ (೨೭೫೪ ಅಂಕಗಳು) ಅವರಿಗಿಂತ ಒಂದು ಸ್ಥಾನ ಮೇಲೆ ವಿಶ್ವದ ನಂ. ೯ ರಾಂಕ್ ಹೊಂದಿದ್ದಾರೆ. ಆನಂದ್ ಅವರನ್ನು ಹೊರತುಪಡಿಸಿ ವಿಶ್ವದ ಅಗ್ರ ೧೦ ಆಟಗಾರರ ಪೈಕಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ ಹರಿಕೃಷ್ಣ (೨೦೧೬ರಲ್ಲಿ). ಮಹಿಳೆಯರಲ್ಲಿ ಕೋನೇರು ಹಂಪಿ ವಿಶ್ವ ನಂ.೪ ಮತ್ತು ದ್ರೋಣವಲ್ಲಿ ಹರಿಕಾ ನಂ. ೧೨ನೆ ಸ್ಥಾನದಲ್ಲಿದ್ದಾರೆ. ಆನಂದ್ ಆಗಮನದವರೆಗೆ ಭಾರತದಲ್ಲಿ ಒಂದೇ ಒಂದು ಗ್ರ್ಯಾಂಡ್ ಮಾಸ್ಟರ್ ಆಟಗಾರನಿರಲಿಲ್ಲ. ಅಂದಿನಿಂದ ಇಂದಿನವರೆಗೆ ಭಾರತ ಚೆಸ್ ಬೋರ್ಡಿನ ಮೇಲೆ ಸಾಕಷ್ಟು ದೂರ ಕ್ರಮಿಸಿದೆ. ಭಾರತೀಯ ಚೆಸ್ಸಿನ ಪ್ರಗತಿಯನ್ನು ಸೂಚಿಸುವ ಇನ್ನೂ ಕೆಲವು ಅಂಕಿಅಂಶಗಳಿವೆ: ಜೂನಿಯರ್ ಶ್ರೇಯಾಂಕ ಪಟ್ಟಿಯಲ್ಲಿ ವಿಶ್ವದ ಅಗ್ರ ಏಳರಲ್ಲಿ ನಾಲ್ವರು ಭಾರತೀಯರು, ಜೂನಿಯರ್ ಬಾಲಕಿಯರ ಪೈಕಿ ಟಾಪ್ ೧೦ರಲ್ಲಿ ಇಬ್ಬರು ಭಾರತೀಯರು. ಗುಕೇಶ್ ಅವರ ಅದ್ಭುತ ಸಾಧನೆಯು ಸಹಜವಾಗಿಯೇ ಭಾರತದ ಯುವ ಆಟಗಾರರಿಗೆ ಸ್ಫೂರ್ತಿಯಾಗಲಿದೆ. ಅರ್ಜುನ್ ಎರಿಗೈಸಿ, ಆರ್. ಪ್ರಗ್ನಾನಂದ ಮತ್ತು ನಿಹಾಲ್ ಸರಿನ್ ಅವರಂತಹ ಆಟಗಾರರು ಅಂತರಾಷ್ಟ್ರೀಯ ರಂಗದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸುತ್ತಿದ್ದಾರೆ ಮತ್ತು ಭಾರತೀಯ ಚೆಸ್ನ ಸುವರ್ಣ ಪೀಳಿಗೆಯ ಭಾಗವಾಗಿದ್ದಾರೆ. ಗುಕೇಶ್ ಅವರು ಈ ಯುವ ಆಟಗಾರರ ಗುಂಪನ್ನು ಮುನ್ನಡೆಸುತ್ತಿದ್ದಾರೆ ಮತ್ತು ಕೆಲವೇ ವರ್ಷಗಳಲ್ಲಿ ಅವರು ವಿಶ್ವ ಚಾಂಪಿಯನ್ ಪಟ್ಟಕ್ಕೆ ಗಂಭೀರ ಸವಾಲೊಡ್ಡಬಹುದು. ಆನಂದ್ ಅವರೇ ಗುಕೇಶ್ ಅವರಿಗೆ ಮಾರ್ಗದರ್ಶಕರಾಗಿರುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ. ಅಖಿಲ ಭಾರತ ಚೆಸ್ ಫೆಡರೇಶನ್ ಗುಕೇಶ್ ಅವರಂತಹ ಭಾರತದ ಆಟಗಾರರಿಗೆ ತವರಿನಲ್ಲಿ ಈಗಲಾದರೂ ಕೆಲವು ಪ್ರತಿಷ್ಠಿತ ಪಂದ್ಯಾವಳಿಗಳನ್ನು ಆಯೋಜಿಸಿದರೆ, ಆಟವು ದೇಶದಲ್ಲಿ ಇನ್ನಷ್ಟು ವೇಗವಾಗಿ ಬೆಳೆಯುತ್ತದೆ.