ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಾದ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳು ಪ್ರತಿ ವರ್ಷವೂ ತಮ್ಮ ವಾಯು ಗುಣಮಟ್ಟದಲ್ಲಿ ತೀವ್ರ ಕುಸಿತವನ್ನು ಎದುರಿಸುತ್ತವೆ. ಈ ಸಮಯಕ್ಕೆ ನೈರುತ್ಯ ಮುಂಗಾರು ಮುಗಿದಿರುತ್ತದೆ. ಅದರೊಂದಿಗೆ ಮೇಲಿನ ವಾತಾವರಣದಲ್ಲಿ ನಿರ್ಮಾಣ, ಚಾಲನೆ, ವಿದ್ಯುತ್ ಉತ್ಪಾದನೆ ಮತ್ತು ಕೃಷಿ ಅವಶೇಷಗಳ ಸುಡುವಿಕೆಯಂತಹ ಮಾನವಜನ್ಯ ಚಟುವಟಿಕೆಗಳಿಂದ ಉದ್ಭವಿಸುವ ಮಾಲಿನ್ಯಕಾರಕಗಳನ್ನು ತೆಗೆದುಹಾಕುವ ಡ್ರಾಫ್ಟುಗಳೂ ಸಹ ಇರುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ, ಬಿಕ್ಕಟ್ಟನ್ನು ಅಧ್ಯಯನ ಮಾಡಲು ಮತ್ತು ಪರಿಹರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಮಾಲಿನ್ಯಕಾರಕಗಳ ಕೊಡುಗೆ ಮತ್ತು ಪ್ರತಿಕೂಲ ಹವಾಮಾನದೆದುರು ಯಾವುದೇ ಕ್ರಮದ ಮಿತಿ ಮತ್ತು ಆರ್ಥಿಕ ಜೀವನಕ್ಕೆ ಇದು ಒಡ್ಡುವ ಅಡೆತಡೆಯ ಬಗ್ಗೆ ವಿಜ್ಞಾನ ಸ್ಪಷ್ಟವಾಗಿ ಹೇಳಿದೆ. ಇದರ ಪರಿಣಾಮವೆಂದರೆ ವಾಯುಮಾಲಿನ್ಯದ ಬಿಕ್ಕಟ್ಟು ಈಗ ಬಗೆಹರಿಯದ ಮಟ್ಟ ತಲುಪಿದೆ. ದೆಹಲಿ ಮತ್ತು ಪಕ್ಕದ ರಾಜ್ಯಗಳಲ್ಲಿ ವಾಯು ಮಾಲಿನ್ಯದ ಕಾರಣಗಳನ್ನು ಪರಿಹರಿಸುವ ಹೊಣೆ ಹೊಂದಿರುವ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಆಯೋಗದಲ್ಲಿ (ಸಿಎಕ್ಯುಎಂ) ಈಗ ಸಾಕಷ್ಟು ಪರಿಣಿತಿ ಇದೆ. ಆದರೆ ಅದರ ಅಧಿಕಾರವು ಹಲವು ಕ್ರಮಗಳನ್ನು ಶಿಫಾರಸು ಮಾಡಲಷ್ಟೆ ಸೀಮಿತವಾಗಿದೆ.
ಈ ವರ್ಷದ ಜನವರಿಯಿಂದ ಅಕ್ಟೋಬರ್ವರೆಗೆ ದೆಹಲಿಯ ದೈನಂದಿನ ಸರಾಸರಿ ಗಾಳಿಯ ಗುಣಮಟ್ಟವು ಕಳೆದ ಆರು ವರ್ಷಗಳಲ್ಲಿಯೆ ಅತ್ಯುತ್ತಮವಾಗಿದೆ ಎಂದು ಸಿಎಕ್ಯುಎಂ ಅಕ್ಟೋಬರ್ ೩೧ರಂದು ಹೇಳಿತು. ಆದರೆ ನವೆಂಬರ್ ತಿಂಗಳಲ್ಲಿ ಅಷ್ಟೇ ದಿನಗಳ ಕಾಲ ಗಾಳಿಯ ಗುಣಮಟ್ಟ ತೀವ್ರ ಮಟ್ಟಕ್ಕೆ (ಎಕ್ಯುಐ ೪೫೦ಕ್ಕೂ ಹೆಚ್ಚು) ಕುಸಿಯುತ್ತದೆ. ೨೦೨೨, ೨೦೨೧, ೨೦೨೦ ಮತ್ತು ೨೦೧೯ರಲ್ಲಿ ನವೆಂಬರ್ ಮೊದಲ ಹದಿನೈದು ದಿನಗಳಲ್ಲಿ ಮೂರು ದಿನಗಳ ಕಾಲ ಗಾಳಿಯ ಗುಣಮಟ್ಟ ತೀವ್ರ ವರ್ಗದಲ್ಲಿತ್ತು. ಮಾಲಿನ್ಯದ ಮೂಲಗಳನ್ನು ನಿಗ್ರಹಿಸಲು ಹೆಚ್ಚಿನ ಜಾಗೃತಿ ಮತ್ತು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯಕ್ಕೆ ನವೆಂಬರ್ ನಿರ್ಣಾಯಕ ತಿಂಗಳಾಗಿ ಹೊರಹೊಮ್ಮಿದೆ. ಇದು ಇನ್ನೂ ಪರಿಹಾರವಾಗಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕೃಷಿ ಅವಶೇಷಗಳನ್ನು ಸುಡುವ ಘಟನೆಗಳು ಸರಿಸುಮಾರು ಅರ್ಧದಷ್ಟಿದೆ. ಆದರೆ ಮುಂದಿನ ವಾರಗಳಲ್ಲಿ ಅಂತಹ ಹೆಚ್ಚಿನ ಚಟುವಟಿಕೆಯನ್ನು ನಿರೀಕ್ಷಿಸಬಹುದು. ನವೆಂಬರ್ ತಿಂಗಳ ಈ ಮಾಲಿನ್ಯದ ಸವಾಲನ್ನು ಎದುರಿಸಲು ಈ ಪ್ರಾಂತ್ಯದ ಹಲವು ರಾಜ್ಯಗಳು ಸೇರಿ ಏಕೀಕೃತ ವಿಧಾನ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಇದರರ್ಥ ವಾಹನ ಮಾಲಿನ್ಯ ಮತ್ತು ನಿರ್ಮಾಣ ಧೂಳಿನ ಸವಾಲುಗಳನ್ನು ಪರಿಹರಿಸುವುದು. ನೆರೆ ರಾಜ್ಯಗಳ ಕೃಷಿ ಅವಶೇಷಗಳನ್ನು ಸುಡುವ ರೂಢಿಯನ್ನು ದೂಷಿಸುತ್ತಾ ಕುಳಿತುಕೊಳ್ಳುವುದು ಸುಲಭ. ಆದರೆ ನವೆಂಬರ್ ತಿಂಗಳ ಮಾಲಿನ್ಯವನ್ನು ನಿಭಾಯಿಸಲು ಕಠಿಣ ಕ್ರಮಗಳ ಅಗತ್ಯ ಇದೆ. ಸಿಎಕ್ಯುಎಂನಂತಹ ಸಂಸ್ಥೆಗಳು ಈ ಸವಾಲನ್ನು ಎದುರಿಸಲು ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಹೆಚ್ಚಿನ ಸಮನ್ವಯ ಮೂಡಿಸಬೇಕು.