ಸಮಾಜದ ಯಾವುದೇ ವರ್ಗದ ಹಿತಾಸಕ್ತಿಗಳನ್ನು ಅನುಚಿತವಾಗಿ ಬಾಧಿಸದೆ ಹಲವು ವ್ಯತಿರಿಕ್ತ ಮತ್ತು ಸ್ಪರ್ಧಾತ್ಮಕ ಬೇಡಿಕೆಗಳನ್ನು ನಿರ್ವಹಿಸುವುದು ಆಡಳಿತದ ಪ್ರಮುಖ ಕರ್ತವ್ಯ. ಆದರೆ ಇಂದು ಕರ್ನಾಟಕದ ಆಡಳಿತಗಾರರು ಬಹುಸಂಖ್ಯಾತರ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ. ಇತರ ಹಿಂದುಳಿದ ವರ್ಗಗಳ (ಒಬಿಸಿ) ಪೈಕಿ ಮುಸ್ಲಿಮರಿಗೆ ಇದ್ದ ಶೇ. ೪ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಪ್ರಬಲವಾದ ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳಿಗೆ ಹೆಚ್ಚುವರಿಯಾಗಿ ತಲಾ ಶೇ. ೨ರಷ್ಟು ಮೀಸಲಾತಿ ಹಂಚುವ ಕರ್ನಾಟಕ ಸರ್ಕಾರದ ನಿರ್ಧಾರವು ಚುನಾವಣೆಯ ಹೊಸ್ತಿಲಲ್ಲಿ ಲಾಭ ಪಡೆಯಲು ಒಡೆದಾಳುವ ಜೂಜಾಗಿದೆ. ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಜಾರಿ ಮಾಡಲು ನಾಲ್ಕು ಉಪ-ವರ್ಗಗಗಳನ್ನೂ ಸಹ ರಚಿಸಲಾಗಿದೆ. ಮುಸ್ಲಿಮರಿಗೆ ಮೀಸಲಾತಿಯನ್ನು ರದ್ದುಗೊಳಿಸುವುದು ೨೦೧೫ರಲ್ಲಿ ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ಶೇ. ೫ರಷ್ಟು ಕೋಟಾವನ್ನು ರದ್ದುಗೊಳಿಸಿದ್ದನ್ನು ನೆನಪಿಸುತ್ತದೆ. ಈಗ ಬಡ ಮುಸ್ಲಿಮರು ಸಾಮಾನ್ಯ ವರ್ಗದವರೊಂದಿಗೆ ಶೇ. ೧೦ರಷ್ಟು ‘ಆರ್ಥಿಕವಾಗಿ ದುರ್ಬಲ ವರ್ಗಗಳ’ ಕೋಟಾಕ್ಕಾಗಿ ಸ್ಪರ್ಧಿಸಬೇಕು. ಧರ್ಮದ ಆಧಾರದ ಮೇಲೆ ಮಾತ್ರ ಮೀಸಲಾತಿ ನೀಡುವುದು ಅಸಮರ್ಥನೀಯ ಸರಿ. ಆದರೆ ಮುಸ್ಲಿಮರಿಗೆ ಮೀಸಲಾತಿ ಪ್ರಯೋಜನಗಳನ್ನು ಹಿಂಪಡೆಯಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಯಾವುದೇ ಶಿಫಾರಸು ಮಾಡಿಲ್ಲ. ೧೯೯೫ರಲ್ಲಿ ಮುಸ್ಲಿಮರಿಗೆ ಮೀಸಲಾತಿ ಜಾರಿಗೆ ತಂದದ್ದನ್ನು ಅಲ್ಪಸಂಖ್ಯಾತರ ಓಲೈಕೆಯ ನಿದರ್ಶನ ಎಂದು ಬಿಂಬಿಸಲು ಬಿಜೆಪಿ ಪ್ರಯತ್ನಿಸಿದೆ. ಸಂವಿಧಾನವು ಕೇವಲ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅನುಮತಿಸುವುದಿಲ್ಲ. ಸಮುದಾಯದ ಹಿಂದುಳಿದಿರುವಿಕೆಯ ಬಗ್ಗೆ ಸರಿಯಾದ ಅಧ್ಯಯನದ ಆಧಾರವಿಲ್ಲದೆ ಮುಸ್ಲಿಮರಿಗೆ ಪರಿಚಯಿಸಿರುವ ಮೀಸಲಾತಿಯನ್ನು ನ್ಯಾಯಾಂಗ ರದ್ದು ಮಾಡಿರುವ ಅನೇಕ ತೀರ್ಪುಗಳಿವೆ ಎಂಬುದೂ ನಿಜ. ಆದರೆ ಸೂಕ್ತ ಮಾನದಂಡಗಳ ವಿಸ್ತೃತ ಅಧ್ಯಯನದ ಆಧಾರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಗುರುತಿಸಲಾದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಪ್ರಯೋಜನಗಳನ್ನು ವಿಸ್ತರಿಸಲು ಸಾಧ್ಯವಿದೆ. ಕೆಲವು ರಾಜ್ಯಗಳು ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಮೂಲಕ ಈ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿವೆ. ಬಹುತೇಕ ಮುಸ್ಲಿಮರು ಇಂದು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿಯಾಗಿದ್ದು, ಸಾರ್ವಜನಿಕ ಸೇವೆಗಳಲ್ಲಿ ಅವರ ಪ್ರಾತಿನಿಧ್ಯ ಉತ್ತಮವಾಗಿದ್ದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿಡುವುದು ಸರಿ ಎಂದು ವಾದಿಸುವುದು ವ್ಯರ್ಥ. ಮುಸ್ಲಿಂ ಮುಖಂಡರು ಮತ್ತು ಸಂಘಟನೆಗಳು ಮೀಸಲಾತಿ ರದ್ದತಿಗೆ ವಿರೋಧ ವ್ಯಕ್ತಪಡಿಸಿದ್ದು, ಪರಿಶಿಷ್ಟ ಜಾತಿಗಳ ವರ್ಗೀಕರಣವೂ ವಿವಾದಾಸ್ಪದವಾಗಿದೆ. ಶೇ. ೧೭ರಷ್ಟು ಎಸ್.ಸಿ. ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವುದರ ವಿರುದ್ಧ ಕೆಲ ದಲಿತ ಗುಂಪುಗಳು ಬೀದಿಗೆ ಬಂದಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಮೀಸಲಾತಿ ನೀತಿಯನ್ನು ಬದಲಾಯಿಸುವಂತಹ ಪ್ರಮುಖ ನಿರ್ಧಾರಗಳು ಅನಗತ್ಯ ದಳ್ಳುರಿಗಳನ್ನು ಪ್ರಚೋದಿಸಬಹುದು.
This editorial has been translated from English, which can be read here.