ಟರ್ಕಿಯಲ್ಲಿ ಯಥಾಸ್ಥಿತಿ  

ಎರ್ಡೋಗನ್ ಹಿಂದಿನ ತಪ್ಪುಗಳನ್ನು ಸರಿಪಡಿಸಬೇಕು ಮತ್ತು ಎಲ್ಲರನ್ನೂ ಒಳಗೊಳ್ಳುವ ಹೊಸ ಆರಂಭ ಮಾಡಬೇಕು

June 01, 2023 10:22 am | Updated 10:22 am IST

೨೦೦೨ರಲ್ಲಿ ರೆಸೆಪ್ ತಯ್ಯಿಪ್ ಎರ್ಡೊಗಾನ್ ಅವರ ಜಸ್ಟೀಸ್ ಅಂಡ್ ಡೆವಲಪ್‌ಮೆಂಟ್ ಪಾರ್ಟಿ (ಎಕೆಪಿ) ಅಧಿಕಾರಕ್ಕೆ ಬಂದಾಗ, ಆರ್ಥಿಕ ಸಮಸ್ಯೆಗಳ ನಡುವೆ ವ್ಯವಸ್ಥೆಯ ವಿರುದ್ಧ ವ್ಯಾಪಕ ಅಸಮಾಧಾನ ಇತ್ತು. ಅಂದಿನ ಕೆಮಾಲಿಸ್ಟ್ ಜಾತ್ಯಾತೀತವಾದಿಗಳು ಪ್ರಾಬಲ್ಯ ಹೊಂದಿದ್ದ ವ್ಯವಸ್ಥೆಯಲ್ಲಿ ಇಸ್ಲಾಮಿಸ್ಟ್ ಆದ ಎರ್ಡೊಗಾನ್ ಹೊರಗಿನವರಾಗಿದ್ದರು. ಇಪ್ಪತ್ತು ವರ್ಷಗಳ ನಂತರ ಎರ್ಡೋಗನ್ ಅವರೇ ವ್ಯವಸ್ಥೆಯಾಗಿದ್ದಾರೆ. ಸಾಂಪ್ರದಾಯಿಕವಾಗಿ ಹಳೆಯ ವ್ಯವಸ್ಥೆಯ ರಕ್ಷಕವಾಗಿರುವ ಸೇನೆ ಅವರ ಕೈಯಲ್ಲಿದೆ, ಎಲ್ಲ ಸಂಸ್ಥೆಗಳು ಅವರ ಆಜ್ಞಾನುಸಾರಿಯಾಗಿವೆ, ಉಲೇಮಾದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಎಕೆಪಿ ಅತ್ಯಂತ ಪ್ರಬಲ ರಾಜಕೀಯ ಯಂತ್ರವಾಗಿ ಉಳಿದಿದೆ. ಆದರೆ ೨೦೨೩ರ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ೨೦೦೨ಕ್ಕೆ ಹೋಲಿಸಬಹುದು. ಆಳವಾದ ಆರ್ಥಿಕ ಬಿಕ್ಕಟ್ಟು ಮತ್ತು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಗಳನ್ನು ಹಿಮ್ಮೆಟ್ಟಿಸುವ ಆರೋಪಗಳನ್ನು ಎದುರಿಸುತ್ತಿರುವ ಎರ್ಡೊಗಾನ್ ಅವರ ಸುಧೀರ್ಘ ಆಡಳಿತದ ವಿರುದ್ಧ ವ್ಯಾಪಕ ಅಸಮಾಧಾನವಿದೆ. ಇದನ್ನು ದುಡಿಸಿಕೊಳ್ಳಲು ಪ್ರತಿಪಕ್ಷಗಳೆಲ್ಲವೂ ಒಗ್ಗೂಡಿದವು ಮತ್ತು ಮೇ ೧೪ರಂದು ಮೊದಲ ಸುತ್ತಿನಲ್ಲಿ ಅವರನ್ನು ಸೋಲಿಸಿದವು. ಆದರೆ ಭಾನುವಾರದ ಎರಡನೇ ಸುತ್ತಿನಲ್ಲಿ ಎರ್ಡೊಗಾನ್ ಅವರು ಶೇ. ೫೨.೧ರಷ್ಟು ಮತ ಪಡೆದು ಗೆದ್ದರೆ ಅವರ ಪ್ರತಿಸ್ಪರ್ಧಿ ಕೆಮಾಲ್ ಕಿಲಿಡಾರೊಗ್ಲು ಅವರು ಶೇ. ೪೭.೯ರಷ್ಟು ಮತ ಪಡೆದರು. ಸೋಲೊಪ್ಪಿಕೊಂಡಿರುವ ಕಿಲಿಡಾರೊಗ್ಲು ಚುನಾವಣಾ ಪ್ರಕ್ರಿಯೆಯನ್ನು “ಬಹುವರ್ಷಗಳಲ್ಲಿ ಇದು ಅತ್ಯಂತ ಅನ್ಯಾಯದ ಚುನಾವಣೆ” ಎಂದು ಬಣ್ಣಿಸಿದ್ದಾರೆ. ಅವರು ಹೇಳುತ್ತಿರುವುದರಲ್ಲಿ ಸಾಕಷ್ಟು ಸತ್ಯವಿದೆ. ಎರ್ಡೊಗಾನ್ ಮತ್ತು ಅವರ ಮಿತ್ರರು ಮುಖ್ಯವಾಹಿನಿ ಮಾಧ್ಯಮವನ್ನು ನಿಯಂತ್ರಿಸುತ್ತಿರುವುದರಿಂದ ಮಾಹಿತಿಯ ಹರಿವನ್ನು ರೂಪಿಸಿದರು. ಮಸೀದಿಗಳನ್ನು ನಿಯಂತ್ರಿಸುವ ಮತ್ತು ಇಮಾಮ್‌ಗಳನ್ನು ನೇಮಿಸುವ ಧಾರ್ಮಿಕ ನಿರ್ದೇಶನಾಲಯ (ಡಯಾನೆಟ್) ಸೇರಿದಂತೆ ರಾಜ್ಯ ಸಂಸ್ಥೆಗಳು ಎಕೆಪಿ ಪ್ರಚಾರವನ್ನು ವರ್ಧಿಸಿದವು. ಮುಖ್ಯವಾಹಿನಿಯ ಕುರ್ದಿಶ್ ಪಕ್ಷವು ತನ್ನ ಪ್ರತಿಸ್ಪರ್ಧಿಯನ್ನು ಬೆಂಬಲಿಸುತ್ತಿರುವುದರಿಂದ ವಿರೋಧ ಪಕ್ಷವು “ಭಯೋತ್ಪಾದಕರೊಂದಿಗೆ” ಕೈಜೋಡಿಸಿದೆ ಎಂದು ಎರ್ಡೊಗಾನ್ ಆರೋಪಿಸಿದರು. ಅಲ್ಪಸಂಖ್ಯಾತ ಅಲೆವಿ ಸಮುದಾಯದ ಮಾಜಿ ಅಧಿಕಾರಿ ಕೆಮಾಲ್ ಕಿಲಿಡಾರೊಗ್ಲು ಅವರು ಉತ್ಸಾಹಭರಿತ ಅಭಿಯಾನವನ್ನು ನಡೆಸಿದರಾದರೂ ಜನರಲ್ಲಿ ಮನೆಮಾಡಿರುವ ಎಕೆಪಿಯ ಇಸ್ಲಾಮಿಸ್ಟ್ ಉಮೇದನ್ನು ಮೀರಲಾಗಲಿಲ್ಲ.

ಮುಸ್ತಫಾ ಕೆಮಾಲ್ ‘ಅಟಾಟುರ್ಕ್’ ನಂತರದ ಅತ್ಯಂತ ಶಕ್ತಿಶಾಲಿ ಟರ್ಕಿಶ್ ನಾಯಕ ಎರ್ಡೊಗನ್ ಎಂಬುದು ನಿರ್ವಿವಾದ. ಕಳೆದ ೨೦ ವರ್ಷಗಳಲ್ಲಿ ದೇಶದ ರಾಜಕೀಯ ಮತ್ತು ಸಮಾಜವನ್ನು ಅವರು ಮರುರೂಪಿಸಿದ್ದಾರೆ. ಒಟ್ಟೋಮನ್ ಕ್ಯಾಲಿಫೇಟ್ ಅನ್ನು ರದ್ದುಗೊಳಿಸಿದ ಮತ್ತು ಟರ್ಕಿಯನ್ನು ಜಾತ್ಯತೀತಗೊಳಿಸಿದ ಕೆಮಾಲ್ ಅಟಾಟುರ್ಕ್ ಪುರೋಹಿತಶಾಹಿಯನ್ನು ದೇಶದ ಮುನ್ನಡೆಗೆ ಅಪಾಯವೆಂದು ಪರಿಗಣಿಸಿದ್ದರು. ಟರ್ಕಿಯ ಆಧುನಿಕ ಇತಿಹಾಸದಲ್ಲಿ ಕೆಮಾಲಿಸಂ ಮತ್ತು ಇಸ್ಲಾಮಿಸಂ ನಡುವಿನ ಉದ್ವಿಗ್ನತೆ ಯಾವಾಗಲೂ ಇದೆ. ಆದರೆ ಎರ್ಡೊಗನ್ ಅಧಿಕಾರಕ್ಕೆ ಬರುವವರೆಗೂ ಯಾವುದೇ ಇಸ್ಲಾಮಿಸ್ಟ್ ನಾಯಕನಿಗೆ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಾಗಿರಲಿಲ್ಲ. ಟರ್ಕಿಯ ವ್ಯವಸ್ಥೆಯನ್ನು ಆಮೂಲಾಗ್ರ ಬದಲಿಸುವಾಗ ಎರ್ಡೊಗನ್ ಎಲ್ಲ ಅಧಿಕಾರವನ್ನು ತಮ್ಮಲ್ಲೇ ಕೇಂದ್ರೀಕರಿಸಿಕೊಂಡರು, ಸಂವಿಧಾನವನ್ನು ಪುನರ್ರಚಿಸಿದರು, ದೇಶದ ಆಡಳಿತ ವ್ಯವಸ್ಥೆಯನ್ನು ಕಾರ್ಯನಿರ್ವಾಹಕ ಅಧ್ಯಕ್ಷಗಿರಿಗೆ ಬದಲಿಸಿ ಸರ್ವಶಕ್ತ ಅಧ್ಯಕ್ಷರಾಗಿ ಆಯ್ಕೆಯಾದರು, ಭಿನ್ನಾಭಿಪ್ರಾಯವನ್ನು ಹತ್ತಿಕ್ಕಿದರು, ಕುರ್ದಿಶ್ ಬಂಡುಕೋರರ ವಿರುದ್ಧ ಯುದ್ಧವನ್ನು ತೀವ್ರಗೊಳಿಸಿದರು ಮತ್ತು ರಾಜಕೀಯ ಪ್ರತಿಸ್ಪರ್ಧಿಗಳನ್ನು ಜೈಲಿಗೆ ತಳ್ಳಿದರು. ಆದರೂ ಈ ಚುನಾವಣೆ ಅವರಿಗೆ ದೊಡ್ಡ ಸವಾಲಾಗಿತ್ತು. ಅವರು ಎರಡನೇ ಸುತ್ತಿಗೆ ಹೋಗಬೇಕಾಯಿತಷ್ಟೆ ಅಲ್ಲದೆ ಅವರ ಗೆಲುವು ಕೇವಲ ಮೂರು ಶೇಕಡ ಅಂಕಗಳ ಮುನ್ನಡೆ ಅಷ್ಟೆ. ಇದು ಟರ್ಕಿಯ ಸಮಾಜ ಧ್ರುವೀಕರಣಗೊಂಡಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು. ಜರ್ಜರಿತ ಆರ್ಥಿಕತೆಗೆ ತುರ್ತು ಗಮನ ನೀಡಬೇಕು. ಈಗಾಗಲೇ ಇತಿಹಾಸದಲ್ಲಿ ಎರ್ಡೊಗನ್ ಅವರ ಸ್ಥಾನ ಅವರ ಸರ್ವಾಧಿಕಾರಿ ಪ್ರವೃತ್ತಿಗಳು ಮತ್ತು ಆರ್ಥಿಕತೆಯನ್ನು ನಿರ್ವಹಿಸುವಲ್ಲಿ ಅವರ ವಿಫಲತೆಯಿಂದ ಹಾಳಾಗಿದೆ. ಮತ್ತೊಂದು ಅವಧಿಗೆ ಅಧಿಕಾರ ದೊರೆತಿರುವುದು ಅವರ ಅನೇಕ ತಪ್ಪುಗಳನ್ನು ಸರಿ ಮಾಡಿಕೊಳ್ಳಲು, ಎಲ್ಲರನ್ನೂ ಒಳಗೊಳ್ಳುವ ಹೊಸ ಆರಂಭ ನೀಡಲು ಅವರಿಗೆ ಒಂದು ಸುವರ್ಣಾವಕಾಶ. ಆದರೆ ಟರ್ಕಿಯ ಇಸ್ಲಾಮಿಸ್ಟ್ ನಾಯಕ ಅಂತಹ ಬದಲಾವಣೆಗೆ ಸಿದ್ಧರಾಗಿದ್ದಾರೆಯೇ ಎಂಬುದು ಅಸ್ಪಷ್ಟವಾಗಿದೆ.

0 / 0
Sign in to unlock member-only benefits!
  • Access 10 free stories every month
  • Save stories to read later
  • Access to comment on every story
  • Sign-up/manage your newsletter subscriptions with a single click
  • Get notified by email for early access to discounts & offers on our products
Sign in

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.