ಶಾಂತಿಗಾಗಿ ಒಗ್ಗಟ್ಟು

ಜಿ-೭ ವಿಶ್ವದ ಸವಾಲುಗಳನ್ನು ಎದುರಿಸುವ ಬಗೆಯ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಒಮ್ಮತ ಮೂಡಿಸಬೇಕು

May 23, 2023 10:39 am | Updated 10:39 am IST

ವಿಶ್ವದ ಅತ್ಯಂತ ಕೈಗಾರೀಕರಣಗೊಂಡ ರಾಷ್ಟ್ರಗಳ ಗುಂಪಾದ ಜಿ-೭ ಶೃಂಗಸಭೆಯನ್ನು ಹಿರೋಷಿಮಾದಲ್ಲಿ ನಡೆಸುವ ಮೂಲಕ, ಅದೇ ನಗರಕ್ಕೆ ಸೇರಿದ ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಜಾಗತಿಕ ಶಾಂತಿಗಾಗಿ ಒಗ್ಗಟ್ಟಿನ ಸಂದೇಶ ಕಳುಹಿಸಲು ಬಯಸಿದ್ದರು. ೧೯೪೫ರ ಪರಮಾಣು ಬಾಂಬ್ ದಾಳಿಯ ಸಂತ್ರಸ್ತರ ಶಾಂತಿ ಸ್ಮಾರಕಕ್ಕೆ ಯೂರೋಪಿಯನ್ ಯೂನಿಯನ್ನಿನ ನಾಯಕತ್ವದೊಂದಿಗೆ ಎಲ್ಲ ಸದಸ್ಯ ರಾಷ್ಟ್ರಗಳ ನಾಯಕರೂ ಬಂದು ವಿಶೇಷ “ಪರಮಾಣು ನಿಶ್ಯಸ್ತ್ರೀಕರಣದ ಕುರಿತು ಹಿರೋಷಿಮಾ ವಿಷನ್ ಸ್ಟೇಟ್‌ಮೆಂಟ್” ಅನ್ನು ನೀಡಿದರು. ಅಮೆರಿಕಾದ ಅಧ್ಯಕ್ಷ ಜೋಸೆಫ್ ಬೈಡೆನ್ ಅವರು ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ್ದರಿಂದ ಈ ಸಭೆಯ ಪ್ರಾಮುಖ್ಯತೆ ಇನ್ನೂ ಹೆಚ್ಚಿತು. ಬೈಡೆನ್ ಹಿರೋಷಿಮಾಗೆ ಭೇಟಿ ನೀಡಿದ ಅಮೆರಿಕಾದ ಅಧಿಕಾರಾರೂಢ ಎರಡನೇ ಅಧ್ಯಕ್ಷರಷ್ಟೆ. ಯುಕ್ರೇನಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಅನಿರೀಕ್ಷಿತ ಆಗಮನವು ರಷ್ಯಾದ ಆಕ್ರಮಣದ ಭಯಾನಕತೆಯತ್ತಲೂ ಎಲ್ಲರ ಗಮನ ಸೆಳೆಯಿತು. ಇದು “ಮಾನವೀಯತೆಯ” ಬಿಕ್ಕಟ್ಟು ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಮಹತ್ವದ್ದಾಗಿದೆ. ಜಿ-೭ ಸದಸ್ಯ ರಾಷ್ಟ್ರಗಳು ಯುಕ್ರೇನಿನ ಬಗ್ಗೆ ಪ್ರತ್ಯೇಕ ಹೇಳಿಕೆ ನೀಡಿದವು. ಅದರಲ್ಲಿ ರಷ್ಯಾದ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದರೇ ವಿನಃ ಮಾತುಕತೆಯ ಮೂಲಕ ಈ ಸಂಘರ್ಷಕ್ಕೆ ಅಂತ್ಯ ಹಾಡುವ ದಾರಿ ತೋರಲು ವಿಫಲರಾದರು. ಪ್ರಪಂಚದ ಬಗ್ಗೆ ಕಪ್ಪು-ಬಿಳುಪಲ್ಲದ, ಹೆಚ್ಚು ಸಂಕೀರ್ಣ ನೋಟ ಹೊಂದಿರುವ ಭಾರತ, ಬ್ರೆಜಿಲ್, ಇಂಡೋನೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳನ್ನೂ ಆಹ್ವಾನಿಸಲಾಗಿತ್ತಾದರೂ, ಜಪಾನ್ ಪ್ರಧಾನಿ ಕಿಶಿಡಾ ಜಾಗತಿಕ ದಕ್ಷಿಣದ ದೃಷ್ಟಿಕೋನದ ಮಹತ್ವದ ಬಗ್ಗೆ ಹಲವು ಬಾರಿ ಮಾತನಾಡಿದರಾದರೂ ಶೃಂಗಸಭೆಯ ಹೇಳಿಕೆಗಳು ಬರಿಯ ಜಿ-೭ ಸದಸ್ಯ ರಾಷ್ಟ್ರಗಳ ಲೋಕದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇದು ಹೆಚ್ಚು ಧ್ರುವೀಕೃತ ಜಗತ್ತಿನತ್ತ ಬೊಟ್ಟು ಮಾಡುತ್ತದೆ.

ಜಿ-೭ ಗುಂಪು ತಾನು ಇಂದಿನ ಒಟ್ಟಾರೆ ಪ್ರಪಂಚವನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ಮೊದಲು ಗುರುತಿಸಬೇಕು. ಜಿ-೭ ಸದಸ್ಯ ರಾಷ್ಟ್ರಗಳು ಒಟ್ಟಾಗಿ ವಿಶ್ವದ ಅರ್ಧಕ್ಕಿಂತ ಹೆಚ್ಚು ನಿವ್ವಳ ಸಂಪತ್ತನ್ನು ಪ್ರತಿನಿಧಿಸಿದರೂ, ಜಾಗತಿಕ ಜಿಡಿಪಿಯ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಮತ್ತು ವಿಶ್ವದ ಜನಸಂಖ್ಯೆಯ ಹತ್ತನೇ ಒಂದು ಭಾಗಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ಜಪಾನ್ ಹೊರತುಪಡಿಸಿ, ಜಿ-೭ ಸದಸ್ಯತ್ವವು ಮೂಲಭೂತವಾಗಿ ಯುರೋ-ಅಮೇರಿಕನ್ ಲೋಕದೃಷ್ಟಿಗೆ ಸೀಮಿತವಾಗಿದೆ ಮತ್ತು ಅದನ್ನು ವಿಸ್ತರಿಸುವ ಬಗ್ಗೆ ಚರ್ಚೆ ಸಹ ಮಾಡುತ್ತಿಲ್ಲ. ೨೦೦೮ರಲ್ಲಿ ಜಾರ್ಜಿಯಾ ಮತ್ತು ೨೦೧೪ರಲ್ಲಿ ಕ್ರೈಮಿಯಾದ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾವನ್ನು ಈ ಗುಂಪಿನಿಂದ ಉಚ್ಚಾಟಿಸಿದ ಬಳಿಕ ವಾಸ್ತವವಾಗಿ ಅದರ ಲೋಕದೃಷ್ಟಿ ಇನ್ನಷ್ಟು ಸಂಕುಚಿತವಾಗಿದೆ. ಪ್ರಪಂಚದ ಕೆಲವು ದೊಡ್ಡ ಆರ್ಥಿಕತೆಗಳನ್ನು (ಚೀನಾ ಮತ್ತು ಭಾರತ), ವೇಗವಾಗಿ ಬೆಳೆಯುತ್ತಿರುವ ಜಿಡಿಪಿಗಳು, ಅಥವಾ ಅತಿದೊಡ್ಡ ಜಾಗತಿಕ ಶಕ್ತಿ ಪೂರೈಕೆದಾರರನ್ನು ಒಳಗೊಂಡಿರದ ಆರ್ಥಿಕ ಗುಂಪನ್ನು ಸಮರ್ಥಿಸುವುದು ಸಹ ಕಷ್ಟ. ಹಿರೋಷಿಮಾದಲ್ಲಿ ಜಿ-೭ನ ಜಾಗತಿಕ ಪಾತ್ರವನ್ನು ಗುರುತಿಸಲು ಕೆಲವು ಪ್ರಯತ್ನಗಳು ನಡೆದವು. ಉದಾಹರಣೆಗೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪಾರದರ್ಶಕ ಹಣಕಾಸು ಮತ್ತು ಸಾಲದ ಸುಸ್ಥಿರತೆಯನ್ನು ಉತ್ತೇಜಿಸಲು ಅಥವಾ ಜಾಗತಿಕ ತಾಪಮಾನ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕೊಡುಗೆಯನ್ನು ಸರಿದೂಗಿಸುವ ಕುರಿತು ಚರ್ಚೆಗಳಾದವು. ಆದರೆ ಈ ಜವಾಬ್ದಾರಿಗಳನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶೃಂಗಸಭೆ ಮೌನ ವಹಿಸಿತು. ಈ ವರ್ಷದ ಕೊನೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ-೨೦ ಶೃಂಗಸಭೆಯತ್ತ ಈಗ ಎಲ್ಲರ ಚಿತ್ತ. ಜಿ-೨೦ ಗುಂಪು ಹೆಚ್ಚು ಒಳಗೊಳ್ಳುವ ದೃಷ್ಟಿಕೋನ ಹೊಂದಿರುತ್ತದೆ ಮತ್ತು ಇಂದು ವಿಶ್ವದ ಸವಾಲುಗಳನ್ನು ಎದುರಿಸುವ ಬಗೆಯ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಒಮ್ಮತ ಮೂಡಿಸುತ್ತದೆ ಎಂಬ ಭರವಸೆ ಇದೆ.

0 / 0
Sign in to unlock member-only benefits!
  • Access 10 free stories every month
  • Save stories to read later
  • Access to comment on every story
  • Sign-up/manage your newsletter subscriptions with a single click
  • Get notified by email for early access to discounts & offers on our products
Sign in

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.