ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ತನ್ನ ಮತದಾರರಿಗೆ ಮೂಲನಿವಾಸಿಗಳು ಮತ್ತು ಟೊರೆಸ್ ಸ್ಟ್ರೈಟ್ ದ್ವೀಪದ ಜನರನ್ನು ಸಾಂವಿಧಾನಿಕವಾಗಿ ಗುರುತಿಸಲು ಜನಮತ ಸಂಗ್ರಹದ ಭರವಸೆ ನೀಡಿದ್ದಾರೆ. ಇದರೊಂದಿಗೆ ದೇಶವು ತನ್ನ ಇತಿಹಾಸದ ಕರಾಳ ಅಧ್ಯಾಯವನ್ನು ಎದುರಿಸಲು ಸಜ್ಜಾಗಿದೆ. ಇದು ಈ ಸಮುದಾಯಕ್ಕೆ ಸಲಹಾ ಪಾತ್ರದಲ್ಲೇ ಆದರೂ ಸರ್ಕಾರದಲ್ಲಿ ಶಾಶ್ವತ ಪ್ರಾತಿನಿಧ್ಯ ನೀಡಲಿದೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ರಸ್ತಾವಿತ ಜನಮತ ಸಂಗ್ರಹದಲ್ಲಿ ಜನ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ “ಫಸ್ಟ್ ನೇಷನ್ಸ್” ಸಮುದಾಯಗಳ ಮೇಲೆ ಪರಿಣಾಮ ಬೀರುವ ವಿಷಯಗಳ ಬಗ್ಗೆ ಸಂಸತ್ತಿಗೆ ಸಲಹೆ ನೀಡಲು “ವಾಯ್ಸ್” ಎಂಬ ಸ್ಥಳೀಯ ಪ್ರಾತಿನಿಧಿಕ ಸಂಸ್ಥೆಯನ್ನು ಹುಟ್ಟುಹಾಕಬೇಕೆ ಬೇಡವೇ ಎಂದು ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ. ಈ ಪ್ರಸ್ತಾವಿತ ಸಂಸ್ಥೆಯ ಸಲಹೆಯನ್ನು ಪಾಲಿಸಬೇಕೆಂಬ ಬದ್ಧತೆ ಸಂಸತ್ತಿನ ಮೇಲಿರುವುದಿಲ್ಲ. ಇದು ಮೂಲನಿವಾಸಿಗಳ ಪ್ರಾತಿನಿಧಿಕ ಸಂಸ್ಥೆಯಾಗಿ ಅವರ ಹಿತಾಸಕ್ತಿಗಳನ್ನು ಉತ್ತಮವಾಗಿ ಮಂಡಿಸುತ್ತದೆ ಎಂದು ಆಶಿಸಲಾಗಿದೆ. ಒಂದು ಸಾಮಾಜಿಕ ವರ್ಗವಾಗಿ ಮೂಲನಿವಾಸಿಗಳು ಕಡಿಮೆ ಜೀವಿತಾವಧಿ, ಹೆಚ್ಚಿನ ಶಿಶು ಮರಣ ಪ್ರಮಾಣ, ಕಳಪೆ ದೈಹಿಕ ಮತ್ತು ಮಾನಸಿಕ ಆರೋಗ್ಯ, ಕಡಿಮೆ ಶಿಕ್ಷಣ ಮತ್ತು ಉದ್ಯೋಗದ ಮಟ್ಟಗಳು, ಹೆಚ್ಚಿನ ಆತ್ಮಹತ್ಯೆಗಳು ಮತ್ತು ಕೌಟುಂಬಿಕ ಹಿಂಸೆಯಿಂದ ಬಳಲುತ್ತಿದ್ದಾರೆ. ವಾಯ್ಸ್ ಪ್ರಸ್ತಾವನೆಗೆ ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇ.೫೯ರಷ್ಟು ಸಾರ್ವಜನಿಕ ಬೆಂಬಲ ಇದ್ದರೂ ಅದಕ್ಕೂ ರಾಜಕೀಯ ವಿರೋಧವಿದೆ. ವಿಪರ್ಯಾಸವೆಂದರೆ ಕಂಟ್ರಿ ಲಿಬರಲ್ ಪಾರ್ಟಿಯ ಸಂಸದೆ ಜೆಸಿಂತಾ ಪ್ರೈಸ್ನಂತಹ ಪ್ರಮುಖ ಮೂಲನಿವಾಸಿ ಸಮುದಾಯದ ನಾಯಕಿಯಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಮೂಲನಿವಾಸಿಗಳು ಮತ್ತು ಟೊರೆಸ್ ಸ್ಟ್ರೈಟ್ ಐಲ್ಯಾಂಡರ್ ವಾಯ್ಸ್ ಸಂಸ್ಥೆಯು “ಸಂಸತ್ ಮತ್ತು ಕಾಮನ್ವೆಲ್ತ್ ಕಾರ್ಯನಿರ್ವಾಹಕ ಸರ್ಕಾರಕ್ಕೆ ಸಲಹೆ ನೀಡಬಹುದು” ಎಂಬ ಪ್ರಸ್ತಾವನೆಯು ಈ ಸಂಸ್ಥೆಯನ್ನು ಸಚಿವಸಂಪುಟಕ್ಕೂ ಮೇಲಿನ ದರ್ಜೆಗೇರಿಸುತ್ತದೆ ಮತ್ತು ಇದರಿಂದ ಮುಂದೆ ಶಾಸಕಾಂಗ ನಿರ್ಧಾರಗಳಿಗೆ ನ್ಯಾಯಾಲಯಗಳಲ್ಲಿ ಸವಾಲುಗಳು ಎದುರಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇತರ ಮೂಲನಿವಾಸಿ ನಾಯಕರ ಆದ್ಯತೆಗಳು ಬೇರೆ ಇವೆ. ಉದಾಹರಣೆಗೆ ಕೆಲವರು ಮೊದಲು ಮೂಲನಿವಾಸಿಗಳು ಮತ್ತು ಮೂಲನಿವಾಸಿಗಳಲ್ಲದವರ ನಡುವೆ ಈ ದೇಶದ ಭೂಮಿಯನ್ನು ಆಕ್ರಮಣಕಾರರಿಗೆ ಎಂದೂ ಬಿಟ್ಟುಕೊಡಲಾಗಿಲ್ಲ ಎಂದು ಸಾರುವ ಒಪ್ಪಂದ ಆಗಬೇಕು ಎಂದು ಬಯಸಿದ್ದಾರೆ.
ಎಷ್ಟೇ ರಾಜಕೀಯ ನಡೆ ಮಾತ್ರವೇ ಇದು ಎಂದರೂ ಜನನಮತ ಸಂಗ್ರಹ ಪ್ರಸ್ತಾಪದ ಮೂಲಧಾತು ಸಮನ್ವಯದ ಕಲ್ಪನೆಯೇ ಆಗಿದೆ. ೧೭೭೮ರಲ್ಲಿ “ಟೆರ್ರಾ ನಲ್ಲಿಯಸ್” ಅಥವಾ “ಯಾರದೂ ಅಲ್ಲದ ಭೂಮಿ”ಯು ಯುರೋಪಿಯನ್ನರ ವಸಾಹತು ಆದಾಗಿನಿಂದ ಮೂಲನಿವಾಸಿ ಸಮಾಜವನ್ನು ಹದಗೆಡಿಸಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಲು ಸರ್ಕಾರಕ್ಕೆ ಸುಮಾರು ೨೦೦ ವರ್ಷಗಳು ಬೇಕಾಯಿತು. ಮೂಲನಿವಾಸಿಗರಿಗೆ ಉತ್ತಮ ಆರೋಗ್ಯ ಮತ್ತು ಜೀವಿತಾವಧಿಯನ್ನು ಸಾಧಿಸಲು ತಾನು ಬದ್ಧ ಎಂದು ಘೋಷಿಸಿ ಸರ್ಕಾರವು ಔಪಚಾರಿಕವಾಗಿ “ಕ್ಲೋಸ್ ದಿ ಗ್ಯಾಪ್ ಸ್ಟೇಟ್ಮೆಂಟ್ ಆಫ್ ಇಂಟೆಂಟ್” ಗೆ ಸಹಿ ಹಾಕಿದ್ದು ೨೦೧೦ರ ಆಸುಪಾಸಿನಲ್ಲಿ. ಗಾಯ ಮಾಯಾದಷ್ಟೂ ಅದನ್ನು ಗುಣಪಡಿಸುವುದು ಕಷ್ಟವಾಗುತ್ತದೆ. ಈ ಸನ್ನಿವೇಶದಲ್ಲಿ ರಾಜಕೀಯ ಆಕ್ಷೇಪಣೆಗಳೇನೇ ಇರಲಿ “ವಾಯ್ಸ್” ಪ್ರಸ್ತಾವನೆಯ ಕುರಿತು ಜನಮತ ಸಂಗ್ರಹವು ಪ್ರತಿಯೊಬ್ಬ ಪ್ರಜೆಗೆ ತನ್ನ ದೇಶದಲ್ಲಿ ಸಾಮಾಜಿಕ ಸಾಮರಸ್ಯವನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತು ತನ್ನ ನಿಲುವು ತಿಳಿಸಲು ಅವಕಾಶ ನೀಡುತ್ತದೆಯಾದ್ದರಿಂದ ಅಲ್ಬನೀಸ್ ಅವರ ಸರ್ಕಾರವು ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದು ಒಳಿತು.
This editorial has been translated from English, which can be read here.