ಈ ನಡುವೆ ಸುಪ್ರೀಂ ಕೋರ್ಟ್ ಸರ್ಕಾರದ ಇಚ್ಛೆಗೆ ವಿಪರೀತವಾಗಿ ಮನ್ನಣೆ ಕೊಡುತ್ತಿರುವಂತೆ ಕಂಡುಬಂದರೆ ಅದು ಆಘಾತ ಅಥವಾ ಆಶ್ಚರ್ಯದ ವಿಷಯವಲ್ಲ. ಕೇಂದ್ರದ ಕೋರಿಕೆಯ ಮೇರೆಗೆ ಜಾರಿ ನಿರ್ದೇಶನಾಲಯದ (ಇಡಿ) ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಸೆಪ್ಟೆಂಬರ್ ೧೫ ರವರೆಗೆ ಮುಂದುವರಿಸಲು ಅನುಮತಿ ನೀಡಿದ ಆದೇಶವು ಅನಗತ್ಯವಾಗಿ ಸರ್ಕಾರದ ಕೋರಿಕೆಯನ್ನು ಮನ್ನಿಸುವಂತಿದೆ. ಜುಲೈ ೧೧ ರಂದು ನ್ಯಾಯಾಲಯವು ೨೦೨೧ ಮತ್ತು ೨೦೨೨ ರಲ್ಲಿ ಮಿಶ್ರಾ ಅವರಿಗೆ ನೀಡಲಾದ ವಿಸ್ತರಣೆಗಳು ಕಾನೂನುಬಾಹಿರವೆಂದು ಘೋಷಿಸಿತು. ಅದೇ ಸಮಯದಲ್ಲಿ, ಸುಗಮ ಸ್ಥಿತ್ಯಂತರವನ್ನು ಸಾಧ್ಯವಾಗಿಸಲು ಜುಲೈ ೩೧ರವರೆಗೆ ಅವರನ್ನು ಮುಂದುವರಿಸಲು ಅನುಮತಿ ನೀಡಿತು. ಆದರೂ ಸರ್ಕಾರ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನೇ ಶುರು ಮಾಡದಿದ್ದರೂ, ನ್ಯಾಯಾಲಯವು ಅಸ್ಪಷ್ಟ “ರಾಷ್ಟ್ರೀಯ ಹಿತಾಸಕ್ತಿ”ಯ ನೆಲೆಯಲ್ಲಿ ಸೆಪ್ಟೆಂಬರ್ ೧೫ ರವರೆಗೆ ಮಿಶ್ರಾ ಅವರನ್ನೇ ಮುಂದುವರೆಸಲು ಅನುಮತಿಸಿದೆ. ಅವರ ಸೇವೆ ಅನಿವಾರ್ಯವೆಂದು ಭಾವಿಸಲು ಸರ್ಕಾರ ಹುಡುಕಿರುವ ಕಾರಣ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಯ ಹಣಕಾಸು ಮೂಲಗಳನ್ನು ಸದೆಬಡಿಯಲು ದೇಶದ ಕಾನೂನು ಚೌಕಟ್ಟಿನ ಪರಾಮರ್ಶೆ ನಡೆಸುತ್ತಿದ್ದು ಈ ಪ್ರಕ್ರಿಯೆಯನ್ನು ಮಿಶ್ರಾ ಅವರು ಮುನ್ನಡೆಸುತ್ತಿದ್ದಾರೆ ಎಂಬುದು. ಈ ಬಹು-ಪಕ್ಷೀಯ ಸಂಸ್ಥೆಯು ಪರಸ್ಪರ ಮೌಲ್ಯಮಾಪನ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಮತ್ತು ಭಾರತದ ಚೌಕಟ್ಟಿನ ಪರಿಶೀಲನೆ ಜೂನ್ ೨೦೨೪ರವರೆಗೆ ಮುಂದುವರಿಯುತ್ತದೆ. ಈ ಕಾರಣ ನೀಡಿ ಅಕ್ಟೋಬರ್ ೧೫ ರವರೆಗೆ ಮಿಶ್ರಾ ಅವರ ಸೇವೆಯ ವಿಸ್ತರಣೆಯನ್ನು ಸರ್ಕಾರವು ಕೋರಿತ್ತು.
ಅಕ್ರಮ ಹಣ ವರ್ಗಾವಣೆಯ ವಿರುದ್ಧದ ಕಾನೂನನ್ನು ನಿರ್ವಹಿಸುವ ಸಂಸ್ಥೆಯಾಗಿ ಎಫ್ಎಟಿಎಫ್ ಪರಿಶೀಲನೆಯಲ್ಲಿ ಇಡಿಯದು ಪ್ರಮುಖ ಪಾತ್ರವಾಗಿರಬಹುದು. ಆದರೆ ಇಡೀ ಪ್ರಕ್ರಿಯೆಯು ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ ಎಂದು ನಂಬುವುದು ಕಷ್ಟ. ಒಂದೊಮ್ಮೆ ಹಾಗಿದ್ದರೂ ಕೂಡಾ ಮಿಶ್ರಾ ಅವರ ಉತ್ತರಾಧಿಕಾರಿಗೆ ನಿರ್ದೇಶನಾಲಯದ ದಿನನಿತ್ಯದ ಚಟುವಟಿಕೆಗಳನ್ನು ಬಿಟ್ಟು, ಕೇವಲ ಎಫ್ಎಟಿಎಫ್ ಪರಿಶೀಲನೆಗೆ ಮಿಶ್ರಾ ಅವರ ಸೇವೆಯನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಯಾವುದೇ ಅಡ್ಡಿಯಿರಲಿಲ್ಲ. ಯಾವುದೇ ಸಂದರ್ಭದಲ್ಲಿ ವಿವಿಧ ತನಿಖಾ ಸಂಸ್ಥೆಗಳು ಮತ್ತು ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಯ ಹಣಕಾಸು ಮೂಲಗಳನ್ನು ಸದೆಬಡಿಯಲು ಕಾನೂನು ಮತ್ತು ನೀತಿಯನ್ನು ರೂಪಿಸುತ್ತಲೇ ಇರುತ್ತಾರೆ. ಈ ಯಾವ ವಾದಗಳನ್ನೂ ನ್ಯಾಯಾಲಯ ಪರಿಗಣಿಸದಿರುವುದು ದುರದೃಷ್ಟಕರ. ಒಬ್ಬ ವ್ಯಕ್ತಿ ಹೇಗೆ ಅನಿವಾರ್ಯ ಎಂಬ ಪ್ರಶ್ನೆಯನ್ನು ಅದು ಕೇಳಿತಾದರೂ ಅಂತಿಮವಾಗಿ ಅದೇ ಅಧಿಕಾರಿಯನ್ನು ಇನ್ನೂ ಸ್ವಲ್ಪ ಸಮಯ ಮುಂದುವರೆಸಲು ಅನುಮತಿಸಿತು. ಎಫ್ಎಟಿಎಫ್ ಪರಿಶೀಲನೆಯಲ್ಲಿ ದೇಶವು ಉತ್ತಮವಾಗಿ ತೇರ್ಗಡೆಯಾಗುವುದು ರಾಷ್ಟ್ರದ ಪ್ರತಿಷ್ಠೆಯ ಪ್ರಶ್ನೆ ಎಂಬ ವಾದದಲ್ಲಿ ಹುರುಳಿದೆಯಾದರೂ ಮಿಶ್ರಾ ಅವರಿಗೆ ವಿಸ್ತರಣೆ ನೀಡದಿರುವುದು ದೇಶದ ಹಿತಾಸಕ್ತಿಗೆ ಬಾಧಕವಾಗಬಹುದು ಎಂಬ ವಾದವನ್ನು ಒಪ್ಪಲಾಗುವುದಿಲ್ಲ. ಈ ಪರಿಶೀಲನೆಯಲ್ಲಿ ಭಾರತದ ಕಾನೂನುಗಳು, ವ್ಯವಸ್ಥೆಗಳು ಮತ್ತು ಜಾಗತಿಕ ಮಾನದಂಡಗಳ ಅನುಸರಣೆಯ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆಯೇ ಹೊರತು ವರದಿಯನ್ನು ಯಾರು ಸಿದ್ಧಪಡಿಸಿದರು ಎಂಬುದರ ಮೇಲಲ್ಲ. ನ್ಯಾಯಾಲಯ ಸರ್ಕಾರದ ಎಲ್ಲ ಮನವಿಗಳಿಗೂ ಮನ್ನಣೆ ಕೊಡುತ್ತಿರುವುದು ಸ್ವತಃ ತಾನೇ ಕಾನೂನುಬಾಹಿರವೆಂದು ಘೋಷಿಸಿದ ಕ್ರಮಗಳಿಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಅಡ್ಡಿ ಬರುತ್ತಿದೆ.