ಆಗಸ್ಟ್ 2021 ರಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಾಗ, ಆಗಿನ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಅಫ್ಘಾನಿಸ್ತಾನ “ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ” ಎಂದು ಹೇಳಿದ್ದರು. ತಾಲಿಬಾನ್ ನಾಯಕತ್ವಕ್ಕೆ ಆಶ್ರಯ ನೀಡಿದ್ದ ಪಾಕಿಸ್ತಾನವನ್ನು ಅಫ್ಘಾನಿಸ್ತಾನದ ಅಂತರ್ಯುಧ್ಡದ ವಿಜಯಿಗಳಲ್ಲಿ ಒಬ್ಬರಾಗಿ ಪರಿಗಣಿಸಲಾಗಿತ್ತು. ಆದರೆ ಈ ಸಂಭ್ರಮ ಹೆಚ್ಚು ದಿನ ಬಾಳಲಿಲ್ಲ. ತಾಲಿಬಾನ್ ಅಧಿಕಾರ ಗ್ರಹಣ ಪಾಕಿಸ್ತಾನದ ಸುನ್ನಿ ಇಸ್ಲಾಮಿಕ್ ಬಂಡಾಯದ ಆವೃತ್ತಿಯಾದ ತೆಹರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಅನ್ನು ಬಲಗೊಳಿಸಿತು. ಅಂದಿನಿಂದ ಪಾಕಿಸ್ತಾನವು, ವಿಶೇಷವಾಗಿ ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಕ್ವಾ ಪ್ರದೇಶವು, ಅನೇಕ ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾಗಿದೆ. ಪೇಶಾವರದ ಭದ್ರಕೋಟೆಯೆನಿಸಿದ ಪೋಲೀಸ್ ಲೈನ್ ಪ್ರಾಂತ್ಯದ ಮಸೀದಿಯಲ್ಲಿ ಸೋಮವಾರ ಕನಿಷ್ಠ ೧೦೦ ಜನರನ್ನು ಬಲಿ ಪಡೆದ ಸ್ಫೋಟವು ಇತ್ತೀಚಿನ ಕೆಲ ವರ್ಷಗಳಲ್ಲೇ ಅತ್ಯಂತ ಮಾರಣಾಂತಿಕವಾದದ್ದು. ಇದು “ಒಳ್ಳೆಯ ತಾಲಿಬಾನ್” ಅನ್ನು ಬೆಂಬಲಿಸುವ ಮತ್ತು “ಕೆಟ್ಟ ತಾಲಿಬಾನ್” ವಿರುದ್ಧ ಹೋರಾಡುವ ಅದರ ತಂತ್ರದ ವಿಫಲತೆಯ ನಿಚ್ಚಳ ಪ್ರತೀಕ. ಟಿಟಿಪಿಯ ಒಂದು ಬಣವು ಆರಂಭದಲ್ಲಿ ಸ್ಫೋಟಕ್ಕೆ ಜವಾಬ್ದಾರಿ ವಹಿಸಿತಾದರೂ, ವಕ್ತಾರರೊಬ್ಬರು ಇದನ್ನು ನಿರಾಕರಿಸಿದರು. ಇದು ಟಿಟಿಪಿಯ ಪಾತ್ರದ ಬಗ್ಗೆ ಅನುಮಾನ ಮೂಡಿಸುವುದಿಲ್ಲ, ಬದಲಿಗೆ ಈ ಸಂಘಟನೆ ಒಳಗಿನ ಗುಂಪುಗಾರಿಕೆಯನ್ನಷ್ಟೇ ಸೂಚಿಸುತ್ತದೆ. ಸ್ಫೋಟವು ಟಿಟಿಪಿ ದಾಳಿಯ ಎಲ್ಲ ಲಕ್ಷಣಗಳನ್ನು ಹೊಂದಿದೆ - ಇದು ಟಿಟಿಪಿಯ ಭದ್ರಕೋಟೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಬೇರೆ ಯಾವುದೇ ಗುಂಪು ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಟಿಟಿಪಿ ಮತ್ತು ಅಫ್ಘಾನ್ ತಾಲಿಬಾನ್ ಸಾಂಸ್ಥಿಕವಾಗಿ ಭಿನ್ನವಾಗಿರಬಹುದಾದರೂ ಸೈದ್ಧಾಂತಿಕವಾಗಿ ಸಹೋದರರು. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಾಡಿದುದನ್ನೇ ಟಿಟಿಪಿ ಪಾಕಿಸ್ತಾನದಲ್ಲಿ ಮಾಡಲೆಣಿಸುತ್ತಿದೆ. ೨೦೧೪ರಲ್ಲಿ ೧೫೦ಕ್ಕೂ ಹೆಚ್ಚು ಜನರನ್ನು, ಬಹುಪಾಲು ಮಕ್ಕಳನ್ನು, ಬಲಿಪಡೆದ ಪೇಶಾವರದ ಶಾಲೆಯ ಮೇಲಿನ ದಾಳಿಯ ನಂತರ ಪಾಕಿಸ್ತಾನದ ಸೈನ್ಯವು ಈ ಗುಂಪಿನ ಮೇಲೆ ಕಾರ್ಯಾಚರಣೆ ಚುರುಕು ಮಾಡಿತ್ತು. ಆದರೆ ಅಫ್ಘಾನ್ ತಾಲಿಬಾನ್ ಅಧಿಕಾರಕ್ಕೆ ಮರಳಿ ಬಂದದ್ದು ಗಡಿ ಪ್ರದೇಶದಲ್ಲಿ ದಂಗೆಯ ಒಳಸುಳಿಗಳನ್ನು ಬದಲಾಯಿಸಿತು. ಇಮ್ರಾನ್ ಖಾನ್ ಟಿಟಿಪಿಯ ಜೊತೆ ಮಾತುಕತೆಯ ನಿಲುವನ್ನು ತಳೆದರು. ಅಫ್ಘಾನ್ ತಾಲಿಬಾನ್ ಟಿಟಿಪಿ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಯನ್ನು ಆಯೋಜಿಸಿತು. ಇದು ಕದನ ವಿರಾಮಕ್ಕೆ ದಾರಿ ತೋರಿತು. ಆದರೆ ಸುಮಾರು ಒಂದು ವರ್ಷ ಇದ್ದ ಕದನ ವಿರಾಮ ಕಳೆದ ವರ್ಷ ನವೆಂಬರ್ನಲ್ಲಿ ಕುಸಿದು ಬಿತ್ತು. ಕದನ ವಿರಾಮವನ್ನು ಸಂಘಟನೆ ಮತ್ತು ತನ್ನನ್ನು ತಾನು ಮರುಸಜ್ಜುಗೊಳಿಸಿಕೊಳ್ಳಲು ಬಳಸಿಕೊಂಡ ಟಿಟಿಪಿ, ಈಗ ಹೆಚ್ಚಿನ ಶಕ್ತಿಯೊಂದಿಗೆ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಹಲವರು ನಂಬುತ್ತಾರೆ. ಪೇಶಾವರ ಸ್ಫೋಟವು ಸತತ ರಾಜಕೀಯ ಅಸ್ಥಿರತೆಯ ಸಮಯದಲ್ಲಿ ಬಂದಿದೆ: ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ನಿರಂತರ ಅಭಿಯಾನ ನಡೆಸುತ್ತಿದ್ದರೆ, ಪಾಕಿಸ್ತಾನದ ರೂಪಾಯಿ ಪತನವಾಗಿದೆ, ಹಣದುಬ್ಬರ ಗಗನಕ್ಕೇರಿದೆ ಮತ್ತು ವಿದ್ಯುಚ್ಛಕ್ತಿಯ ಪರಿಸ್ಥಿತಿ ಡೋಲಾಯಮಾನವಾಗಿದೆ. ಸಾಲವನ್ನು ಪಾವತಿಸಲು ಸಾಧ್ಯವಾಗದೆ, ವಿಶೇಷ ನೆರವಿಗಾಗಿ ಸರ್ಕಾರವು ಐಎಂಎಫ್ನೊಂದಿಗೆ ಮಾತುಕತೆ ನಡೆಸುತ್ತಿದೆ. ಇದರ ಮಧ್ಯೆ ಭದ್ರತಾ ಸವಾಲು ಎದುರಾಗಿದೆ. ಭಯೋತ್ಪಾದನೆ ಮತ್ತು ಉಗ್ರವಾದಗಳಲ್ಲಿ ಕೆಲವನ್ನು ಬೆಂಬಲಿಸುತ್ತಾ ಕೆಲವುದರ ವಿರುದ್ಧ ಹೋರಾಡುವ ತನ್ನ ನೀತಿಯು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡಿದೆ ಎಂಬುದನ್ನು ಪಾಕಿಸ್ತಾನ ಅರಿಯಬೇಕು. ಪಾಕಿಸ್ತಾನದ ಭಯೋತ್ಪಾದನೆಯ ಕುರಿತ ನೀತಿಯಲ್ಲಿ ಮೂಲಭೂತ ಬದಲಾವಣೆ ಅಗತ್ಯವಿದೆ. ಆದರೆ ಅದಕ್ಕಿಂತ ತುರ್ತಾಗಿ ತನ್ನ ಎಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಪಾಕಿಸ್ತಾನದ ಅತಿದೊಡ್ಡ ಆಂತರಿಕ ಭದ್ರತಾ ಸಮಸ್ಯೆಯಾಗಿ ಪರಿಣಮಿಸಿರುವ ಟಿಟಿಪಿಯನ್ನು ಸದೆಬಡಿಯಬೇಕಿದೆ.
This editorial has been translated from English, which can be read here.