ಅಕ್ಟೋಬರ್ ೫ ರಂದು ಅಹಮದಾಬಾದಿನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯದೊಂದಿಗೆ ಶುರುವಾದ ಕ್ರಿಕೆಟ್ ವಿಶ್ವಕಪ್ ಭಾರತದಾದ್ಯಂತ ಸಂಚರಿಸಿ ಅಂತಿಮ ಹಣಾಹಣಿಯ ಹಂತಕ್ಕೆ ಬಂದಿದೆ. ತವರು ನೆಲದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬಲಿಷ್ಠ ಮತ್ತು ಈಗಷ್ಟೇ ಪ್ರಚಲಿತಕ್ಕೆ ಬರುತ್ತಿರುವ ಎರಡೂ ಬಗೆಯ ತಂಡಗಳನ್ನು ಸಮರ್ಥವಾಗಿ ಎದುರಿಸಿ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಸತತವಾಗಿ ಒಂಬತ್ತು ಗೆಲುವುಗಳು ಗಮನಾರ್ಹ ಸಾಧನೆಯಾಗಿದೆ. ಭಾರತ ತಂಡದ ಆಟಗಾರರು ಆಕರ್ಷಣೀಯವಾಗಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಉತ್ಸಾಹದಿಂದ ಬೌಲಿಂಗ್ ಮಾಡಿದ್ದಾರೆ ಮತ್ತು ಲೀಗ್ ಹಂತದಲ್ಲಿ ೧೮ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮುಂದಿನ ಹಂತಕ್ಕೆ ತೇರ್ಗಡೆಯಾಗಿದ್ದಾರೆ. ೧೯೮೩ ಮತ್ತು ೨೦೧೧ರಲ್ಲಿ ವಿಶ್ವಕಪ್ ಗೆದ್ದಿರುವ ಭಾರತ ಮೂರನೇ ಬಾರಿ ಮತ್ತೆ ವಿಶ್ವಕಪ್ ಗೆಲ್ಲುವುದರತ್ತ ದೃಷ್ಟಿ ನೆಟ್ಟಿದೆ. ಮುಂಬೈನಲ್ಲಿ ಬುಧವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್ನಲ್ಲಿ ೨೦೧೯ರ ವಿಶ್ವಕಪ್ಪಿನಲ್ಲಿ ಸೆಮಿಫೈನಲ್ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಸೋತಿತು. ಆದಾಗ್ಯೂ, ಈ ಬಾರಿ ಲೀಗ್ ಹಂತದಲ್ಲಿ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ ಬಳಿಕ ಭಾರತ ತಂಡ ಕೇನ್ ವಿಲಿಯಮ್ಸನ್ ನೇತೃತ್ವದ ಹುರಿಯಾಳುಗಳನ್ನು ಸೋಲಿಸಬಹುದು ಎಂದು ವಿಶ್ವಾಸದಿಂದಿದ್ದಾರೆ. ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಇದ್ದ ಮಧ್ಯ ಶ್ರೇಯಾಂಕದಿಂದ ತೇರ್ಗಡೆ ಹೊಂದಿ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಉತ್ತಮ ಬ್ಯಾಟರ್ ರಚಿನ್ ರವೀಂದ್ರ ಹೊಸ ತಲೆಮಾರಿನ ತಾರಾ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಯಾವತ್ತಿದ್ದರೂ ನ್ಯೂಜಿಲೆಂಡ್ ಒಂದು ಬಲಿಷ್ಠ ಎದುರಾಳಿಯೇ ಮತ್ತು ಭಾರತದ ಅದರ ಪ್ರಸ್ತುತ ಉತ್ತಮ ಆಟದ ಹೊರತಾಗಿಯೂ ನಾಕೌಟ್ ಹಂತದ ಅಪಾಯಗಳ ಅರಿವಿರಬೇಕು. ೨೦೧೫ರ ಆವೃತ್ತಿಯಲ್ಲೂ ಭಾರತ ಸೆಮಿಫೈನಲ್ನಲ್ಲಿ ಸೋತಿತ್ತು
ಪ್ರಸ್ತುತ ರೋಹಿತ್ ಅವರ ನೇತೃತ್ವದ ತಂಡ ಎಷ್ಟು ಬಲಿಷ್ಠವಾಗಿದೆಯೆಂದರೆ ಗಾಯಗೊಂಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯೂ ಯಾವುದೇ ಪರಿಣಾಮ ಬೀರಿಲ್ಲ. ರೋಹಿತ್, ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದು, ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಎದುರಾಳಿಗಳಿಗೆ ಆಘಾತ ನೀಡಿದೆ. ೨೦೧೩ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಕಳೆದ ಹತ್ತು ವರ್ಷಗಳಲ್ಲಿ ಭಾರತ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಈ ಬಾರಿ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನವೆಂಬರ್ ೧೯ರಂದು ನಡೆಯುವ ವಿಶ್ವಕಪ್ ಫೈನಲ್ ಬಳಿಕ ಈ ಬರ ನೀಗುವ ಸಾಧ್ಯತೆಯಿದೆ. ಸೆಮಿ ಫೈನಲ್ ಹಂತಕ್ಕೆ ಬಂದಿರುವ ಮತ್ತೆರಡು ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಈ ಕ್ರೀಡಾಕೂಟದ ವಿವಿಧ ಹಂತಗಳಲ್ಲಿ ತಮ್ಮ ಶಕ್ತಿ ಮತ್ತು ದೌರ್ಬಲ್ಯ ಎರಡನ್ನೂ ಪ್ರದರ್ಶಿಸಿವೆ. ಅಫ್ಘಾನಿಸ್ತಾನದ ವಿರುದ್ಧ ಗ್ಲೆನ್ ಮ್ಯಾಕ್ಸ್ವೆಲ್ ಅವರ ಅಜೇಯ ೨೦೧ ರನ್ನುಗಳ ಆಟ ತೋರಿಸುವಂತೆ ಆಸ್ಟ್ರೇಲಿಯಾವು ಅಚ್ಚರಿ ಮೂಡಿಸಬಲ್ಲದು. ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರ ರನ್ ಗಳಿಕೆ ಕ್ಷೀಣವಾಗಿದ್ದರೂ ತಂಡದ ಆಟಕ್ಕೆ ಆಳ ಮತ್ತು ಸಾಮರ್ಥ್ಯ ಇದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ಬಲಿಷ್ಠ ತಂಡಗಳು ಲೀಗ್ ಹಂತದಲ್ಲಿಯೇ ಕ್ರೀಡಾಕೂಟದಿಂದ ಹೊರಹೋಗಿರುವುದು ಆಟದಲ್ಲಿ ಬದಲಾವಣೆಗಳಾಗುತ್ತಿರುವುದನ್ನು ಸೂಚಿಸುತ್ತದೆ. ಆತಿಥೇಯರು ಅತ್ಯುತ್ತಮ ಆಟ ಪ್ರದರ್ಶಿಸಿ ಮುಂಚೂಣಿಯಲ್ಲಿರಬಹುದು, ಆದರೆ ಈ ವಿಶ್ವಕಪ್ನ ಅತ್ಯಂತ ಹೃದಯಸ್ಪರ್ಶಿ ಸಂಗತಿಯೆಂದರೆ ಉದಯೋನ್ಮುಖ ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ ತಂಡಗಳ ಉತ್ತಮ ಪ್ರದರ್ಶನ. ಕ್ರಿಕೆಟ್ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸಲು ಈ ತಂಡಗಳು ವಿಕಸನಗೊಳ್ಳುವುದು ಅವಶ್ಯಕ.