ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆಗಸ್ಟ್ ೩ ರಂದು ಲ್ಯಾಪ್ಟಾಪುಗಳು, ಪರ್ಸನಲ್ ಕಂಪ್ಯೂಟರುಗಳು (ಪಿಸಿಗಳು), ಟ್ಯಾಬ್ಲೆಟ್ಗಳು ಮತ್ತು ಸರ್ವರುಗಳ ಆಮದಿನ ಮೇಲೆ ನಿರ್ಬಂಧಗಳನ್ನು ವಿಧಿಸಿ ಆಮದುದಾರರು ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಿತು. ಇದು ಭಾರತದ ವಿದೇಶಿ ವ್ಯಾಪಾರ ನೀತಿಯಲ್ಲಿ ಹಠಾತ್ ಮತ್ತು ತೀಕ್ಷ್ಣವಾದ ಬದಲಾವಣೆಯೇ ಸರಿ. ಈ ನಿರ್ಬಂಧಗಳು ತಕ್ಷಣವೇ ಜಾರಿಗೆ ಬರಬೇಕಿತ್ತು. ಆದರೆ ಇದು ಸಂಪೂರ್ಣ ಪೂರೈಕೆ ಸರಪಳಿಯನ್ನು ಬುಡಮೇಲು ಮಾಡಬಹುದು ಮತ್ತು ವಿಶೇಷವಾಗಿ ಹಬ್ಬಗಳ ಋತುವಿನಲ್ಲಿ ಕಂಪ್ಯೂಟರುಗಳ ಕೊರತೆ ಮತ್ತು ಬೆಲೆ ಏರಿಕೆ ಆಗಬಹುದು ಎಂಬ ಭಯ ಹುಟ್ಟುಹಾಕಿದೆ. ಇದಕ್ಕೆ ಭಧ್ರತಾ ಕಾಳಜಿಯೇ ಕಾರಣ ಎಂದು ಸರ್ಕಾರ ವಾದಿಸಲು ಪ್ರಯತ್ನಿಸಿದೆ. ಮೊಬೈಲ್ ಫೋನುಗಳು ಸ್ಪೈವೇರ್ ಅನ್ನು ಹೊಂದಿರುವಂತೆ ಆಮದು ಮಾಡಿದ ಕಂಪ್ಯೂಟರು ಸಾಧನಗಳನ್ನೂ ಕಣ್ಗಾವಲಿಗಾಗಿ ಬಳಸಬಹುದು ಎಂಬುದು ಆತಂಕ. ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವಂತೆ ಜಾಗತಿಕ ಐಟಿ ಹಾರ್ಡ್ವೇರ್ ಉತ್ಪಾದಕರನ್ನು ಒತ್ತಾಯಿಸುವ ಮಾರ್ಗವೂ ಇದಾಗಿದೆ. ಆದರೆ ಸಂಕೀರ್ಣ ಪಿಸಿ ಘಟಕ ಮೌಲ್ಯ-ಸರಪಳಿಗಳು ರಾತ್ರೋರಾತ್ರಿ ಮೇಲೇಳಲು ಸಾಧ್ಯವಿಲ್ಲ. ಮತ್ತು ಇದು ಭಾರತದ ಸಾಫ್ಟ್ವೇರ್ ಮತ್ತು ಐಟಿ ಸೇವೆಗಳ ರಫ್ತಿನ ಮೇಲೂ ಅಡ್ಡ ಪರಿಣಾಮ ಬೀರಬಹುದು ಎಂಬ ಕಳವಳ ವ್ಯಕ್ತವಾಗಿದೆ. ಈ ಎಲ್ಲ ವಿರೋಧವನ್ನು ಗ್ರಹಿಸಿದ ಸರ್ಕಾರವು ಒಂದು ಹೆಜ್ಜೆ ಹಿಂದಿಟ್ಟಿದೆ. ನವೆಂಬರ್ ೧ ರವರೆಗೆ ಈ ನಿರ್ಬಂಧಗಳ ಜಾರಿ ಮಾಡುವುದನ್ನು ಮುಂದೂಡಿದೆ. ಪರವಾನಗಿ ವಿನಂತಿಗಳಿಗೆ ತ್ವರಿತ ಅನುಮೋದನೆಗಳ ಭರವಸೆ ನೀಡಿದೆಲ್ಲದೆ ಇದು “ಲೈಸೆನ್ಸ್ ರಾಜ್” ಯುಗದ ಮರಳಿಕೆಯಲ್ಲ ಎಂದು ಸಚಿವರು ಪ್ರತಿಪಾದಿಸಿದ್ದಾರೆ.
ಆಮದು ಪರವಾನಗಿಗಳನ್ನು ಸರ್ಕಾರ ಈಗ ಭರವಸೆ ನೀಡಿರುವಂತೆ ನಿಮಿಷಗಳಲ್ಲಿ ನೀಡಲಾಗುವುದು ಎಂದೇ ಇಟ್ಟುಕೊಂಡರೂ ಇದು ಐಟಿ ಉದ್ಯಮ ಮುಕ್ತಗೊಳ್ಳುವುದಕ್ಕೂ ಮೊದಲಿನ ೧೯೭೦-೮೦ರ ದಶಕಗಳ ನೆನಪು ಮರುಕಳಿಸುತ್ತದೆ. ಪರವಾನಗಿಯ ನಿಯಮಗಳು ಸ್ಪಷ್ಟವಾಗುವವರೆಗೆ ಐಟಿ ಉದ್ಯಮದ ಕಳವಳ ತಿಳಿಯಾಗದು. ಆಮದುದಾರರು ಅತ್ಯಾಧುನಿಕ ಸಾಧನಗಳ ಆಮದುಗಳನ್ನು ಸಮರ್ಥಿಸಿಕೊಳ್ಳಬೇಕೇ ಅಥವಾ ಸಾಫ್ಟ್ವೇರ್ ಸಂಸ್ಥೆಯು ಹೊಸ ನೇಮಕಗಳ ಅಥವಾ ತಾಜಾ ರಫ್ತು ಆದೇಶಗಳ ಪುರಾವೆ ಒದಗಿಸಬೇಕೇ? ೨೦೨೨-೨೩ರಲ್ಲಿ ಸುಮಾರು ಶೇ. ೨೮ರಷ್ಟು ಬಿದ್ದು $೫.೩ ಬಿಲಿಯನ್ ತಲುಪಿದ ಪಿಸಿ ಮತ್ತು ಟ್ಯಾಬ್ಲೆಟ್ ಆಮದುಗಳು, ಅದರ ಬಹುಭಾಗ ಚೀನಾದಿಂದ ಬರುತ್ತಿರುವುದರಿಂದ ಭದ್ರತಾ ಕಾಳಜಿಯಾಗಿ ಮಾರ್ಪಟ್ಟಿದ್ದರೆ, ಸರ್ಕಾರ ಸಾಗಣೆಗಳನ್ನು ಪರಿಶೀಲಿಸಲು ಕಡ್ಡಾಯ ಪರೀಕ್ಷಾ ಮಾನದಂಡಗಳನ್ನು ರೂಪಿಸಬಹುದಿತ್ತು. ಇದರ ಹಿಂದೆ ಹೂಡಿಕೆಗಳನ್ನು ಉತ್ತೇಜಿಸುವ ಉದ್ದೇಶವಿದ್ದರೆ, ಜಾಗತಿಕ ಕಂಪೆನಿಗಳಿಗೆ ಪ್ರಪಂಚದಾದ್ಯಂತ ಇತರ ಸುಲಭ ವ್ಯಾಪಾರ ಪರ್ಯಾಯಗಳಿರುವಾಗ ಅವರನ್ನು ಬೆದರಿಸಿ ಇಲ್ಲಿ ಹೂಡಿಕೆ ಮಾಡಿಸುವುದು ಕಷ್ಟ. ಕಂಪ್ಯೂಟರುಗಳ ಬೆಲೆ ಏರಿಕೆ ಅಥವಾ ಸಾಧನಗಳ ಅಲಭ್ಯತೆ ಭಾರತದ ಗ್ರಾಹಕರ ಮೇಲೂ ಪ್ರಭಾವ ಬೀರುತ್ತದೆ. ಅನೇಕ ಕುಟುಂಬಗಳು ಮತ್ತು ಸಣ್ಣ ಉದ್ಯಮಗಳಿಗೆ, ಇದು ‘ಡಿಜಿಟಲ್ ಡಿವೈಡ್’ ಅನ್ನು ದಾಟುವುದಷ್ಟೇ ಅಲ್ಲ, ‘ಡಿಜಿಟಲ್ ಇಂಡಿಯಾ’ದಲ್ಲಿ ಹೆಚ್ಚೆಚ್ಚು ಸರ್ಕಾರಿ ಸೇವೆಗಳನ್ನು ಪಡೆಯುವ ಸಾಧನವೂ ಆಗಿದೆ. ಗೇಮಿಂಗ್ ವಲಯದಲ್ಲಿ ಕಟ್ಟುವ ಪಣದ ಮೇಲೆ ಶೇ. ೨೮ರಷ್ಟು ದುಬಾರಿ ಜಿಎಸ್ಟಿ ತೆರಿಗೆ, ‘ಅನಿಯಂತ್ರಿತ’ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣದಂತಹ ಇತ್ತೀಚಿನ ಅನೇಕ ಅನಿರೀಕ್ಷಿತ ನೀತಿ-ನಿರ್ಣಯಗಳು ಹೆಚ್ಚುತ್ತಿರುವ ಸರ್ಕಾರದ ನಿಯಂತ್ರಣವನ್ನು ಸೂಚಿಸುತ್ತಿದ್ದು, ಇದು ಭಾರತದ ಆರ್ಥಿಕತೆಯ ಸುಧಾರಣೆಗಳನ್ನು ಹಳಿತಪ್ಪಿಸಬಹುದು.