ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಒಂದು ತಿಂಗಳ ವಿರಾಮದ ನಂತರ ರೋಹಿತ್ ಶರ್ಮಾ ಅವರ ನೇತೃತ್ವದ ಭಾರತ ತಂಡ ಮತ್ತೆ ಮೈದಾನಕ್ಕೆ ಮರಳಲಿದೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ೨೦೨೫ರಲ್ಲಿ ಇಂಗ್ಲೆಂಡ್ನಲ್ಲಿ ನಿಗದಿಯಾಗಿದೆ. ಈ ಪಂದ್ಯಾವಳಿ ಶುರುವಾಗುವುದು ಬುಧವಾರ ರೋಸೋವಿನ ವಿಂಡ್ಸರ್ ಪಾರ್ಕ್ನಲ್ಲಿ ನಡೆಯಲಿರುವ ಎರಡು-ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಭಾರತ ಎದುರಿಸುವುದರೊಂದಿಗೆ. ಕೆರಿಬಿಯನ್ ಪ್ರವಾಸವು ಇದಲ್ಲದೆ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ-೨೦ ಪಂದ್ಯಗಳನ್ನೂ ಒಳಗೊಂಡಿದೆ. ಇದು ಯುವ ಆಟಗಾರರು ತಮ್ಮ ಹಿರಿಯರ ಹಾದಿಯಲ್ಲಿ ಹೆಜ್ಜೆ ಹಾಕುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂದು ಪರಿಶೀಲಿಸಲು ಪರಿವರ್ತನೆಯ ಹಾದಿಯಲ್ಲಿರುವ ತಂಡಕ್ಕೆ ಒಂದು ಉತ್ತಮ ಅವಕಾಶ ಒದಗಿಸುತ್ತದೆ. ವೆಸ್ಟ್ ಇಂಡೀಸ್ನ ಸುವರ್ಣ ಯುಗದಲ್ಲಿ ಅಲ್ಲಿ ನಡೆಯುವ ಆಟಗಳಲ್ಲಿ ಶ್ರೇಷ್ಠತೆಯ ಝಲಕ್ಗಳು ಕಾಣುತ್ತಿದ್ದವು. ಉದಾಹರಣೆಗೆ ೧೯೭೧ರಲ್ಲಿ ತಮ್ಮ ಚೊಚ್ಚಲ ಸರಣಿಯಲ್ಲಿ ಸುನಿಲ್ ಗವಾಸ್ಕರ್ ಅವರು ೭೭೪ ರನ್ಗಳನ್ನು ಗಳಿಸಿದ್ದರು. ಆದರೆ ಇಂದು ವೆಸ್ಟ್ ಇಂಡೀಸ್ ಅದರ ಹಿಂದಿನ ಸಾಮರ್ಥ್ಯಕ್ಕೆ ಹೋಲಿಸಿದರೆ ಅದರ ಪೇಲವ ನೆರಳು. ಟಿ-೨೦ ಪಂದ್ಯಗಳಲ್ಲಿ ಆಗಾಗ ಮಿಂಚಿ ಮರೆಯಾಗುವುದು ಬಿಟ್ಟರೆ ಇದು ಇಂದು ಎಡವುತ್ತಾ ಗತಕಾಲದ ನೆನಪುಗಳಲ್ಲಿ ಕಳೆದುಹೋಗಿರುವ ತಂಡವಾಗಿದೆ. ಕ್ರೈಗ್ ಬ್ರಾಥ್ವೈಟ್ನ ನೇತೃತ್ವದ ತಂಡವು ಪ್ರಬಲ ವಿರೋಧಿಗಳನ್ನು ಎದುರಿಸಬೇಕಿದೆ. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಸಾಂಪ್ರದಾಯಿಕ ೫೦-ಓವರ್ಗಳ ವಿಶ್ವಕಪ್ಗೆ ಅರ್ಹತೆ ಪಡೆಯದಿರುವ ಕಳಂಕವನ್ನು ಅವರು ತೊಡೆದು ಹಾಕಬೇಕಿದೆ.
ಕಳೆದುಹೋದ ವೈಭವವನ್ನು ಮರಳಿ ಪಡೆಯುವುದು ಆತಿಥೇಯರ ಗುರಿಯಾದರೆ, ಭಾರತವು ತನ್ನ ಮುಂದಿನ ಹಾದಿಯನ್ನು ಕಂಡುಕೊಳ್ಳಬೇಕಿದೆ. ಚೇತೇಶ್ವರ ಪೂಜಾರ ಅವರನ್ನು ಬದಿಗೆ ಸರಿಸಿದ ಬದಲಾವಣೆಯ ಗಾಳಿ ಇನ್ನೂ ಬೀಸುತ್ತಿದ್ದು ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರು ತಾವು ಉನ್ನತ ಮಟ್ಟದ ಆಟಗಾರರು ಎಂದು ಸಾಬೀತುಪಡಿಸಲು ಇನ್ನೂ ಅವಕಾಶವಿದೆ. ಪೂಜಾರ ಈ ಹಿಂದೆ ರಾಹುಲ್ ದ್ರಾವಿಡ್ ಆಡುತ್ತಿದ್ದ ಮೂರನೆ ಸ್ಥಾನದಲ್ಲಿ ಮತ್ತು ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಜಾಗದಲ್ಲಿ ನಾಲ್ಕನೆ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಾ ಒಂದು ದಶಕದ ಕಾಲ ಭಾರತ ಕ್ರಿಕೆಟ್ಟನ್ನು ಆಳಿದರು. ಆದರೆ ಈಗ ಪೂಜಾರಾನನ್ನು ಕೈಬಿಡಲಾಗಿದೆ ಮತ್ತು ಕೊಹ್ಲಿ ನಿವೃತ್ತಿಯ ಅಂಚಿನಲ್ಲಿರುವುದರಿಂದ ತಂಡವನ್ನು ಮರಳಿ ಕಟ್ಟಬೇಕಿದೆ. ರೋಹಿತ್, ಅಜಿಂಕ್ಯ ರಹಾನೆ, ಕೊಹ್ಲಿ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮೂವತ್ತೈದರ ಹರೆಯದ ಆಚೀಚೆ ಇರುವುದರಿಂದ ಬದಲಾವಣೆ ಅನಿವಾರ್ಯ. ಹಾರ್ದಿಕ್ ಪಾಂಡ್ಯ ನೇತೃತ್ವದ ಟಿ-೨೦ ತಂಡದಲ್ಲಿ ರೋಹಿತ್ ಮತ್ತು ಕೊಹ್ಲಿಗೆ ಸ್ಥಾನ ಸಿಗದಿರುವುದು ಆಯ್ಕೆದಾರರು ನಿರ್ಭಾವುಕರಾಗಿರಬಲ್ಲರು ಎಂಬ ಸುಳಿವು ನೀಡಿದೆ. ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಐಸಿಸಿ ಟಿ-೨೦ ವಿಶ್ವಕಪ್ ನಡೆಯಲಿದ್ದು, ಈ ಪಂದ್ಯಾವಳಿ ಪಾಂಡ್ಯ ಪಡೆಗೆ ಅಲ್ಲಿನ ಪರಿಸ್ಥಿತಿಗಳ ಮುನ್ನೋಟ ನೀಡುತ್ತದೆ. ಅದು ಬ್ಯಾಟ್ಸ್ಮನ್ ಮತ್ತು ಬೌಲರುಗಳಿಗೆ ಮುಂಬರುವ ವಾರಗಳಲ್ಲಿ ತಮ್ಮ ಸಾಮರ್ಥ್ಯ ನಿರೂಪಿಸಿ ಭರವಸೆ ಮೂಡಿಸಲು ಒಂದು ಉತ್ತಮ ಅವಕಾಶ. ಎದುರಾಳಿ ತಂಡವೂ ನಿರ್ಣಾಯಕ ಉತ್ತರಗಳಿಗಾಗಿ ಹುಡುಕಾಡುತ್ತಿವೆ ಎಂಬುದು ಸಮಾಧಾನಕರ.