ಒರಟು ಧಾನ್ಯಗಳ ಕುಟುಂಬಕ್ಕೆ ಸೇರಿದ ಸಿರಿಧಾನ್ಯಗಳು ಭಾರತದಲ್ಲಿ ಜನಪ್ರಿಯ ಪ್ರಧಾನ ಆಹಾರವಾಗಿದ್ದು ಈಗ ವಿಶೇಷ ಆದ್ಯತೆ ಪಡೆದಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸಿರಿಧಾನ್ಯಗಳ ಕುರಿತ ಜಾಗತಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಅವರು ಸಿರಿಧಾನ್ಯಗಳನ್ನು ಸಣ್ಣ ರೈತರ “ಅಭ್ಯುದಯದ ಬಾಗಿಲು”, “ಪೌಷ್ಠಿಕಾಂಶದ ಮೂಲಾಧಾರ” ಮತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಟದಲ್ಲಿ ಸಂಭಾವ್ಯ ಮಿತ್ರ ಎಂದು ಶ್ಲಾಘಿಸಿದರು. ವಿಶ್ವಸಂಸ್ಥೆಯು ೨೦೨೩ನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ಫೆಬ್ರವರಿಯ ಬಜೆಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿರಿಧಾನ್ಯಗಳನ್ನು “ಶ್ರೀ ಅನ್ನ” ಎಂದು ಕರೆದು, ಹೈದರಾಬಾದಿನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯನ್ನು ಶ್ರೇಷ್ಠತೆಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದರು.
ಸಿರಿಧಾನ್ಯಗಳಾದ ಜೋಳ, ಬಾಜ್ರಾ ಮತ್ತು ರಾಗಿ ಭಾರತೀಯ ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಹಾಗಾಗಿಯೇ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ದೇಶವಾಗಿದೆ. ಈ ಧಾನ್ಯಗಳು ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ್ದು, ಶುಷ್ಕ ಮಣ್ಣಿನಲ್ಲೂ ಸುಲಭವಾಗಿ ಬೆಳೆಯುತ್ತದೆ ಮತ್ತು ಅಕ್ಕಿ, ಗೋಧಿಯಂತಹ ಧಾನ್ಯಗಳಿಗೆ ಹೋಲಿಸಿದರೆ ರೋಗಗಳಿಗೆ ತುತ್ತಾಗುವುದು ಕಡಿಮೆಯಾದ್ದರಿಂದ ಇವು ಜನಪ್ರಿಯವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ೧೯೬೦ರ ದಶಕದ ಹಸಿರು ಕ್ರಾಂತಿಯ ಸಂಧರ್ಭದಲ್ಲಿ ಈಗ ‘ಸೂಪರ್ ಫುಡ್’ ಎನಿಸಿರುವ ಸಿರಿ ಧಾನ್ಯಗಳು ಬದಿಗೆ ಸರಿಯಲು ಕಾರಣ ಅಕ್ಕಿ ಮತ್ತು ಗೋಧಿಯ ಅಧಿಕ ಇಳುವರಿ ಕೊಡುವ ತಳಿಗಳ ಅಭಿವೃದ್ಧಿಯಷ್ಟೇ. ಈ ನೂತನ ತಳಿಗಳು ಸಿರಿಧಾನ್ಯಗಳಿಗಿಂತ ಎಕೆರೆಗೆ ಎರಡು ಮೂರು ಪಟ್ಟು ಇಳುವರಿ ನೀಡುತ್ತಿದ್ದವು. ಅಕ್ಕಿ-ಗೋಧಿ ಸಂಯೋಜನೆಯು ಬರಗಾಲ ಮತ್ತು ಹವಾಮಾನ ವೈಪರೀತ್ಯದ ನಡುವೆಯೂ ಭಾರತವನ್ನು ಆಹಾರ ಸುರಕ್ಷಿತವಾಗಿರಿಸಲು ಅನುವು ಮಾಡಿಕೊಟ್ಟಿತು. ಆದರೆ ಈ ಆಹಾರ ಭದ್ರತೆಯು ಅಂತರ್ಜಲದ ಅನಪೇಕ್ಷಿತ ಶೋಷಣೆ, ಕೀಟನಾಶಕದ ಅತಿಬಳಕೆ ಮತ್ತು ಧಾನ್ಯ ಸಂಗ್ರಹಣೆಯಲ್ಲಿ ಸೋರಿಕೆಯ ಕಾರಣ ದೀರ್ಘಾವಧಿಯಲ್ಲಿ ರೈತನಿಗೆ ಹೆಚ್ಚು ಲಾಭದಾಯಕವಾಗಿಲ್ಲ. ೧೯೬೦ರ ದಶಕದಿಂದ ಸರಾಸರಿ ಜಾಗತಿಕ ಆದಾಯವು ಹೆಚ್ಚುತ್ತಿದೆ ಮತ್ತು ‘ಸುಸ್ಥಿರ ಕೃಷಿ’ ಗಾಗಿ ಬೇಡಿಕೆ ಹೆಚ್ಚುತ್ತಿದ್ದು ಭಾರತವು ಸಿರಿಧಾನ್ಯಗಳನ್ನು ಜಾಗತಿಕ ಸಂಜೀವಿನಿಯಂತೆ ಮಾರುಕಟ್ಟೆ ಒದಗಿಸಲು ನೋಡುತ್ತಿದೆ. ಆದರೆ ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಜಾಗತಿಕ ಧಾನ್ಯಗಳ ಉತ್ಪಾದನೆಯ ಶೇ. ೮೯ರಷ್ಟು ಅಕ್ಕಿ, ಗೋಧಿ ಮತ್ತು ಮೆಕ್ಕೆ ಜೋಳವೇ ಆಗಿದ್ದು ಇದರೊಂದಿಗೆ ಸ್ಪರ್ಧಿಸಲು ಸಿರಿಧಾನ್ಯಗಳ ಉತ್ಪಾದನೆಯು ಈಗಿರುವದಕ್ಕಿಂತ ಅನೇಕ ಪಟ್ಟು ಹೆಚ್ಚಾಗಬೇಕು. ಜೋಳ ಮತ್ತು ಬಾಜ್ರಾದ ಹೈಬ್ರಿಡ್ ಪ್ರಭೇದಗಳನ್ನು ಅಭಿವೃದ್ಧಿಪಡಿಸಲಾಗಿದ್ದರೂ ಅವುಗಳ ಉತ್ಪಾದನೆ ಗುರುತರ ಏರಿಕೆಯಾಗಿಲ್ಲ ಎಂಬುದು ತಾಂತ್ರಿಕವಾಗಿ ತಳಿಗಳ ಅಭಿವೃದ್ಧಿಯಿಂದ ಮಾತ್ರ ಉತ್ಪಾದನೆ ಹೆಚ್ಚಾಗುವುದಿಲ್ಲ ಎಂಬುದನ್ನು ತೋರುತ್ತದೆ. ಆಹಾರದ ಪದ್ಧತಿಯ ಪಲ್ಲಟಗಳು ನಿಧಾನವಾದ ಪ್ರಕ್ರಿಯೆ. ಈ ಸನ್ನಿವೇಶದಲ್ಲಿ ಕೆಲವು ಧಾನ್ಯಗಳನ್ನು ಉನ್ನತ ಅಥವಾ ಕೀಳು ಎಂದು ಪ್ರಚಾರ ಮಾಡುವುದು ಸಮಂಜಸವಲ್ಲ. ಏಕೆಂದರೆ ಇದು ಉತ್ಪಾದನೆಯ ಅರ್ಥಶಾಸ್ತ್ರವನ್ನು ನಿರ್ಲಕ್ಷಿಸುತ್ತದೆ ಮತ್ತು ವಾಣಿಜ್ಯ ಬೆಳೆಗಳಲ್ಲಿಯಂತೆ ಬುಗ್ಗೆಗಳನ್ನು ಸೃಷ್ಟಿಸುತ್ತವೆ. ಇದು ಸಣ್ಣ ರೈತರ ಮೇಲೆ ಅಡ್ಡ ಪರಿಣಾಮಗಳನ್ನು ಬೀರಬಹುದು. ಎಲ್ಲಾ ಧಾನ್ಯಗಳು ಬೆಳೆಯಲು ಅವಕಾಶ ನೀಡುವುದು ಮತ್ತು ಗ್ರಾಹಕರು ಅವರು ಬಯಸಿದ ಧಾನ್ಯವನ್ನು ತಿನ್ನುವುದಕ್ಕೆ ಅನುವು ಮಾಡಿಕೊಡುವುದು ಹೆಚ್ಚು ಸುಸ್ಥಿರ ಕ್ರಮವಾಗಿದೆ.
This editorial has been transated from English, which can be read here.