ಕಾನೂನುಬದ್ಧತೆ ಮತ್ತು ರಾಜಕೀಯ ಸಮ್ಮತಿಯ ನಡುವಿನ ಅಂತರವು ಹಲವು ಬಾರಿ ಗಣನೀಯವಾಗಿರುತ್ತದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಕ್ಷೇತ್ರ ಮರುವಿಂಗಡಣೆ ಆಯೋಗದ ರಚನೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು ಮತ್ತು ನಂತರದ ಮರುವಿಂಗಡಣೆ ಪ್ರಕ್ರಿಯೆಯು ಹೊಸ ರಾಜ್ಯಗಳನ್ನು ರಚಿಸಲು, ಅಸ್ತಿತ್ವದಲ್ಲಿರುವ ರಾಜ್ಯಗಳ ಸ್ಥಾನಮಾನ ಮತ್ತು ಗಡಿಗಳನ್ನು ಬದಲಾಯಿಸಲು ಸಂಸತ್ತಿಗೆ ಅಧಿಕಾರ ನೀಡುವ ಸಾಂವಿಧಾನಿಕ ನಿಬಂಧನೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, ೨೦೧೯ರ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿದೆ. ಆದರೆ ಇದು ಕೇಂದ್ರಾಡಳಿತ ಪ್ರದೇಶದಲ್ಲಿ ಕ್ಷೇತ್ರಗಳ ಮರುವಿಂಗಡಣೆಗೆ ತೆರಬೇಕಾದ ಅದರ ರಾಜಕೀಯ ಬೆಲೆಯ ಹೊರತಾಗಿಯೂ ಕಾನೂನು ನೀಡಿದ ಮುಕ್ತ ಪರವಾನಗಿ ಎಂದು ನೋಡುವುದು ತಪ್ಪಾಗುತ್ತದೆ. ಆಗಸ್ಟ್ ೨೦೧೯ ರಲ್ಲಿ ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೆ ಇಳಿಸಲ್ಪಟ್ಟ ಜಮ್ಮು ಕಾಶ್ಮೀರದ ಬಹುತೇಕ ರಾಜಕೀಯ ಪಕ್ಷಗಳು, ಜಮ್ಮುವಿನಲ್ಲಿ ಆರು ಸ್ಥಾನಗಳನ್ನು ಮತ್ತು ಕಾಶ್ಮೀರ ಕಣಿವೆಯಲ್ಲಿ ಒಂದು ಸ್ಥಾನವನ್ನು ಹೆಚ್ಚಿಸಿ ಒಟ್ಟು ಸ್ಥಾನಗಳನ್ನು ೯೦ಕ್ಕೇರಿಸುವ ಆಯೋಗದ ವರದಿಯನ್ನು ವಿರೋಧಿಸಿವೆ. ಈ ಪಕ್ಷಗಳು ಆಯೋಗದ ವರದಿಯನ್ನು ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರಾಂತ್ಯದ ಪ್ರಾಮುಖ್ಯತೆಯನ್ನು ದುರ್ಬಲಗೊಳಿಸುವ ಮತ್ತು ಜಮ್ಮುವಿನಲ್ಲಿ ನೆಲೆ ಹೊಂದಿರುವ ಪಕ್ಷಗಳನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಕಂಡಿವೆ. ಅವರು ಇದನ್ನು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ, ಸವಲತ್ತುಗಳನ್ನು ಕಸಿದುಕೊಳ್ಳುವ ಮತ್ತು ಈ ಪ್ರಾಂತ್ಯದ ರಾಜಕೀಯವನ್ನು ಆಡಳಿತ ಪಕ್ಷದ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸುವ ಯೋಜನೆಯ ವಿಸ್ತರಣೆಯಾಗಿ ಕಾಣುತ್ತಾರೆ. ಇದಕ್ಕೆ ಜನಸಮ್ಮತಿಯ ಪ್ರಶ್ನೆಗೆ ಚುನಾವಣೆಯ ಫಲಿತಾಂಶವೇ ಉತ್ತರವಾಗಬಲ್ಲದು. ಆದರೆ ಕ್ಷೇತ್ರಗಳ ಮರುವಿಂಗಡಣೆಯು ಆ ಪ್ರಕ್ರಿಯೆಯ ಮೇಲೂ ಕರಿನೆರಳು ಬೀರಬಲ್ಲದು.
ಕ್ಷೇತ್ರ ಮರುವಿಂಗಡಣಾ ಆಯೋಗದ ರಚನೆಯನ್ನು ಪ್ರಶ್ನಿಸಿದ ಅರ್ಜಿಯು ಸಮಿತಿಯು ತನ್ನ ಕರಡು ಆದೇಶವನ್ನು ಪ್ರಕಟಿಸಿದ ನಂತರ ಸಲ್ಲಿಸಲಾಗಿದ್ದು, ಇದೊಂದು ವಿಳಂಬದ ನಡೆಯಾಗಿದೆ. ೨೦೨೬ರ ನಂತರ ನಡೆಯುವ ಮೊದಲ ಜನಗಣತಿಯ ನಂತರದವರೆಗೂ ದೇಶಾದ್ಯಂತ ಕ್ಷೇತ್ರ ಮರುವಿಂಗಡಣೆಯನ್ನು ತಡೆ ಹಿಡಿದಿರುವುದರಿಂದ ಈ ಆಯೋಗದ ರಚನೆ ಕಾನೂನು ಬಾಹಿರ ಎಂಬ ಈ ಅರ್ಜಿಯ ಪ್ರಮುಖ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ಈ ಕುರಿತು ಪ್ರಸ್ತಾಪಿಸುವ ೧೭೦ನೇ ವಿಧಿಯು ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಲ್ಲ ಎಂದು ಅದು ಅಭಿಪ್ರಾಯ ಪಟ್ಟಿದೆ. ಮೇಲಾಗಿ ಜಮ್ಮು ಕಾಶ್ಮೀರಕ್ಕೆ ತನ್ನದೇ ಆದ ಮರುಸಂಘಟನೆಯ ಕಾನೂನಿದ್ದು, ಅದರಡಿಯಲ್ಲಿ ದೇಶದ ಇತರ ಭಾಗಗಳಿಗಿಂತ ಭಿನ್ನವಾಗಿ ೨೦೧೧ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆಗೆ ಅವಕಾಶವಿದೆ ಎಂದು ಅದು ಸೂಚಿಸಿದೆ. ಇತರೆಡೆ ೨೦೦೧ರ ಜನಗಣತಿಯ ಆಧಾರದ ಮೇಲೆ ಕಡೆಯ ಬಾರಿ ಕ್ಷೇತ್ರ ಮರುವಿಂಗಡಣೆ ಮಾಡಲಾಗಿತ್ತು. ಮರುಸಂಘಟನೆ ಕಾಯ್ದೆಯ ಕೆಲವು ನಿಬಂಧನೆಗಳು ಅಸಾಂವಿಧಾನಿಕವಾಗಿದೆ ಎಂಬ ವಾದವನ್ನು ಅದು ತಿರಸ್ಕರಿಸಿತು ಮತ್ತು ಈ ನಿಬಂಧನೆಗಳನ್ನು ನಿರ್ದಿಷ್ಟವಾಗಿ ಪ್ರಶ್ನಿಸಲಾಗಿಲ್ಲ ಎಂಬುದನ್ನು ಅದು ಎತ್ತಿ ತೋರಿತು. ಕ್ಷೇತ್ರ ಮರುವಿಂಗಡಣೆ ಆಯೋಗದ ರಚನೆಯನ್ನು, ಅದಕ್ಕೆ ನೀಡಿದ ಹಲವು ಗಡುವು ವಿಸ್ತರಣೆಗಳನ್ನು ಮತ್ತು ಸದ್ಯ ಮಾನ್ಯ ಎಂದು ಭಾವಿಸಲಾದ ಕಾನೂನುಗಳ ಆಧಾರದ ಮೇಲೆ ಅದು ತೆಗೆದುಕೊಂಡ ನಿರ್ಧಾರಗಳನ್ನು ಎತ್ತಿ ಹಿಡಿದ ನ್ಯಾಯಾಲಯದ ಕ್ರಮ ಸರಿಯಿದ್ದಿರಬಹುದು. ಆದರೆ ಇದು ೨೦೧೯ರಲ್ಲಿ ಜಮ್ಮು ಕಾಶ್ಮೀರದ ರಾಜ್ಯತ್ವ ಮತ್ತು ವಿಶೇಷ ಸ್ಥಾನಮಾನಗಳ ಹಿಂಪಡೆಯುವಿಕೆಯ ಸಿಂಧುತ್ವದ ಪ್ರಶ್ನೆ ಇತ್ಯರ್ಥ ಆಗುವವರೆಗೆ ಜಮ್ಮು ಕಾಶ್ಮೀರದ ಜನತೆಯ ರಾಜಕೀಯ ಭವಿಷ್ಯದ ಬಗೆಗಿನ ನಿರ್ಧಾರಗಳಲ್ಲಿ ಅವರ ಅಭಿಪ್ರಾಯಗಳಿಗೆ ನೆಲೆಯಿಲ್ಲವೆನಿಸುವಂತವು.
This editorial has been translated from English, which can be read here.