ಕಾನೂನಿನ ಕಠೋರತೆ ಮತ್ತು ರಾಜಕೀಯದ ಏಳುಬೀಳುಗಳು ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಚ್ಚಿ ಬೀಳುವಂತೆ ಮಾಡಿವೆ. ೨೦೧೯ರ ಚುನಾವಣಾ ಸಮಯದಲ್ಲಿ ಅವರು “ಎಲ್ಲಾ ಕಳ್ಳರ ಹೆಸರಿನ ಕೊನೆಯಲ್ಲಿ ಮೋದಿ ಅಂತಲೇ ಇದೆಯಲ್ಲ?” ಎಂದು ನೀಡಿದ ಹೇಳಿಕೆಯನ್ನು ಮಾನಹಾನಿಕರ ಎಂದು ಸೂರತ್ನ ನ್ಯಾಯಾಲಯವು ಘೋಷಿಸಿದೆ. ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟಕ್ಕಾಗಿ ನೀಡಬಹುದಾದ ಗರಿಷ್ಠ ಶಿಕ್ಷೆಯಾದ ಎರಡು ವರ್ಷಗಳ ಸಜೆಯನ್ನು ವಿಧಿಸಿದೆ. ಇದರಿಂದ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಅವರನ್ನು ಅಪರಾಧಿ ಎಂದು ಹೇಳಿದ ತೀರ್ಪು ಮತ್ತು ಶಿಕ್ಷೆಯ ಪ್ರಮಾಣ ಎರಡರ ಬಗ್ಗೆಯೂ ಕಾನೂನು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಟೀಕೆಯು ನಿರ್ದಿಷ್ಟವಾಗಿ ಕೆಲವರ ಕುರಿತಾಗಿ ಇದೆಯೇ ಅಥವಾ ‘ಮೋದಿ’ ಎಂಬ ಉಪನಾಮವನ್ನು ಹೊಂದಿರುವ ಎಲ್ಲರಿಗೂ ಮಾನಹಾನಿ ಮಾಡುವಂತಿದೆಯೇ? ಈ ಕುರಿತು ಭಾರತ ದಂಡ ಸಂಹಿತೆಯ ಸೆಕ್ಷನ್ ೪೯೯ ಮಾನಹಾನಿ ಆಗಬಹುದಾದ “ವ್ಯಕ್ತಿಗಳ ಗುಂಪು” ಒಂದು ಗುರುತಿಸಬಹುದಾದ ವರ್ಗ ಅಥವಾ ಗುಂಪಾಗಿರಬೇಕು ಎಂದು ಹೇಳುತ್ತದೆ ಮತ್ತು ಮಾನನಷ್ಟಕ್ಕಾಗಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡುವವರು ವೈಯಕ್ತಿಕವಾಗಿ ಮಾನಹಾನಿ ಆಗಿರುವುದನ್ನು ನಿರೂಪಿಸಬೇಕು ಎಂದೂ ಕಾನೂನು ಹೇಳುತ್ತದೆ. ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದಂತೆ ಒಟ್ಟು ಮೂವರನ್ನು ಉದ್ದೇಶಿಸಿದ್ದ ರಾಹುಲ್ ಗಾಂಧಿಯವರ ಹೇಳಿಕೆಯಿಂದ ಈ ಮೂವರಲ್ಲದೆ ಮೋದಿ ಎಂಬ ಉಪನಾಮ ಹೊಂದಿದವರೆಲ್ಲರಿಗೂ ಮಾನಹಾನಿ ಆಗಿದೆ ಎಂದು ವಾದಿಸುವುದು ಕಷ್ಟ. ಅಲ್ಲದೆ ದೂರುದಾರ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ವೈಯಕ್ತಿಕವಾಗಿ ಅಥವಾ ‘ಮೋದಿ’ ಗುಂಪಿನ ಸದಸ್ಯರಾಗಿ ರಾಹುಲ್ ಗಾಂಧಿಯವಾರ ಹೇಳಿಕೆಯಿಂದ ಮಾನಹಾನಿ ಆಗಿದೆ ಎಂದು ನಿರೂಪಿಸಿದ್ದಾರೆಯೇ ಎಂಬುದು ಸ್ಪಷ್ಟವಿಲ್ಲ.
ಈ ಪ್ರಕರಣದಲ್ಲಿ ರಾಹುಲ್ ಗಾಂಧಿಯವರಿಗೆ ಗರಿಷ್ಠ ಸಜೆ ನೀಡಿರುವುದೂ ಸಮಸ್ಯಾತ್ಮಕವಾಗಿದೆ. ಕೆಳಹಂತದ ನ್ಯಾಯಾಲಯಗಳು ಅಪರಾಧದ ಗುರುತ್ವಕ್ಕೆ ಅನುಗುಣವಾಗಿ ಶಿಕ್ಷೆಯನ್ನು ನೀಡಲು ಸಹಾಯಕವಾಗಿ ಕಾನೂನು ಗರಿಷ್ಠ ಸಜೆಯನ್ನು ಸೂಚಿಸುತ್ತದೆ. ಒಂದು ಅನಿರ್ದಿಷ್ಟ ಜನರ ಗುಂಪನ್ನು ಗುರಿ ಮಾಡಿ ನೀಡಿದ ಸಾಮಾನ್ಯ ಹೇಳಿಕೆಯೊಂದು ಮಾನನಷ್ಟವಾಗುತ್ತದೆಯೇ ಮತ್ತು ಅದು ಮಾನಹಾನಿಕರವಾಗಿದ್ದರೂ ಸಹ ಗರಿಷ್ಠ ಸಜೆ ನೀಡುವಷ್ಟು ಗಂಭೀರವಾಗಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ. ತೀರ್ಪಿನ ಸರಿ ತಪ್ಪುಗಳು ಮೇಲ್ಮನವಿಯ ಸಂಧರ್ಭದಲ್ಲಿ ನಿರ್ಧಾರಿತವಾಗುತ್ತದೆ. ಆದರೆ ರಾಹುಲ್ ಗಾಂಧಿಯವರು ಆಗಲೇ ಸದನದಿಂದ ಅನರ್ಹಗೊಂಡಿದ್ದು ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಇದು ಅವರ ರಾಜಕೀಯ ಬದುಕಿನ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ. ಅವರು ಅನರ್ಹತೆಯನ್ನು ತಡೆಯಬೇಕೆಂದರೆ ಈ ಕೂಡಲೇ ಮೇಲ್ಮನವಿ ಹೋಗಿ ಜಾಮೀನು ಅಷ್ಟೇ ಅಲ್ಲ ಕೆಳ ಹಂತದ ನ್ಯಾಯಾಲಯದ ಒಟ್ಟು ತೀರ್ಪಿಗೇ ತಡೆಯಾಜ್ಞೆ ತರಬೇಕು. ಅಪರಾಧೀಕರಣ, ಭ್ರಷ್ಟಾಚಾರ ಮತ್ತು ದ್ವೇಷದ ಭಾಷಣಗಳಿಂದ ರಾಜಕೀಯ ಕೆಟ್ಟಿದೆ ಎಂದು ಹಲುಬುವ ಈ ದೇಶದಲ್ಲಿ ಮಾನನಷ್ಟ ಪ್ರಕರಣವೊಂದು ಒಬ್ಬ ಪ್ರಮುಖ ನಾಯಕನ ರಾಜಕೀಯ ಜೀವನಕ್ಕೆ ಹೊಡೆತ ನೀಡುತ್ತಿರುವುದು ವಿಪರ್ಯಾಸ. ಆಧುನಿಕ ಪ್ರಜಾಪ್ರಭುತ್ವವು ಮಾನನಷ್ಟವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಬಾರದು. ಇದು ಅಧಿಕಾರಸ್ಥರನ್ನು ಪ್ರಶ್ನಿಸುವುದೇ ಅಪರಾಧ ಎಂದು ಬಗೆದ ಯುಗದ ಪಳೆಯುಳಿಕೆಯೇ ಆಗಿದೆ. ಇಂದು ಕ್ರಿಮಿನಲ್ ಮಾನನಷ್ಟ ಪ್ರಕರಣಗಳು ಮುಖ್ಯವಾಗಿ ಸಾರ್ವಜನಿಕ ಸೇವಕರು ಮತ್ತು ಕಾರ್ಪೊರೇಟ್ ಕಂಪೆನಿಗಳ ವಿರುದ್ಧದ ಟೀಕೆಗಳನ್ನು ನಿಗ್ರಹಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ. ೨೦೧೬ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಮಾನನಷ್ವ ಪ್ರಕರಣಗಳು ವಾಕ್ ಸ್ವಾತಂತ್ರ್ಯದ ಮೇಲೆ ಉಂಟುಮಾಡುವ ಪರಿಣಾಮವನ್ನು ಸಮರ್ಪಕವಾಗಿ ಪರಿಗಣಿಸದೆ ಎತ್ತಿಹಿಡಿಯಿತು. ಅದು ಈಗ ರಾಜಕೀಯ ವಿರೋಧ ಮತ್ತು ಭಿನ್ನಾಭಿಪ್ರಾಯಗಳನ್ನು ನಿಗ್ರಹಿಸುವುದನ್ನೂ ಪರಿಗಣಿಸಬೇಕಾಗಿದೆ. ಇಂದು ರಾಹುಲ್ ಗಾಂಧಿಯವರ ಪ್ರಕರಣದಲ್ಲಿನ ತೀರ್ಪಿನ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸುತ್ತಿರುವ ಎಲ್ಲ ವಿರೋಧ ಪಕ್ಷಗಳು ಮಾನನಷ್ಟವನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದನ್ನು ರದ್ದುಗೊಳಿಸಬೇಕೆಂಬ ಆಗ್ರಹವನ್ನು ತಮ್ಮ ಕಾರ್ಯಸೂಚಿಯ ಭಾಗವಾಗಿಸಿಕೊಳ್ಳಬೇಕು.
This editorial has been translated from English, which can be read here.
Published - March 25, 2023 11:09 am IST