ಈಗಾಗಲೇ ಸಾಕಷ್ಟು ಹಳೆಯದಾಗಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆ, ೨೦೦೦, ರ ಬದಲಿಗೆ ತರಲು ಪ್ರಸ್ತಾವಿತ ಡಿಜಿಟಲ್ ಇಂಡಿಯಾ ಆಕ್ಟ್, ೨೦೨೩, ರ ಮುಖ್ಯಾಂಶಗಳನ್ನು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಅವರು ಸರ್ಕಾರವು “ಅಂತರ್ಜಾಲದ ಎಲ್ಲ ಮಧ್ಯವರ್ತಿಗಳಿಗೆ ಸುರಕ್ಷಿತ ತಾಣ ಇರಬೇಕೆ?” ಎಂಬ ಪ್ರಶ್ನೆಯನ್ನು ಮರುಪರಿಶೀಲಿಸಲು ಬಯಸಿದೆ ಎಂದು ಹೇಳಿದ್ದು ಬರಲಿರುವ ಕಾನೂನು ಕಟ್ಟಳೆಗಳ ಸ್ವರೂಪದ ಬಗ್ಗೆ ಸೂಚನೆಯಾಗಿದ್ದು ದಿಗಿಲು ಹುಟ್ಟಿಸಿದೆ. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ನಿಯಮಗಳು, ೨೦೨೧, ಮತ್ತು ಅದಕ್ಕೆ ತರುವಾಯ ತಂದ ತಿದ್ದುಪಡಿಗಳಲ್ಲಿ ಈಗಾಗಲೇ ಅಂತರ್ಜಾಲದ ಮಧ್ಯವರ್ತಿಗಳ ಮೇಲಿನ ಅನುಸರಣೆ ಹೊರೆಯನ್ನು ಸರ್ಕಾರವು ಹೆಚ್ಚಿಸಿರುವುದರಿಂದ ಇದು ಮಹತ್ವ ಪಡೆಯುತ್ತದೆ. ಈ ನಿಯಮಗಳು ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗಳ ಮೇಲೆ ತಮ್ಮ ವೇದಿಕೆಗಳಲ್ಲಿ ಪ್ರಕಟವಾಗುವ ಎಲ್ಲ ವಿಷಯದ ಜವಾಬ್ದಾರಿಯನ್ನು ಹೊರಿಸಿತ್ತು. ಈ ನಿಯಮಗಳು ಸಂಪೂರ್ಣವಾಗಿ ಸರ್ಕಾರದ ಪರ ವಾವಾಲಿದ್ದವು. ಡಿಜಿಟಲ್ ಸುದ್ದಿ ಮಾಧ್ಯಮ ವೇದಿಕೆಗಳು ಈ ನಿಯಮಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಈ ಮಧ್ಯೆ ಅಕ್ಟೋಬರ್ ೨೦೨೨ರ ತಿದ್ದುಪಡಿಯು ಪ್ರಕಟಗೊಂಡ ವಿಷಯದ ಮೇಲೆ ಈ ಮಧ್ಯವರ್ತಿಗಳ ನಿರ್ಧಾರಗಳ ವಿರುದ್ಧ ವೈಯಕ್ತಿಕ ಬಳಕೆದಾರರ ಮೇಲ್ಮನವಿಗಳ ಮೇಲೆ ತೀರ್ಪು ನೀಡಲು ಸರ್ಕಾರದಿಂದ ಸಮಿತಿಗಳನ್ನು ನೇಮಿಸಲು ಅವಕಾಶ ನೀಡಿತು. ಜನವರಿ ೨೦೨೩ರಲ್ಲಿ ಸಚಿವಾಲಯವು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಅಥವಾ ಯಾವುದೇ ಇತರ ಸರ್ಕಾರಿ ಏಜೆನ್ಸಿಯಿಂದ “ನಕಲಿ” ಅಥವಾ “ಸುಳ್ಳು” ಎಂದು ಗುರುತಿಸಲಾದ ಸಾಮಾಜಿಕ ಮಾಧ್ಯಮ/ಸುದ್ದಿ ‘ಕಂಟೆಂಟ್’ (ವಸ್ತು ವಿಷಯ) ಅನ್ನು ತೆಗೆದುಹಾಕಬೇಕೆಂಬ ತಿದ್ದುಪಡಿಯನ್ನು ಪ್ರಸ್ತಾಪಿಸಿತು. ಒಟ್ಟಾರೆಯಾಗಿ ಇವುಗಳು ಈಗಾಗಲೇ ಮಧ್ಯವರ್ತಿಗಳಿಗೆ ಸುರಕ್ಷಿತ ತಾಣದ ರಕ್ಷಣೆಯನ್ನು ಅಪಾಯಕ್ಕೆ ಒಡ್ಡಿವೆ.
ಅಂತರ್ಜಾಲದಲ್ಲಿ ದ್ವೇಷ ಭಾಷಣ ಮತ್ತು ಸುಳ್ಳು ಮಾಹಿತಿಯ ನಿಯಂತ್ರಣವು ಅತ್ಯಗತ್ಯವಾಗಿದೆ ಮತ್ತು ಡಿಜಿಟಲ್ ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಎಲ್ಲ ಮಧ್ಯವರ್ತಿಗಳು ಇದರಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸಬೇಕಿದೆ. ಕಂಟೆಂಟ್ ಅನ್ನು ತೆಗೆದುಹಾಕುವ ಮೊದಲು ಅಥವಾ ಬಳಕೆದಾರರ ಖಾತೆಯನ್ನು ನಿಷ್ಕ್ರಿಯಗೊಳಿಸುವ ಮೊದಲು ಬಳಕೆದಾರರಿಗೆ ನೋಟೀಸ್ ನೀಡಬೇಕು ಮತ್ತು ಮಧ್ಯವರ್ತಿಗಳು ಕಾಲಕಾಲಕ್ಕೆ ಅನುಸರಣೆ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ನಿಯಮಗಳನ್ನು ಎಲ್ಲರೂ ಒಪ್ಪಿದ್ದಾರೆ. ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗಳು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಕಾನೂನು ಪರಿಣಾಮಗಳನ್ನು ತಪ್ಪಿಸಲು ಮಾತ್ರ ಬಳಕೆದಾರರ ಪೋಸ್ಟ್ಗಳನ್ನು ತೆಗೆಯಬೇಕು. ಆದರೆ ಮಧ್ಯವರ್ತಿಗಳ ಮೇಲಿನ ನಿಯಮಗಳು ಅನಾವಶ್ಯಕವಾಗಿ ದಂಡನೀಯವಾಗಬಾರದು, ಅಸಹನೀಯವಾಗಬಾರದು ಎಂದು ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಇದು ಸುರಕ್ಷಿತ ತಾಣದ ತತ್ವವನ್ನೇ ಹಾಳುಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ಆಳುವ ಪಕ್ಷದ ಪ್ರತಿನಿಧಿಗಳ ದ್ವೇಷ ಭಾಷಣ ಇಲ್ಲ ಹಂಚಿಕೊಂಡ ಸುಳ್ಳು ಮಾಹಿತಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮ/ಸುದ್ದಿ ವೇದಿಕೆಗಳಲ್ಲಿ ಅವರ ಕುರಿತು ಪ್ರಕಟವಾದ ವಿಮರ್ಶಾತ್ಮಕ ಅಭಿಪ್ರಾಯ ಅಥವಾ ಭಿನ್ನಾಭಿಪ್ರಾಯವನ್ನು ನಿಯಂತ್ರಿಸಲು ಅಥವಾ ತೆಗೆದುಹಾಕಲು ಸರ್ಕಾರವು ಉತ್ಸುಕವಾಗಿದೆ ಎಂಬ ಕಳವಳ ಇದೆ. ಯುಎಸ್ ಕಮ್ಯುನಿಕೇಷನ್ಸ್ ಡಿಸೆನ್ಸಿ ಆಕ್ಟ್, ೧೯೯೬ರ ಸೆಕ್ಷನ್ ೨೩೦, ಬಳಕೆದಾರ-ರಚಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅಂತರ್ಜಾಲ ವೇದಿಕೆಗಳಿಗೆ/ಮಧ್ಯವರ್ತಿಗಳಿಗೆ ಸ್ಪಷ್ಟವಾಗಿ ವಿನಾಯಿತಿ ಒದಗಿಸುವುದು ಅಂತರ್ಜಾಲದ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಬಹಳ ದೂರ ಸಾಗಿದೆ. ಇದನ್ನೇ ಸುರಕ್ಷಿತ ತಾಣ ತತ್ವ ಎಂದು ಕರೆಯಲಾಗುತ್ತದೆ. ತಪ್ಪು ಮಾಹಿತಿ, ಸಮಸ್ಯಾತ್ಮಕ ಕಂಟೆಂಟ್ ಮತ್ತು ಅಂತರ್ಜಾಲದ ಹೊಸ ರೂಪದ ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಆಧುನಿಕ ನಿಯಮಗಳು ಅತ್ಯಗತ್ಯವಾಗಿದ್ದರೂ, ಅವು ಸುರಕ್ಷಿತ ತಾಣದ ಮೂಲ ತತ್ವಗಳನ್ನು ಉಳಿಸಿಕೊಳ್ಳಬೇಕು.
This editorial has been translated from English, which can be read here.