ತೆರಿಗೆ ಪ್ರಸ್ತಾವನೆಯ ಜೂಜು

ಸುರಕ್ಷಿತ, ದೀರ್ಘಕಾಲೀನ ಉಳಿತಾಯದ ಕಡೆಗೆ ಜನರನ್ನು ಉತ್ತೇಜಿಸುವುದನ್ನು ಸರ್ಕಾರ ನಿಲ್ಲಿಸಬಾರದು

February 06, 2023 10:59 am | Updated 11:15 am IST

“ಡೀಫಾಲ್ಟ್” ತೆರಿಗೆ ವ್ಯವಸ್ಥೆಗೆ ಬದಲಾಗಲು ಆದಾಯ ಮತ್ತು ಉಳಿತಾಯ ತೆರಿಗೆದಾರರು ಯಾವ ಅಂಶಗಳನ್ನು ಪರಿಗಣಿಸಬೇಕು ಎಂದು ನಿರ್ಧರಿಸಲು ತಜ್ಞರು ಹಲವು ವಿಭಿನ್ನ ಲೆಕ್ಕಗಳನ್ನು ಪ್ರಸ್ತುತಪಡಿಸಿದ್ದಾರೆ. ದೀರ್ಘಾವಧಿಯಲ್ಲಿ “ಮಧ್ಯಮ ವರ್ಗದವರಿಗೆ ಸಾಮಾಜಿಕ ಭದ್ರತೆಯನ್ನು ನೀಡುವ” ಕೆಲವು ವಿನಾಯಿತಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸರ್ಕಾರವು ಹವಣಿಸುತ್ತಿದೆ ಎಂದು ಪ್ರತಿಪಕ್ಷವು ಕಳವಳ ವ್ಯಕ್ತಪಡಿಸಿದೆ. ಇದು ಉಳಿತಾಯ ದರ ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಉದ್ಯಮಪತಿಗಳು ಚಿಂತಿತರಾಗಿದ್ದಾರೆ. ಇಲ್ಲಿಯವರೆಗೆ, ಸರ್ಕಾರದ ವಂದಿಮಾಗಧರು ಇದು ಉಳಿತಾಯ ದರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ; ಕಡಿಮೆ ಆದಾಯ ಗಳಿಸುವವರು ತೆರಿಗೆ ವಿನಾಯಿತಿಗಳನ್ನು ಪಡೆಯಲು ಸಾಕಷ್ಟು ಉಳಿಸುವುದಿಲ್ಲ ಮತ್ತು ತತ್ಪರಿಣಾಮ ಹೆಚ್ಚಿನ ತೆರಿಗೆ ಪಾವತಿಸುತ್ತಾರೆ ಎಂದು ವಾದಿಸುತ್ತಾರೆ. “ಪ್ರಬುದ್ಧರಾಗಿ ನಿಮಗೆ ಯಾವುದು ಸರಿಹೊಂದುತ್ತದೆ ಎಂಬುದರ ಕುರಿತು ನಿಮಗೆ ನೀವೇ ಅತ್ಯುತ್ತಮ ನ್ಯಾಯಾಧೀಶರಾಗಿರಬೇಕು” ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಇವೆಲ್ಲವೂ ಪ್ರತ್ಯೇಕವಾಗಿ ಸರಿಯಾದ ವಾದಗಳೆ. ಆದರೆ ಇದರಿಂದ ಹೆಚ್ಚು ಲಾಭ ಪಡೆಯಲಿದ್ದಾರೆ ಎಂದು ಸರ್ಕಾರ ನಂಬಿರುವ ಕಡಿಮೆ ಆದಾಯ ಉಳ್ಳವರು ಬಹುತೇಕ ಬಾರಿ ಅವರ ಹಣಕಾಸಿನ ಬಗ್ಗೆ ಅತ್ಯುತ್ತಮ ತೀರ್ಪುಗಾರರಾಗುವ ಸ್ಥಿತಿಯಲ್ಲಿಲ್ಲ ಎಂಬ ವಾಸ್ತವವನ್ನು ಮನಗಾಣಬೇಕು.

ಭಾರತದ ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆಯ ಮಟ್ಟ ಹೇಗಿದೆ ಎಂದರೆ ಅನೇಕ ತೆರಿಗೆದಾರರು ಬಳಕೆ ಮತ್ತು ಉಳಿತಾಯದ ಸರಿಯಾದ ಮಿಶ್ರಣವನ್ನೆ ಆಯ್ದುಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ. ಪರಿಸ್ಥಿತಿ ಹೀಗಿರುವಾಗ ಸುರಕ್ಷಿತ ಹೂಡಿಕೆ ಮತ್ತು ಹಣದುಬ್ಬರ-ಹೊಡೆತ ಇವುಗಳನ್ನು ಸೂಕ್ತವಾಗಿ ಅರ್ಥ ಮಾಡಿಕೊಂಡು ಸರಿಯಾಗಿ ಹೂಡಿಕೆ ಮಾಡುವುದು ದೂರದ ಮಾತು. ಜನರು ಅರ್ಥಶಾಸ್ತ್ರಜ್ಞರು ಎಣಿಸಿದಷ್ಟು ತರ್ಕಬದ್ಧವಾಗಿ ವರ್ತಿಸುವುದಿಲ್ಲ. ಉದಾಹರಣೆಗೆ, ಈ ಹೊಸ ತೆರಿಗೆ ಪದ್ಧತಿ ಆಕರ್ಷಿಸುತ್ತದೆ ಎನ್ನಲಾದ ಹೆಚ್ಚಿನ ಟೇಕ್-ಹೋಮ್ ಸಂಬಳ ಪಡೆಯುವ ಯುವಕರು ಹುಚ್ಚು ಖರ್ಚು ಮಾಡುವುದನ್ನು ಕಾಣುತ್ತೇವೆ. ಮಾರುಕಟ್ಟೆಯ ಒಳಸುಳಿಗಳು ಮತ್ತು ಸೂಕ್ಷ್ಮ ವಿವರಗಳಲ್ಲಿ ಹುದುಗಿರುವ ಅಪಾಯಗಳನ್ನು ಅರ್ಥಮಾಡಿಕೊಳ್ಳಲು ಸಜ್ಜುಗೊಂಡಿಲ್ಲದ ಸಾಮಾನ್ಯರಿಗೆ ಮೋಸದಿಂದ ಹಣಕಾಸು ಉತ್ಪನ್ನಗಳನ್ನು ಮಾರುವುದು ವಾಡಿಕೆಯೇ ಆಗಿದೆ. ಇನ್ನೂ ಸಾರ್ವತ್ರಿಕ ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಪ್ರಯೋಜನಗಳನ್ನೇ ಒದಗಿಸಲು ಸಾಧ್ಯವಾಗದ ದೇಶದಲ್ಲಿ, ಹಳೆಯ ಸಾಂಪ್ರದಾಯಿಕ ವಿನಾಯಿತಿ-ಆಧಾರಿತ ತೆರಿಗೆ ವ್ಯವಸ್ಥೆಯು ಒಂದು ಕುಟುಂಬದ ಅನಿಶ್ಚಿತತೆಯನ್ನು ನಿಭಾಯಿಸಲು ವಿವೇಕಯುತ ಹೂಡಿಕೆ ಮತ್ತು ಅವರ ಸಂಪೂರ್ಣ ಶ್ರಮದ ಜೀವಮಾನದ ಗಳಿಕೆಯನ್ನು ತಲೆಯ ಮೇಲೊಂದು ಸೂರು ಎಂಬ ಪರಿಕಲ್ಪನೆಯಡಿ ಮನೆಯನ್ನು ಕಟ್ಟಲು ಉಪಯೋಗವಾಗುವಂತೆ ಹೂಡಿಕೆ ಮಾಡಲು ಅವರನ್ನು ಪ್ರೇರೇಪಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಷೇರುಗಳಲ್ಲಿ ಭಾರತದ ಚಿಲ್ಲರೆ ಭಾಗವಹಿಸುವಿಕೆ ಏರಿಕೆಯಾಗಿರಬಹುದು. ಆದರೆ ಎಲ್ಲರೂ ಈಕ್ವಿಟಿ ಮಾರುಕಟ್ಟೆಗಳ ಅಪಾಯಗಳನ್ನು ನಿಭಾಯಿಸಲು ಅಥವಾ ಪ್ರಭಾವಿ-ನಿರ್ವಾಹಕರಿಂದ ಅವರನ್ನು ಅವರು ಕಾಪಾಡಿಕೊಳ್ಳಲು ಶಕ್ಯರಲ್ಲ. ಆದ್ದರಿಂದ, ಹಳೆಯ ತೆರಿಗೆ ಪದ್ಧತಿಯಿಂದ ದೂರ ಸರಿಯುವುದು, ಹೆಚ್ಚಿದ ಆರ್ಥಿಕ ಸುರಕ್ಷತೆ ಮತ್ತು ಜನರನ್ನು ಬೀದಿಗೆ ತರಬಲ್ಲ ಅನೈತಿಕ ಮಾರಾಟಗಳ ಅಭ್ಯಾಸಗಳ ಮೇಲೆ ಶಿಸ್ತುಕ್ರಮ ಜರುಗಿಸುವುದರೊಂದಿಗೆ ಜೊತೆಗೂಡಿಸಬೇಕು. ಜನರು ಅವರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವುದಕ್ಕೆ ಸರ್ಕಾರದ ಪ್ರೋತ್ಸಾಹದ ಅಗತ್ಯವಿಲ್ಲ ಎನ್ನುವುದೇ ಆದರೆ ಭವಿಷ್ಯ ನಿಧಿ ಮತ್ತು ಪಿಂಚಣಿಗಳಿಗೆ ವಂತಿಗೆ ಕಟ್ಟುವುದನ್ನು ಕಡ್ಡಾಯ ಮಾಡುವ ಅಗತ್ಯವಿರಲಿಲ್ಲ.

This editorial has been translated from English, which can be read here.

0 / 0
Sign in to unlock member-only benefits!
  • Access 10 free stories every month
  • Save stories to read later
  • Access to comment on every story
  • Sign-up/manage your newsletter subscriptions with a single click
  • Get notified by email for early access to discounts & offers on our products
Sign in

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.