ಒಂದು ಹೆಜ್ಜೆ ಹಿಂದೆ

ಸಮಾಜದ ದೊಡ್ಡ ಭಾಗವನ್ನು ಎದುರು ಹಾಕಿಕೊಳ್ಳದೆ ನೆತನ್ಯಾಹು ತಮ್ಮ ಕಾರ್ಯಸೂಚಿಯನ್ನು ಜಾರಿ ಮಾಡಲಾಗುವುದಿಲ್ಲ

March 29, 2023 10:07 am | Updated 10:07 am IST

ಬೆಂಜಮಿನ್ ನೆತನ್ಯಾಹು ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಈ ಅವಧಿಗೆ ನಾಲ್ಕು ಪ್ರಮುಖ ಗುರಿಗಳನ್ನು ಹಾಕಿಕೊಂಡಿರುವುದಾಗಿ ತಿಳಿಸಿದ್ದರು: ಇರಾನ್ ಅನ್ನು ನಿಗ್ರಹಿಸುವುದು, ಇಸ್ರೇಲಿನ ಭದ್ರತೆ ಮತ್ತು ಆಡಳಿತವನ್ನು ಶಕ್ತಗೊಳಿಸುವುದು, ಜೀವನ ವೆಚ್ಚದ ಸಮಸ್ಯೆಯನ್ನು ನಿಭಾಯಿಸುವುದು ಮತ್ತು ಅರಬ್ಬರೊಂದಿಗೆ ‘ಶಾಂತಿಯ ವೃತ್ತ’ವನ್ನು ವಿಸ್ತರಿಸುವುದು. ಆದರೆ ಕಳೆದ ನಾಲ್ಕು ತಿಂಗಳುಗಳಲ್ಲಿ ಅವರ ಸರ್ಕಾರದ ಎಲ್ಲ ಗಮನವು ನ್ಯಾಯಾಂಗದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರುವ ಮಸೂದೆಗಳಿಗೆ ನೆಸೆಟ್‌ನ (ಅಲ್ಲಿನ ಸಂಸತ್ತು) ಒಪ್ಪಿಗೆ ಪಡೆಯುವುದೇ ಆಗಿದ್ದು, ಇದು ಹಿಂದೆಂದೂ ಕಾಣದಂತಹ ಪ್ರತಿಭಟನೆಗಳನ್ನು ಪ್ರಚೋದಿಸಿದೆ. ಇಸ್ರೇಲಿನ ಮಾನದಂಡಗಳ ಪ್ರಕಾರ ಆರಾಮದಾಯಕ ಬಹುಮತ ಹೊಂದಿರುವ ನೆತನ್ಯಾಹು ಅವರ ಸರ್ಕಾರ ಆರಂಭದಲ್ಲಿ ಪ್ರತಿಭಟನೆಗಳಿಗೆ ಸೊಪ್ಪು ಹಾಕಲಿಲ್ಲ. ಆದರೆ ಪ್ರತಿಭಟನೆಗಳು ಹೆಚ್ಚಾದಂತೆ ಬಂಡಾಯ ಭುಗಿಲೆದ್ದಿತು. ರಾಷ್ಟ್ರೀಯ ಭದ್ರತೆಗೆ ಅಪಾಯಗಳನ್ನು ಉಲ್ಲೇಖಿಸಿ ಸದ್ಯಕ್ಕೆ ಮಸೂದೆಗಳನ್ನು ಕೈಬಿಡಲು ಆಗ್ರಹಿಸಿದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ನೆತನ್ಯಾಹು ವಜಾಗೊಳಿಸಿದ್ದಾರೆ. ಆದರೆ ಬಿಕ್ಕಟ್ಟು ಈಗಾಗಲೇ ಅವರ ಕೈಮೀರಿ ಹೋಗಿದೆ. ಪ್ರತಿಭಟನೆಗಳು ಮತ್ತು ಇಡೀ ದೇಶವನ್ನೇ ಸ್ಥಗಿತಗೊಳಿಸಿದ ಮುಷ್ಕರದ ನಡುವೆ ಇಸ್ರೇಲ್ ಅನ್ನು ಅಂತರ್ಯುದ್ಧಕ್ಕೆ ತಳ್ಳಲು ಬಯಸದೆ ಸೋಮವಾರ ಪ್ರಧಾನಿ ನೆತನ್ಯಾಹು ಈ ಮಸೂದೆಗಳನ್ನು ಸದ್ಯಕ್ಕೆ ಅಮಾನತಿನಲ್ಲಿಡುವುದಾಗಿ ಘೋಷಿಸಿದರು. ಇದಕ್ಕೂ ಮೊದಲು ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಅವರು “ಅರಾಜಕತಾವಾದಿಗಳಿಗೆ ಶರಣಾಗುವುದರ” ವಿರುದ್ಧ ಪ್ರಧಾನಿಗೆ ಎಚ್ಚರಿಕೆ ನೀಡಿದ್ದರು ಮತ್ತು ಹಾಗೆ ಮಾಡಿದರೆ ಒಕ್ಕೂಟ ಸರ್ಕಾರವನ್ನು ತೊರೆಯುವುದಾಗಿ ಬೆದರಿಕೆ ಹಾಕಿದ್ದರು. ಆದರೆ ನೆತನ್ಯಾಹು ಅವರು ತಮ್ಮ ಮೈತ್ರಿಕೂಟದ ಒಗ್ಗಟ್ಟನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಹೂದಿ ಉಗ್ರವಾದಿ ನಾಯಕ ಬೆನ್-ಗ್ವಿರ್ ಅವರ ಬೆಂಬಲ ಉಳಿಸಿಕೊಳ್ಳಲು ರಾಷ್ಟ್ರೀಯ ಭದ್ರತಾ ಪಡೆಯನ್ನು ಅವರ ಸಚಿವಾಲಯದ ವ್ಯಾಪ್ತಿಗೆ ವರ್ಗ ಮಾಡಲಾಗುತ್ತಿದೆ. ೧೯೯೬ರಲ್ಲಿ ಶಿಮೊನ್ ಪೆರೆಸ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬೆಂಜಮಿನ್ ನೆತನ್ಯಾಹು ಅವರು ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಆದರೆ ಪ್ರಸ್ತುತ ಬಿಕ್ಕಟ್ಟು ಅವರು ಎದುರಿಸಿರುವ ಅತಿ ದೊಡ್ಡ ಸವಾಲು ಎನಿಸುತ್ತದೆ. ನೆತನ್ಯಾಹು ಅವರ ನಾಯಕತ್ವದಲ್ಲಿ ಇಸ್ರೇಲಿನ ರಾಜಕೀಯ ಉಗ್ರ-ಬಲಪಂಥಕ್ಕೆ ವಾಲಿದೆ. ಅದರ ಫಲವಾಗಿ ಪ್ರಸ್ತುತ ಸರ್ಕಾರವು ಬಲಪಂಥೀಯ (ಲಿಕುಡ್), ಧಾರ್ಮಿಕ (ಶಾಸ್ ಮತ್ತು ಯುನೈಟೆಡ್ ಟೋರಾ ಜುದಾಯಿಸಂ) ಮತ್ತು ಉಗ್ರ-ಬಲಪಂಥೀಯ (ಧಾರ್ಮಿಕ ಜಿಯೋನಿಸ್ಟ್ ಮತ್ತು ಓಟ್ಜ್ಮಾ ಯೆಹೂದಿತ್) ಪಕ್ಷಗಳನ್ನು ಒಳಗೊಂಡಿದೆ. ನ್ಯಾಯಾಂಗದ ಮೇಲ್ವಿಚಾರಣೆ ಮತ್ತು ಅದು ತರುತ್ತಿರುವ ಸಮತೋಲನಗಳು ದೇಶವು ತನ್ನ ನಿಜವಾದ ಯಹೂದಿ ಗುರುತನ್ನು ಪಡೆಯುಲು ಅಡ್ಡಿಯಾಗುತ್ತಿವೆ ಎಂದು ಉಗ್ರ ಬಲಪಂಥೀಯರು ಬಹುಕಾಲದಿಂದ ವಾದಿಸುತ್ತಾ ಬಂದಿದ್ದಾರೆ. ನ್ಯಾಯಾಂಗ ನೇಮಕಾತಿಗಳ ಮೇಲೆ ಸಂಸತ್ತಿಗೆ ನಿಯಂತ್ರಣವನ್ನು ನೀಡುವ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಅತಿಕ್ರಮಿಸುವ ಅಧಿಕಾರ ನೀಡುವ ಯೋಜಿತ ನ್ಯಾಯಾಂಗ ಸುಧಾರಣೆಗಳು ಈ ವಾದದ ಮುಂದುವರಿಕೆಯೇ ಆಗಿದೆ. ನೆತನ್ಯಾಹು ಮತ್ತು ಅವರ ಮಿತ್ರರು ಪ್ಯಾಲೆಸ್ಟೈನ್‌ನ ಆಕ್ರಮಣ ಅಥವಾ ಇಸ್ರೇಲಿನ ಭಧ್ರತೆಗೆ ಅಪಾಯಗಳನ್ನು ಎದುರಿಸುವ ಕುರಿತು ಜನರನ್ನು ಒಪ್ಪಿಸಿದ್ದಾರಾದರೂ ದೇಶದ ಒಳಗೆ ಅವರು ಹೆಚ್ಚಿನ ಅಧಿಕಾರವನ್ನು ಕ್ರೋಢೀಕರಿಸಲು ಹೊರಟಿದ್ದಕ್ಕೆ ರಕ್ಷಣಾ ವಲಯವೂ ಸೇರಿದಂತೆ ಸಮಾಜದಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಮಸೂದೆಗಳನ್ನು ಜಾರಿ ಮಾಡುವುದನ್ನು ಸದ್ಯಕ್ಕೆ ಅಮಾನತಿನಲ್ಲಿಡುವುದರಿಂದ ನೆತನ್ಯಾಹು ಅವರು ಈ ಬಿಕ್ಕಟ್ಟನ್ನು ಪರಿಹರಿಸಿಲ್ಲ, ಮುಂದೂಡಿದ್ದಾರೆ ಅಷ್ಟೇ. ಒಂದು ತಿಂಗಳ ಬಳಿಕ ಈ ಕುರಿತು ಒಮ್ಮತ ಮೂಡಿಸಿ ಮಸೂದೆಗಳನ್ನು ಮತ್ತೆ ನೆಸೆಟ್‌ಗೆ ತರುವುದಾಗಿ ಅವರು ಭರವಸೆ ನೀಡಿದ್ದಾರೆ. ರಾಜತಾಂತ್ರಿಕ ಅಧಿಕಾರಿಗಳೂ ಮುಷ್ಕರ ಹೂಡಿದ ಈ ವಿಷಯವಾಗಿ ರಾಷ್ಟ್ರವ್ಯಾಪಿ ಒಮ್ಮತ ಹೇಗೆ ಮೂಡುತ್ತದೆ ಎಂದು ಊಹಿಸಿವುದು ಕಷ್ಟ. ಇದರ ಬದಲಿಗೆ ತಮ್ಮ ಮಿತ್ರಪಕ್ಷಗಳಿಗೆ ಬಿಕ್ಕಟ್ಟಿನ ತೀವ್ರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ನ್ಯಾಯಾಂಗವನ್ನು ದುರ್ಬಲಗೊಳಿಸುವ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟು ಇಸ್ರೇಲ್ ಎದುರಿಸುತ್ತಿರುವ ಇತರೆ ಸವಾಲುಗಳ ಮೇಲೆ ಸರ್ಕಾರ ಗಮನ ಕೇಂದ್ರೀಕರಿಸಬೇಕು.

This editorial has been translated from English, which can be read here.

0 / 0
Sign in to unlock member-only benefits!
  • Access 10 free stories every month
  • Save stories to read later
  • Access to comment on every story
  • Sign-up/manage your newsletter subscriptions with a single click
  • Get notified by email for early access to discounts & offers on our products
Sign in

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.