ಯುಕೆಗೆ ಅಕ್ರಮವಾಗಿ ತಲುಪುವ ವಲಸಿಗರಿಗೆ ಆಶ್ರಯ ನೀಡುವುದನ್ನು ಪರಿಣಾಮಕಾರಿಯಾಗಿ ತಡೆಯುವ ಹೊಸ “ಅಕ್ರಮ ವಲಸೆ ಕಾನೂನ”ನ್ನು ಅಂಗೀಕರಿಸುವ ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ಯೋಜನೆಯನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮೀಷನರ್ ಬಲವಾಗಿ ಖಂಡಿಸಿದ್ದಾರೆ. ಸುನಕ್ ಅವರು “ದೋಣಿಗಳನ್ನು ನಿಲ್ಲಿಸಿ” ಎಂಬ ಘೋಷವಾಕ್ಯವಿರುವ ವೇದಿಕೆಯ ಮೇಲೆ ನಿಂತು ಅಕ್ರಮವಾಗಿ ಯುಕೆಗೆ ಪ್ರಯಾಣಿಸಿ ಬ್ರಿಟಿಷ್ ನೆಲದಲ್ಲಿದ್ದಾಗ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯು ಹೆಚ್ಚುತ್ತಿರುವ ಬಗ್ಗೆ ಸರ್ಕಾರವು ಚಿಂತಿತವಾಗಿದೆ ಎಂದು ಹೇಳಿದರು. ಇದು ದೇಶದ ಬೊಕ್ಕಸಕ್ಕೆ ಹೊರೆ ಎಂದು ಅವರು ಹೇಳಿದರು. ಈ ವಾರ ಮಸೂದೆಯನ್ನು ಪರಿಚಯಿಸುವಾಗ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ಮನ್ ವಿವರಿಸಿದಂತೆ, ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುವವರನ್ನು ತಮ್ಮ ಸ್ವಂತ ದೇಶಗಳಿಗೆ ಅಥವಾ “ಮೂರನೇ ದೇಶ”ಕ್ಕೆ ಒಯ್ದು ಬಿಡಲಾಗುವುದು ಎಂದರು. ಅಕ್ರಮ ವಲಸಿಗರಿಗೆ ಅವರು ಆಶ್ರಯಕ್ಕೆ ಅರ್ಜಿ ಸಲ್ಲಿಸುವ ಕಾಲದಲ್ಲಿ ಸಂಸ್ಕರಣಾ ಸೌಲಭ್ಯಗಳನ್ನು ಒದಗಿಸಲು ರುವಾಂಡಾ ಒಪ್ಪಂದ ಮಾಡಿಕೊಂಡಿದೆ. ಇಂತಹ ಅಕ್ರಮ ವಲಸಿಗರು ಯುಕೆಗೆ ಮರುಪ್ರವೇಶ ಪಡೆಯಲು ಮತ್ತು ಪೌರತ್ವ ಪಡೆಯಲು ಜೀವನಪರ್ಯಂತ ನಿಷೇಧ ಎದುರಿಸಲಿದ್ದಾರೆ. ವಿಶ್ವಸಂಸ್ಥೆಯ ಪ್ರಕಾರ ಈ ಕಾನೂನು ೧೯೫೧ರಲ್ಲಿ ಬ್ರಿಟನ್ ಸಹಿ ಹಾಕಿರುವ ನಿರಾಶ್ರಿತರ ಒಪ್ಪಂದವೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತದೆ. ಮೊದಲಿಗೆ, ತಮ್ಮ ಮನೆಗಳು ಮತ್ತು ದೇಶಗಳಿಂದ ಪಲಾಯನ ಮಾಡುವವರು ಸಾಮಾನ್ಯವಾಗಿ ಸರಿಯಾದ ದಾಖಲೆಗಳಿಲ್ಲದೆಯೇ ಹೊರಡುತ್ತಾರೆ. ಏಕೆಂದರೆ ಅವರು ತಮ್ಮ ಜೀವ ಉಳಿಸಿಕೊಳ್ಳಲು ಬಲವಂತವಾಗಿಯೇ ಹೊರಡುತ್ತಾರೆ. ಕಳೆದ ವರ್ಷ “ಸಣ್ಣ ದೋಣಿಗಳಲ್ಲಿ” ಯುಕೆಗೆ ಬಂದ ಅಂದಾಜು ೪೫,೦೦೦ ಮಂದಿ ವಲಸಿಗರಲ್ಲಿ ರಾಜಕೀಯ ನಿರಾಶ್ರಿತರಿಗಿಂತ ಆರ್ಥಿಕ ನಿರಾಶ್ರಿತರೇ ಹೆಚ್ಚಿದ್ದರು. ಬ್ರಿಟಿಷ್ ಸರ್ಕಾರವು ಈ ಎರಡು ಗುಂಪುಗಳ ನಡುವೆ ವ್ಯತ್ಯಾಸವನ್ನು ನೋಡದಿರುವುದು ಸಮಸ್ಯಾತ್ಮಕವಾಗಿದೆ. ಅವರು ಪಲಾಯನ ಮಾಡುತ್ತಿರುವ ದೇಶಗಳಿಂದ ನೇರವಾಗಿ ಆಗಮಿಸುವವರಿಗೆ ಈ ಮಸೂದೆ ವಿನಾಯಿತಿಗಳನ್ನು ನೀಡುತ್ತದೆ. ಆದರೆ “ಸಣ್ಣ ದೋಣಿಗಳು” ಕ್ರಮಿಸಬಹುದಾದ ದೂರ ಕಡಿಮೆಯಾದ್ದರಿಂದ ಇಂಥವರ ಪ್ರಮಾಣ ಕಿರಿದಾಗಿರುತ್ತದೆ. “ಬಿಲ್ಡ್ ದ ವಾಲ್” ಎಂಬ ಘೋಷಣೆಯನ್ನು ಎತ್ತಿಕೊಂಡ ಅಮೆರಿಕಾದ ಟ್ರಂಪ್ ಸರ್ಕಾರದಂತೆ, ಬ್ರಿಟಿಷ್ ಸರ್ಕಾರವು ಈಗ “ಸ್ಟಾಪ್ ದಿ ಬೋಟ್ಸ್” ಎಂಬ ಘೋಷಣೆಯನ್ನು ನೆಚ್ಚಿದೆ. ಇದು ರಾಜಕೀಯ ಘೋಷಣೆಯಾಗಿದೆಯೇ ವಿನಃ ವಲಸಿಗರನ್ನು ಕರೆತರುವ ಸಣ್ಣ ದೋಣಿಗಳಿಗೆ ನಿಜವಾಗಲೂ ತಡೆ ಹಾಕುವ ಕಾರ್ಯತಂತ್ರದ ಬಗ್ಗೆ ಹೆಚ್ಚು ಚಿಂತಿಸಿದಂತಿಲ್ಲ. ಆಶ್ರಯ ಬಯಸಿ ಬಂದವರನ್ನು ಮೂರನೇ ದೇಶಕ್ಕೆ ಸಾಗಿಸುವ ಯೋಜನೆಯು ನವ-ವಸಾಹತುಶಾಹಿ ಪ್ರಜ್ಞೆಯನ್ನು ಧ್ವನಿಸುತ್ತದೆ. ಅದಲ್ಲದೆ ಇದಕ್ಕೆ ತಗಲುವ ಗಣನೀಯ ವೆಚ್ಚವನ್ನು ವಲಸಿಗರು ಭರಿಸಲಾಗುವುದಿಲ್ಲ.
ಬ್ರಿಟಿಷರು ಸಣ್ಣ ದೋಣಿಗಳನ್ನು ನಿಲ್ಲಿಸಲು ಹೊರಟಿದ್ದಾರೆ. ಈ ನಡೆಯನ್ನು ಇತರೆ ಹಲವು ಪ್ರಜಾಪ್ರಭುತ್ವಗಳಲ್ಲಿ ಬೇರೂರುತ್ತಿರುವ ವಲಸಿಗ-ವಿರೋಧಿ ಮತ್ತು ಅನ್ಯರ ವಿರುದ್ಧ ದ್ವೇಷಪೂರಿತ ನಂಬಿಕೆಗಳ ಹಿನ್ನೆಲೆಯಲ್ಲಿ ನೋಡಬೇಕು. ರೋಹಿಂಗ್ಯಾ ನಿರಾಶ್ರಿತರನ್ನು ಬಲವಂತವಾಗಿ ಮ್ಯಾನ್ಮಾರ್ಗೆ ಗಡೀಪಾರು ಮಾಡುವ ಅಥವಾ ಭಾರತದ ಪೌರತ್ವ (ತಿದ್ದುಪಡಿ) ಕಾಯ್ದೆಯು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಪಾಶ್ಚಿಮಾತ್ಯ ದೇಶಗಳು ಅಂತರರಾಷ್ಟ್ರೀಯ ಕಾನೂನು ಮತ್ತು ನಿರಾಶ್ರಿತರ ಒಪ್ಪಂದಗಳನ್ನು ಉಲ್ಲೇಖಿಸಿ ಖಂಡಿಸಿದ್ದವು. ಆದರೆ ಈ ದೇಶಗಳು ಈಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಜೀವನ ಅರಸಿ ಅಸುರಕ್ಷಿತ ಮಾರ್ಗಗಳ ಅಪಾಯಗಳನ್ನು ಎದುರಿಸಿ ತಮ್ಮ ತೀರಕ್ಕೆ ಆಶ್ರಯ ಬಯಸಿ ಬರುವವರನ್ನು ಮತ್ತು ಅಕ್ರಮ ವಲಸಿಗರನ್ನು ತಿರಸ್ಕರಿಸುವ ಮೂಲಕ ಆಫ್ರಿಕಾದಿಂದ ವಲಸೆ ಬಂದ ರಿಷಿ ಸುನಕ್ ಮತ್ತು ಸುಯೆಲ್ಲಾ ಬ್ರಾವರ್ಮನ್ ಅವರ ತಂದೆ-ತಾಯಿಗಳೂ ಸೇರಿದಂತೆ ವಲಸಿಗರು ತಮ್ಮ ಸಮಾಜಗಳಿಗೆ ನೀಡಿದ ನೈಜ ಕೊಡುಗೆಗಳನ್ನು ಈ ಕಾನೂನಿನ ಮೂಲಕ ಅಪಮಾನಿಸಲಾಗುತ್ತಿದೆ.
This editorial has been translated from English, which can be read here.