“ಮನುಕುಲವು ಮಗುವಿಗೆ ಅತ್ಯುತ್ತಮವಾದದ್ದನ್ನೆ ನೀಡಬೇಕಿದೆ” ಎಂಬ ಘೋಷವಾಕ್ಯದೊಂದಿಗೆ ವಿಶ್ವಸಂಸ್ಥೆಯು ೧೯೫೯ರಲ್ಲಿ ಮಕ್ಕಳ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿತು. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸುವ ಈ ರೀತಿಯ ಮೊದಲ ಚಾರ್ಟರ್ ಇದಾಗಿತ್ತು. ಆದರೂ ಮಕ್ಕಳು ತಮ್ಮ ಅಸಹಾಯಕತೆಯ ಕಾರಣ ತಮ್ಮ ರಕ್ಷಣೆಯನ್ನು ವಹಿಸಿಕೊಂಡವರ ಅಧಿಕಾರ ದುರುಪಯೋಗಕ್ಕೆ ಬಲಿಯಾಗುತ್ತಾರೆ. ತಂತ್ರಜ್ಞಾನದ ಪ್ರಗತಿಯು ಜನನಗಳ ನೋಂದಣಿ, ಆರೋಗ್ಯ ಪಾಲನೆ ಹೀಗೆ ಅನೇಕ ರಂಗಗಳಲ್ಲಿ ಸಹಾಯ ಮಾಡಿದೆ. ಆದರೆ ಅದು ಮಗುವಿನ ಹಕ್ಕುಗಳಿಗೆ ಧಕ್ಕೆ ತರಬಾರದು. ಮಗುವಿನ ಖಾಸಗಿತನದ ಮೂಲಭೂತ ಹಕ್ಕಿನ ಮೇಲೆ ಒತ್ತು ಕೊಟ್ಟು, ವಿವಾಹೇತರ ಸಂಬಂಧದ ವಿಚಾರವಾಗಿ ಕಿತ್ತಾಡುತ್ತಿರುವ ದಂಪತಿಗಳು ಇದನ್ನು ಋಜು ಮಾಡಲು ಪ್ರತಿಯೊಂದು ಪ್ರಕರಣದಲ್ಲಿ ಮಕ್ಕಳನ್ನು ಯಾಂತ್ರಿಕವಾಗಿ ಡಿಎನ್ಎ ಪರೀಕ್ಷೆಗೆ ಒಳಪಡಿಸುವಂತಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತನ್ನ ಎರಡನೇ ಮಗುವಿನ ಪಿತೃತ್ವವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರು ಆನುವಂಶಿಕ ಮಾಹಿತಿಯು ಒಬ್ಬ ವ್ಯಕ್ತಿಯ ಮೂಲ ಸಾರವಾಗಿದ್ದು ಈ “ಆಪ್ತ, ವೈಯಕ್ತಿಕ ಮಾಹಿತಿ” ಮಗುವಿನ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಹೇಳಿದ್ದಾರೆ. ನ್ಯಾಯಾಲಯದ ಮುಂದೆ ತಮ್ಮನ್ನು ಕ್ಷುಲ್ಲಕವಾಗಿ ಪ್ರಶ್ನಿಸದಿರಲು ಮಕ್ಕಳಿಗೆ ಹಕ್ಕಿದೆ ಎಂದು ಕೋರ್ಟ್ ಹೇಳಿದೆ.
ಮಕ್ಕಳನ್ನು ಭೌತಿಕ ವಸ್ತುಗಳಂತೆ ಪರಿಗಣಿಸಬಾರದು ಮತ್ತು ವಿಶೇಷವಾಗಿ ವಿಚ್ಛೇದನ ಪ್ರಕರಣಗಳಲ್ಲಿ ಅವರನ್ನು ಕಡೆಯ ಉಪಕ್ರಮವಾಗಿ ಮಾತ್ರ ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಒಪ್ಪಬೇಕು ಎಂದು ಎಲ್ಲ ನ್ಯಾಯಾಲಯಗಳಿಗೆ ನ್ಯಾ. ನಾಗರತ್ನ ಅವರು ಸೂಚಿಸಿದ್ದಾರೆ. ಮಕ್ಕಳು ದಂಪತಿಗಳ ನಡುವಿನ ಕದನದ ಕೇಂದ್ರ ಬಿಂದುವಾಗಬಾರದು ಎಂದವರು ಹೇಳಿದ್ದಾರೆ. ಇದು ಸ್ವಾಗತಾರ್ಹ ಕ್ರಮವಾಗಿದ್ದರೂ ಪ್ರತಿ ಮಗುವಿಗೂ “ವಿಶೇಷ ಆರೈಕೆ ಮತ್ತು ನೆರವು” ಖಾತ್ರಿಪಡಿಸುವ ೧೯೮೯ರ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಭೆಯ ಘೋಷಣೆಯನ್ನು ಅಮಲು ಮಾಡಲು ದಾರಿ ಇನ್ನೂ ಬಹುದೂರವಿದೆ. ಭಾರತದಲ್ಲಿ ಹಲವರ ಬಾಲ್ಯ ಇನ್ನೂ ಕಮರಿ ಹೋಗುತ್ತಿದೆ ಮತ್ತು ‘ಪ್ರತಿ ಮಗುವಿಗೆ ಪ್ರತಿ ಹಕ್ಕಿದೆ’ ಎಂಬ ಘೋಷವಾಕ್ಯ ಮರೆಗೆ ಸರಿಯುತ್ತಿದೆ. ವಿಶ್ವಸಂಸ್ಥೆಯ ಸಭೆಯ ನಿರ್ಣಯವನ್ನು ಭಾರತ ೧೯೯೨ರಲ್ಲಿ ಅನುಮೋದಿಸಿತು. ಅಂದಿನಿಂದ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆಯಾದರೂ ಅವುಗಳ ಅನುಷ್ಠಾನವು ಕಳಪೆಯಾಗಿದೆ. ಈ ಎಲ್ಲ ಕಾನೂನುಗಳು ಮಕ್ಕಳನ್ನು ಹಿಂಸೆ, ಶೋಷಣೆ ಅಥವಾ ನಿರ್ಲಕ್ಷ್ಯದಿಂದ ರಕ್ಷಿಸಲು ವಿಫಲವಾಗಿವೆ. ಮಗುವಿನ ಹಿತಾಸಕ್ತಿಯು ಎಲ್ಲ ಸಾಮಾಜಿಕ ನಡವಳಿಕೆಗಳ ಕೇಂದ್ರವಾಗಬೇಕು.
This editorial has been translated from English, which can be read here.