ನಾಯಿ ಮನುಷ್ಯನನ್ನು ಕಚ್ಚುವುದು ಸುದ್ದಿಯಲ್ಲ ಎಂಬುದು ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿರುವ ನಾಣ್ಣುಡಿ. ಆದರೆ ಸುಮಾರು ೧.೫ ಕೋಟಿ ಬೀದಿ ನಾಯಿಗಳ ಜನಸಂಖ್ಯೆ ಇರುವ (೨೦೧೯ರ ಜಾನುವಾರು ಗಣತಿ), ಮತ್ತು ವಿಶ್ವದ ನಾಯಿ ಕಚ್ಚುವಿಕೆ ಮತ್ತು ರೇಬೀಸ್ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಭಾರತದ ‘ಬೀದಿ ನಾಯಿಗಳ ಕಾಟ’ ಮಾಧ್ಯಮಗಳಲ್ಲಿ ದಿನಂಪ್ರತಿ ವರದಿ ಆಗುತ್ತಿದ್ದರೂ ಅದರ ಬಗ್ಗೆ ಒಂದು ರೀತಿಯ ಅಸಡ್ಡೆ ಇದೆ. ಹೀಗಿದ್ದೂ ಆಗೊಮ್ಮೆ ಈಗೊಮ್ಮೆ ನಡೆಯುವ ಭೀಕರ ಘಟನೆಗಳು ಜನರನ್ನು ಬೆಚ್ಚಿಬೀಳಿಸುತ್ತದೆ. ರಾಜಸ್ಥಾನದ ಆಸ್ಪತ್ರೆಯೊಂದರಲ್ಲಿ ಶಿಶುವನ್ನು ಬೀದಿನಾಯಿಗಳು ಎಳೆದೊಯ್ದ ಘಟನೆ, ತೆಲಂಗಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ನಾಲ್ಕು ವರ್ಷದ ಮಗುವಿನ ಮೇಲೆ ಮಾರಣಾಂತಿಕ ದಾಳಿ ಮಾಡಿದ ಬೀದಿನಾಯಿಗಳ ದೃಶ್ಯಾವಳಿಗಳು ಕೆಲವು ಉದಾಹರಣೆಗಳಷ್ಟೇ. ಈ ಎರಡೂ ಘಟನೆಗಳು ದೇಶಾದ್ಯಂತ ದಿನಂಪ್ರತಿ ನಡೆಯುವ ಇಂತಹ ಘಟನೆಗಳ ಒಂದು ಸಣ್ಣ ಉದಾಹರಣೆ ಅಷ್ಟೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ನ್ಯಾಯಾಂಗ, ಪುರಸಭೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು, ಈ ಸಮಸ್ಯೆಯನ್ನು ಗುರುತಿಸಿದರೂ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ.
ಮಾನವನ ವಿಕಾಸದಲ್ಲಿ ನಾಯಿಗಳಿಗೆ ಮನುಷ್ಯನ ಜೊತೆಗಾರನ ಒಂದು ವಿಶಿಷ್ಟ ಸ್ಥಾನವಿದೆ. ಇದು ಒಂದು ನೈತಿಕ ಸಂದಿಗ್ಧತೆಯನ್ನು ತಂದೊಡ್ಡಿದೆ. ಈ ಕಾರಣವಾಗಿ ಒಂದೆಡೆ ಅವುಗಳ ಕ್ಷೇಮಾಭಿವೃದ್ಧಿ ಮನುಷ್ಯನ ಜವಾಬ್ದಾರಿ ಎಂದೆನಿಸಿದರೆ ಮತ್ತೊಂದೆಡೆ ತೋಳಗಳಿಂದ ವಿಕಸನಗೊಂಡ ನಾಯಿಗಳಲ್ಲಿ ಇನ್ನೂ ಉಳಿದಿರುವ ತಮ್ಮ ಪ್ರದೇಶವನ್ನು ಗುರುತು ಮಾಡುವ ಅದನ್ನು ರಕ್ಷಿಸಿಕೊಳ್ಳುವ ಗುಣ ತರುವ ಸಮಸ್ಯೆಗಳನ್ನು ನಿಭಾಯಿಸಬೇಕಾಗಿದೆ. ಈ ಸಮಸ್ಯೆ ಭಾರತಕ್ಕೆ ವಿಶಿಷ್ಟವಾದುದೇನೂ ಅಲ್ಲ. ಪ್ರಪಂಚದ ಹಲವು ಭಾಗಗಳಲ್ಲಿ ಬಿಡಾಡಿ ಬೀದಿ ಪ್ರಾಣಿಗಳ ಹಕ್ಕುಗಳನ್ನು ಅಮಾನ್ಯ ಮಾಡಲಾಗಿದೆ. ಬಹುತೇಕ ಕಡೆ ನೋಂದಾಯಿತ ಮತ್ತು ಲಗಾಮು ಹಾಕಿದ ಪ್ರಾಣಿಗಳ ಜವಾಬ್ದಾರಿ ಅದರ ಪಾಲಕರದು. ಮಾನವ ಪಾಲಕರು ಇಲ್ಲದ ಸಂದರ್ಭದಲ್ಲಿ, ಕೊನೆಯ ಕ್ರಮವಾಗಿ, ಸರ್ಕಾರವು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಾಯಿಗಳಿಗೆ ದಯಾಮರಣವನ್ನು ನೀಡಬೇಕು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ ಮತ್ತು ತಿದ್ದುಪಡಿ ಮಾಡಲಾಗುತ್ತಿರುವ ಪ್ರಾಣಿ (ನಾಯಿಗಳು) ಸಂತಾನಶಕ್ತಿಹರಣ ನಿಯಮಗಳು, ೨೦೦೧, ಬೀದಿ ನಾಯಿಗಳ ಸಂಖ್ಯೆಯನ್ನು ಸೀಮಿತಗೊಳಿಸುವ ಗುರಿಯನ್ನು ಹೊಂದಿವೆಯೇ ಹೊರತು ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸಲು ಯಾವುದೇ ಕ್ರಮವಹಿಸಿಲ್ಲ. ಪ್ರಸ್ತಾವಿತ ಕರಡು ನಿಯಮಗಳು, ಅಥವಾ ಪ್ರಾಣಿ (ನಾಯಿಗಳು) ಸಂತಾನಶಕ್ತಿಹರಣ ನಿಯಮಗಳು, ೨೦೨೨, ಸಂತಾನಶಕ್ತಿಹರಣ ಮತ್ತು ಲಸಿಕೆ ನೀಡುವ ಪ್ರಕ್ರಿಯೆಗಳಲ್ಲಿ ಮಾತ್ರ ಬದಲಾವಣೆಗಳನ್ನು ಸೂಚಿಸುತ್ತದೆ. “ಗುಣಪಡಿಸಲಾಗದ ಅನಾರೋಗ್ಯ ಮತ್ತು ಮಾರಣಾಂತಿಕವಾಗಿ ಗಾಯಗೊಂಡ” ನಾಯಿಗಳನ್ನು ಮಾತ್ರ ದಯಾಮರಣಕ್ಕೆ ದೂಡಲು ಈ ನಿಯಮಗಳು ಅನುಮತಿ ನೀಡುತ್ತದೆ. ಸದ್ಯ ಇರುವ ಕಾನೂನು ಸಹ ಅದನ್ನೇ ಹೇಳುತ್ತದೆ. ಈ ಕರಡು, ನಿವಾಸಿಗಳ ಕಲ್ಯಾಣ ಸಂಘಗಳನ್ನು ಬೀದಿ ನಾಯಿಗಳಿಗೆ ಆಹಾರ ನೀಡಲು ಜವಾಬ್ದಾರರನ್ನಾಗಿ ಮಾಡುತ್ತದೆ. ಪಿಸಿಎ ಮತ್ತು ಎಬಿಸಿ ನಿಯಮಗಳು ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ಬಂಧಿಸಬೇಕು ಎಂಬುದನ್ನು ಒಪ್ಪುತ್ತವೆ. ಆದರೆ ಅವು ಸಮಸ್ಯೆಯ ಅಗಾಧತೆಯನ್ನು ಪರಿಗಣಿಸುವುದಿಲ್ಲ. ಪ್ರತಿ ೧೦೦ ಭಾರತೀಯರಿಗೆ ಒಂದು ಬೀದಿ ನಾಯಿಯಿದೆ. ನಮ್ಮ ದೇಶದಲ್ಲಿ ಕಡುಬಡವರು ಮತ್ತವರ ಮಕ್ಕಳು ಚಿಕಿತ್ಸೆ ಪಡೆಯಲು ವಿಫಲರಾಗುತ್ತಾರೆ. ಸಂತಾನಶಕ್ತಿಹರಣ ಮತ್ತು ಲಸಿಕೆ ನೀಡುವ ಮೂಲಕ ಬೀದಿ ನಾಯಿಗಳ ಸಂಖ್ಯೆ ತಾನಾಗೆ ಕಡಿಮೆಯಾಗಬಹುದು ಎಂದು ನಂಬುವುದು ತಿರುಕನ ಕನಸಾಗುತ್ತದೆ. ಭಾರತವು ೨೦೩೦ರ ವೇಳೆಗೆ ರೇಬೀಸ್ ಅನ್ನು ತೊಡೆದುಹಾಕಲು ಬದ್ಧವಾಗಿದೆ. ಆದರೆ ಬೀದಿ ನಾಯಿಗಳಿಂದ ಉಂಟಾಗುವ ಸಮಸ್ಯೆಯನ್ನು ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟು ಎಂದು ಪರಿಗಣಿಸದಿದ್ದರೆ, ಬೀದಿ ನಾಯಿಗಳ ಪರವಾದ ಬೇಜವಾಬ್ದಾರಿಯುತ ಹೋರಾಟದಿಂದಾಗಿ ಭಾರತದ ಬಡವರು ಸುರಕ್ಷಿತ ಸಾರ್ವಜನಿಕ ಸ್ಥಳಗಳಿಗೆ ತಮ್ಮ ಹಕ್ಕನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ.
This editorial has been translated from English, which can be read here.