ವಿಸ್ತೃತ ನಿಧಿ ಸೌಲಭ್ಯದ ಅಡಿಯಲ್ಲಿ ಮುಂದಿನ ೪೮ ತಿಂಗಳಲ್ಲಿ $೨.೯ ಶತಕೋಟಿ ಸಾಲ ನೀಡಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅನುಮೋದನೆ ನೀಡಿರುವುದನ್ನು ಕೊಲಂಬೊ ಮತ್ತು ಅದರ ಸಾಲದಾತರು ಸ್ವಾಗತಿಸಿದ್ದಾರೆ. ಈ ಸಾಲದಾತರೊಂದಿಗೆ ಅಧ್ಯಕ್ಷ ರಣಿಲ್ ವಿಕ್ರಮಸಿಂಘೆ ಅವರು ಈಗ ಸಾಲ ಪುನರ್ರಚನೆಯ ಒಪ್ಪಂದ ಮಾಡಿಕೊಳ್ಳಬೇಕಿದೆ. ಭಾರತವು ಶ್ರೀಲಂಕಾದ ಸಾಲ ಪುನರ್ರಚನೆಯನ್ನು ಬೆಂಬಲಿಸಿದ ಮತ್ತು ಜನವರಿಯಲ್ಲೇ ಐಎಂಎಫ್ ಗೆ ಈ ಕುರಿತು ಆಶ್ವಾಸನೆ ನೀಡಿದ ಮೊದಲ ದೇಶ ತಾನೇ ಎಂದು ನೆನಪಿಸಿದೆ. ಕಳೆದ ವರ್ಷದಿಂದ ಭಾರತವು ಶ್ರೀಲಂಕಾದ ಪ್ರಮುಖ ಬೆಂಬಲಿಗರಲ್ಲಿ ಒಂದಾಗಿದೆ. ಅದರ ಪರವಾಗಿ ಐಎಂಎಫ್ ಮತ್ತು ವಿಶ್ವ ಬ್ಯಾಂಕ್ಗೆ ಮನವಿ ಮಾಡಿದೆ, $೪ ಶತಕೋಟಿಯಷ್ಟು ಹೊಸ ಸಾಲಗಳು ಮತ್ತು ಸಾಲ ಮುಂದೂಡಿಕೆಗಳು ಮತ್ತು ಸಾಲದ ಸುಸ್ಥಿರತೆಯ ಬಗ್ಗೆ ಜಿ-೨೦ ಸೇರಿದಂತೆ ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಶ್ರೀಲಂಕಾದ ಪರ ವಾದ ಮಾಡಿದೆ. ಶ್ರೀಲಂಕಾದ ಅತಿದೊಡ್ಡ ದ್ವಿಪಕ್ಷೀಯ ಸಾಲದಾತ ಚೀನಾ ಮತ್ತು ಪ್ಯಾರಿಸ್ ಕ್ಲಬ್ ಆಫ್ ಇಂಟರ್ನ್ಯಾಷನಲ್ ಫೈನಾನ್ಷಿಯರ್ಸ್ನ ಭಾಗವಾದ ಜಪಾನ್ ಈ ಬಗ್ಗೆ ನಿಲುವು ತೆಗೆದುಕೊಳ್ಳುವುದು ನಿಧಾನ ಮಾಡಿದ ಕಾರಣ ಐಎಂಎಫ್ ಘೋಷಣೆ ತಡವಾಯಿತು. ಮಂಗಳವಾರ $೩೩೦ ಮಿಲಿಯನ್ನ ಮೊದಲ ಕಂತು ಸಾಲ ಪಡೆದಿರುವುದನ್ನು ಪ್ರಕಟಿಸಿದ ವಿಕ್ರಮಸಿಂಘೆ ಇದು ಶ್ರೀಲಂಕಾ ತನ್ನ ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿದೆ ಎಂಬ ಸಂದೇಶ ಎಂದರು. ಇದಲ್ಲದೆ ಇದರಿಂದ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಐಎಂಎಫ್ ಇಂದ ಒಟ್ಟು $೭ ಶತಕೋಟಿ ಅಷ್ಟು ನೆರವು-ಸಾಲ ಪಡೆಯಲು ದೇಶ ಶಕ್ತವಾಗುತ್ತದೆ ಎಂದು ತಿಳಿಸಿದರು. ಕಳೆದ ವರ್ಷ ಸವಾಲಿನ ಸಮಯದಲ್ಲಿ ಅಧಿಕಾರಕ್ಕೆ ಬಂದ ವಿಕ್ರಮಸಿಂಘೆ ಅವರ ಸರ್ಕಾರವು ಆರ್ಥಿಕತೆಯಲ್ಲಿ ಕೊಂಚ ಸ್ಥಿರತೆಯನ್ನು ತಂದಿದ್ದು ಪ್ರಶಂಸೆಗೆ ಅರ್ಹ. ಆದರೆ ಐಎಂಎಫ್ ನಿರ್ಧಾರವು ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸುವ ಮಂತ್ರದಂಡವೇನೂ ಅಲ್ಲ. ಐಎಂಎಫ್ ಇಂದ ಶ್ರೀಲಂಕಾ ನೆರವು ಪಡೆಯುತ್ತಿರವುದು ಇದು ೧೭ನೇ ಬಾರಿ ಮತ್ತು ಕಳೆದ ದಶಕದಲ್ಲಿಯೇ ಮೂರನೆಯ ಬಾರಿ. ಐಎಂಎಫ್ ಸಾಲವು ಹಲವಾರು ಷರತ್ತುಗಳೊಂದಿಗೆ ಬರುತ್ತದೆ ಮತ್ತು ಇವುಗಳನ್ನು ಅಮಲು ಮಾಡುವುದು ಇನ್ನಷ್ಟು ಕಷ್ಟಗಳನ್ನು ಉಂಟುಮಾಡುತ್ತದೆ. ಈಗಾಗಲೇ ಹಲವು ಸಮೀಕ್ಷೆಗಳಲ್ಲಿ ಕೇವಲ ಶೇ. ೧೦ರಷ್ಟು ಅನುಮೋದನೆ ಹೊಂದಿರುವ ಸರ್ಕಾರವು ಇದರಿಂದ ಜನರಿಗೆ ಮತ್ತಷ್ಟು ಅಪ್ರಿಯವಾಗುತ್ತದೆ. ಸ್ಥಳೀಯ ಚುನಾವಣೆಗಳನ್ನು ಮುಂದೂಡುವ ಸರ್ಕಾರದ ನಿರ್ಧಾರದಿಂದ ಐಎಂಎಫ್ ಅಂತರ ಕಾಯ್ದುಕೊಂಡಿದ್ದು ತಾನು ಯಾವುದೇ ರಾಜಕೀಯ ಷರತ್ತುಗಳನ್ನು ವಿಧಿಸಿಲ್ಲ ಎಂದು ಹೇಳಿರುವುದು ಸರ್ಕಾರಕ್ಕೆ ಮತ್ತಷ್ಟು ಮುಜುಗರ ಉಂಟು ಮಾಡಿದೆ. ತನ್ನ ವರದಿಯಲ್ಲಿ ಐಎಂಎಫ್ ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವುದಕ್ಕೆ ಸವಾಲುಗಳನ್ನು “ಅಸಾಧಾರಣವಾಗಿ ಹೆಚ್ಚು” ಎಂದು ಪರಿಗಣಿಸಿದ್ದು ಸುಧಾರಣೆಗಳನ್ನು ಅನುಷ್ಠಾನಗೊಳಿಸುವ ಶ್ರೀಲಂಕಾದ ದಾಖಲೆಯನ್ನು “ದುರ್ಬಲ” ಎಂದು ಕರೆದಿದೆ. ದುರ್ಬಲ ಮಾರುಕಟ್ಟೆ ಸೂಚಕಗಳಿಂದ ಆಳವಾದ ಬಿಕ್ಕಟ್ಟು ಉಂಟಾದರೆ ಪರ್ಯಾಯ ಯೋಜನೆಗಳಿಗೂ ಅದು ಯೋಜನೆ ರೂಪಿಸಿದೆ. ಗಗನಕ್ಕೇರುತ್ತಿರುವ ಹಣದುಬ್ಬರವನ್ನು ಹತೋಟಿಗೆ ತರುವುದು, ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಜಾಗತಿಕ ಹೂಡಿಕೆಯನ್ನು ಆಹ್ವಾನಿಸುವ ಸವಾಲುಗಳನ್ನು ಎದುರಿಸುವ ಜೊತೆಗೆ ಸರ್ಕಾರ ದೇಶದ ಸಾಲದಾತರು ಸಾಲ ಪುನರ್ರಚನೆ ಒಪ್ಪಂದಗಳ ಬಗ್ಗೆ ತೃಪ್ತರಾಗುವಂತೆ ಮತ್ತು ಯಾವುದೇ “ಅಡ್ಡ ವ್ಯವಹಾರಗಳ” ಆರೋಪಗಳು ಬರದಂತೆ ಎಚ್ಚರ ವಹಿಸಬೇಕು. ಶ್ರೀಲಂಕಾ ಆರ್ಥಿಕವಾಗಿ ಮೇಲೇಳಲು ಎಲ್ಲ ಪ್ರಯತ್ನ ಮಾಡುತ್ತಿದೆ. ಅಮೆರಿಕಾ, ಜಪಾನ್, ಚೀನಾ ಮತ್ತು ಭಾರತವೂ ಸೇರಿದಂತೆ ತನ್ನ ಸಂಕೀರ್ಣ ಭೌಗೋಳಿಕ ರಾಜಕೀಯದ ಎಲ್ಲ ಪಾಲುದಾರರೊಂದಿಗೆ ತನ್ನ ಸಂಬಂಧವನ್ನು ಸರಿ ಮಾಡಿಕೊಳ್ಳುತ್ತಿದೆ. ಪ್ರತಿಯಾಗಿ ಈ ದೇಶಗಳು ಕೊಲಂಬೊದ ಕಷ್ಟಗಳನ್ನು ಗುರಿತಿಸಿ ಆರ್ಥಿಕ ಪುನಶ್ಚೇತನವನ್ನು ಸಾಧಿಸಲು ಅದಕ್ಕೆ ಸಹಾಯ ಮಾಡಬೇಕು.
This editorial has been translated from English, which can be read here.