ಅತ್ಯಂತ ಪ್ರಭಾವಶಾಲಿಯಾದ ಇಂಟರ್ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಇತ್ತೀಚೆಗೆ ಹವಾಮಾನ ಬದಲಾವಣೆಯ ಬಗ್ಗೆ ತನ್ನ ವರದಿಯನ್ನು ಪ್ರಕಟಿಸಿದೆ. ಇದು ಈ ಕುರಿತು ಆರನೇ ಮೌಲ್ಯಮಾಪನದ ಭಾಗವಾಗಿದೆ. ೧೯೯೦ರಿಂದ ಹವಾಮಾನ ಬದಲಾವಣೆಗಳಿಗೆ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಾರಣ ಎಂದು ತೋರಿಸುವ ಜಾಗತಿಕ ವೈಜ್ಞಾನಿಕ ಸಂಶೋಧನೆಯ ಸಂಕಲನವನ್ನು ಐಪಿಸಿಸಿ ಪ್ರಕಟಿಸಲು ಪ್ರಾರಂಭಿಸಿದಾಗಿನಿಂದ ಮಾನವನ ಕ್ರಿಯೆಗಳು ಹಿಮ್ಮೆಟಿಸಲು ಸಾಧ್ಯವಿಲ್ಲದಂತಹ ದುರಂತ ಸ್ಥಿತಿಗೆ ಜಗತ್ತನ್ನು ದೂಡುತ್ತಿವೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳು ಲಭಿಸಿವೆ. ಐಪಿಸಿಸಿಯ ವರದಿಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸ್ವಿಟ್ಜರ್ಲ್ಯಾಂಡ್ನ ಇಂಟರ್ಲೇಕನ್ನಲ್ಲಿ ವಾರವಿಡೀ ಚರ್ಚೆಯ ನಂತರ ಪ್ರಕಟಿಸಲಾದ ಇತ್ತೀಚಿನ ವರದಿಯಲ್ಲಿ ಹೆಚ್ಚು ಹೊಸ ಮಾಹಿತಿಯೇನೂ ಇಲ್ಲ. ಏಕೆಂದರೆ ಇದು ೨೦೧೮ರಿಂದ ಈಚೆಗಿನ ವೈಜ್ಞಾನಿಕ ಸಂಶೋಧನೆಯ ಸಂಕಲನವಷ್ಟೇ. ಆದರೆ ಈ ವರದಿಯು ಜಾಗತಿಕ ತಾಪಮಾನವು ಕೈಗಾರಿಕಾ ಕ್ರಾಂತಿಯ ಪೂರ್ವಕ್ಕಿಂತಲೂ ೧.೫ °C ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕೆಂಬ ೨೦೧೫ರ ಪ್ಯಾರಿಸ್ ಒಪ್ಪಂದವನ್ನು ಪೂರೈಸದಿರುವ ಪರಿಣಾಮಗಳನ್ನು ಅನೇಕ ಕೋನಗಳಿಂದ ವಿಶ್ಲೇಷಿಸುತ್ತದೆ.
ಅಭಿವೃದ್ಧಿ ಹೊಂದಿದ ದೇಶಗಳಿಂದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹಣಕಾಸಿನ ಹರಿವಿನ ಅಗತ್ಯವನ್ನು ಈ ವರದಿಯು ಒತ್ತಿಹೇಳುತ್ತದೆ. ಹವಾಮಾನ ಬದಲಾವಣೆಯಿಂದ ಹೆಚ್ಚು ನಷ್ಟ ಅನುಭವಿಸಲಿರುವ ದೇಶಗಳಿಗೆ ಇದನ್ನು ಎದುರಿಸಲು ನಷ್ಟ ಪರಿಹಾರ ನೀಡಬೇಕಾದ ಅಗತ್ಯದ ಬಗ್ಗೆ ಸೂಚನೆ ನೀಡುತ್ತದೆ. ಕೈಗಾರಿಕಾ ಕ್ರಾಂತಿಯ ಪೂರ್ವಕ್ಕಿಂತಲೂ ತಾಪಮಾನ ೧.೫ °C ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಲು ೨೦೧೯ರ ಹಸಿರುಮನೆ ಅನಿಲ ಹೊರಸೂಸುವಿಕೆ ಮಟ್ಟಕ್ಕೆ ಹೋಲಿಸಿದರೆ ೨೦೩೦ರ ವೇಳೆಗೆ ಅದರ ಶೇ. ೪೮ರಷ್ಟು ಮತ್ತು ೨೦೫೦ರ ವೇಳೆಗೆ ಅದರ ಶೇ. ೯೯ರಷ್ಟು ಕಡಿತ ಮಾಡಬೇಕೆಂದು ವರದಿಯು ತಿಳಿಸುತ್ತದೆ. ಪ್ರಸ್ತುತ ಹಲವು ದೇಶಗಳು ಘೋಷಿಸಿರುವ ಅನೇಕ ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಎಲ್ಲ ನೀತಿಗಳನ್ನು ಯಥಾವತ್ತಾಗಿ ಅಮಲು ಮಾಡಿದರೆ ೨೧೦೦ರ ವೇಳೆಗೆ ತಾಪಮಾನವು ೨.೫ °C ರಿಂದ ೩.೨ °C ನಷ್ಟು ಏರುವ ಸಾಧ್ಯತೆ ಇದೆ ಎಂದು ಸಹ ಎಚ್ಚರಿಸುತ್ತದೆ. ಹವಾಮಾನ ಬದಲಾವಣೆಯ ಕುರಿತು ನವೆಂಬರ್ನಲ್ಲಿ ದುಬೈನಲ್ಲಿ ನಿಗದಿಪಡಿಸಲಾದ ಶೃಂಗ ಸಭೆಯಲ್ಲಿ ಈ ವರದಿಯು ಹೆಚ್ಚು ಚರ್ಚೆಯಾಗಬಹುದು. ಈ ಸಭೆಯಲ್ಲಿ ಪ್ಯಾರಿಸ್ ಒಪ್ಪಂದದಲ್ಲಿ ಸೂಚಿಸಲಾದ ಹವಾಮಾನ ಬದ್ಧತೆಗಳನ್ನು ಸಾಧಿಸಲು ಅವರು ಇಲ್ಲಿಯವರೆಗೆ ಏನೇನು ಮಾಡಿದ್ದಾರೆ ಎಂಬುದನ್ನು ದೇಶಗಳು ತಿಳಿಸುತ್ತವೆ. ಐಪಿಸಿಸಿ ವರದಿಗಳನ್ನು ಸಾಮಾನ್ಯವಾಗಿ ವಿನಾಶದ ಸಂಕೇತವೆಂದು ಪರಿಗಣಿಸಲಾಗಿದೆ. ಆದರೆ ಅದು ಪ್ರಸ್ತುತ ವರದಿಯು ಸೌರ ಮತ್ತು ಪವನ ಶಕ್ತಿಯ ವೆಚ್ಚದಲ್ಲಿ ಕಂಡಿರುವ ಕುಸಿತ ಮತ್ತು ವಿದ್ಯುತ್ ಚಾಲಿತ ವಾಹನಗಳ ಪ್ರಸರಣದ ಬಗ್ಗೆಯೂ ಮಾತಾಡುತ್ತದೆ. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಈಗಾಗಲೇ ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆಯದೆ ಪೂರೈಸಲಾಗುವುದಿಲ್ಲ ಎಂದು ಹೇಳಿದೆ. ಇದು ಸದ್ಯ ಅತ್ಯಂತ ದುಬಾರಿಯಾಗಿ ಕಂಡುಬರುವ ಇನ್ನೂ ಪರೀಕ್ಷೆಗೊಳಪಡದ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ. ಭಾರತವು ವರದಿಯನ್ನು “ಸ್ವಾಗತಿಸಿದೆ”. ವರದಿಯ ಹಲವಾರು ಭಾಗಗಳು ಹವಾಮಾನ ಬಿಕ್ಕಟ್ಟಿಗೆ ವಿವಿಧ ದೇಶಗಳ ಕೊಡುಗೆ ಅಸಮಾನವಾಗಿದೆ ಮತ್ತು ಹವಾಮಾನ ನ್ಯಾಯವು ಹೊರಸೂಸುವಿಕೆಯ ತಗ್ಗಿಸುವಿಕೆ ಮತ್ತು ಹೊಂದಾಣಿಕೆಯ ನಿಯಮಗಳ ಮೇಲೆ ಅವಲಂಬಿತವಾಗಿರಬೇಕು ಎಂಬ ತನ್ನ ನಿಲುವನ್ನೇ ಸಮರ್ಥಿಸುತ್ತದೆ ಎಂದು ಅದು ಒತ್ತಿ ಹೇಳಿದೆ. ಆದರೆ ಎಲ್ಲ ದೇಶಗಳು ಸಂಘಟಿತ ಪ್ರಯತ್ನ ಮಾಡಿದರೆ ಮಾತ್ರ ಭೂಮಿಯ ದುಸ್ತರ ಭವಿಷ್ಯವನ್ನು ತಡೆಯಲು ಒಂದು ಅವಕಾಶ ಒದಗಬಹುದು ಎಂಬುದನ್ನು ಭಾರತ ಮರೆಯಬಾರದು.
This editorial has been translated from English, which can be read here.