ರಾಜ್ಯಪಾಲರುಗಳ ಕಾರ್ಯವಿಧಾನ ಅಥವಾ ನಿಷ್ಕ್ರಿಯತೆ ನ್ಯಾಯಾಲಯದ ಪರಾಮರ್ಶೆಗೆ ಪದೇಪದೇ ಬರುತ್ತಿರುವುದು ರಾಜಭವನದ ಸ್ಥಾನಪಾಲಕರು ಮತ್ತು ಅವುಗಳ ಮುಖ್ಯಮಂತ್ರಿಗಳ ನಡುವಿನ ಸಂಬಂಧಗಳ ಬಿರುಕುಗಳನ್ನು ಪ್ರತಿಬಿಂಬಿಸುತ್ತವೆ. ರಾಜ್ಯದ ವಿಧಾನಸಭೆಯಲ್ಲಿ ಜಾರಿಯಾಗಿರುವ ಮಸೂದೆಗಳಿಗೆ ಒಪ್ಪಿಗೆ ನೀಡಲು, ರಾಜ್ಯಪಾಲ ಡಾ. ತಮಿಳಿಸೈ ಸೌಂದರರಾಜನ್ ಅವರನ್ನು ನಿರ್ದೇಶಿಸುವಂತೆ ತೆಲಂಗಾಣ ಸರ್ಕಾರ ಸಲ್ಲಿಸಿರುವ ಒಂದು ಅಸಾಮಾನ್ಯ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಕೆಲವು ದಿನಗಳಲ್ಲಿ ಆಲಿಸಲಿದೆ. ವಿಧಾನಸಭೆಯ ಅಧಿವೇಶನವನ್ನು ಕರೆಯುವುದರಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿ ನೊಂದ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಇತ್ತೀಚಿಗಷ್ಟೇ ಇತ್ಯರ್ಥ ಮಾಡಿತ್ತು. ರಾಜ್ಯ ಸರ್ಕಾರ ಇಚ್ಚಿಸಿದ ದಿನ ಸದನಕ್ಕೆ ಚಾಲನೆ ಸಿಗಲಿಗೆ ಎಂದು ರಾಜ್ಯಪಾಲರ ಪರವಾಗಿ ಸ್ಪಷ್ಟನೆಯನ್ನು ಸಲ್ಲಿಸಿದ್ದರಿಂದ ಈ ವಿಷಯ ಬಗೆಹರಿದಿದೆ. ಹಿಂದಿನ ದಶಕಗಳಲ್ಲಿ, ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಅಥವಾ ಸಾಂವಿಧಾನಿಕ ಸಂಗತಿಗಳಲ್ಲಿ ಅವರುಗಳ ನಿಷ್ಕ್ರಿಯತೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಸಾಮಾನ್ಯವಾಗಿ ಬಾಗಿಲಿನಲ್ಲೆ ಹೊರಗೆ ಎಸೆಯಲಾಗುತ್ತಿತ್ತು. ಆದರೆ, ರಾಜ್ಯಪಾಲರ ಕಚೇರಿಗಳನ್ನು ಅದರ ಮುಖ್ಯಸ್ಥರು ಯಾವ ಮಟ್ಟಕ್ಕೆ ರಾಜಕೀಯಗೊಳಿಸಿದ್ದಾರೆಂದರೆ, ಈಗ ಅಂತಹ ನಿಷ್ಕ್ರಿಯತೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ಪರೀಕ್ಷಿಸುವ ಅನಿವಾರ್ಯತೆಗೆ ಈಗ ನ್ಯಾಯಾಲಯಗಳು ಬಿದ್ದಿವೆ. ಸಂವಿಧಾನದಲ್ಲಿ ಸಮಯ ನಿಗದಿಯನ್ನು ಒಳಗೊಂಡಿರದ ಸಂಗತಿಯನ್ನು ರಾಜ್ಯಪಾಲರುಗಳು ಬಳಸಿಕೊಂಡು ನಿರ್ಧಾರಗಳನ್ನು ಅನಿರ್ದಿಷ್ಟಾವಧಿ ಕಾಲ ವಿಳಂಬಿಸುವ ಧೋರಣೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ. ಈ ತಂತ್ರ ಚುನಾಯಿತ ಸರ್ಕಾರಗಳ ಶಾಸನಾತ್ಮಕ ಕಾರ್ಯಕ್ರಮಕ್ಕೆ ಪರಿಣಾಮಕಾರಿಯಾಗಿ ತಡೆಯೊಡ್ಡುತ್ತದೆ.
ಹಲವು ರಾಜ್ಯಗಳ ಮುಖ್ಯಮಂತ್ರಿ ಕಚೇರಿ ಮತ್ತು ರಾಜಭವನದ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದ್ದರೂ, ತೆಲಂಗಾಣದಲ್ಲಿ ಉದ್ಭವಿಸಿರುವುದು ತುಸು ತೀವ್ರವಾಗಿದೆ. ತನ್ನ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ ಮತ್ತು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತನ್ನನ್ನು ನಿಷೇಧಿಸುತ್ತಿದ್ದಾರೆಂದು ಡಾ. ಸೌಂದರರಾಜನ್ ದೂರಿದ್ದಾರೆ. ರಾಜ್ಯಪಾಲರು ಸಂಪುಟದದಿಂದ ಪ್ರತ್ಯೇಕವಾಗಿ ಕೆಲಸ ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಬೇಸರಗೊಂಡಿದೆ. ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಮರುದಿನ, ರಾಜ್ಯಪಾಲರ ಖಾತೆ ಮಾಡಿದ ಒಂದು ಟ್ವೀಟ್ನಲ್ಲಿ- ರಾಜಭವನ ದೆಹಲಿಗೆ ಹತ್ತಿರವಿದೆ ಎಂಬ ಸಂದೇಶವನ್ನು ರವಾನಿಸಿದ್ದು- ಸರ್ಕಾರ ಸೌಹಾರ್ದಯುತವಾಗಿಲ್ಲ ಮತ್ತು ಉತ್ತಮ ಬಾಂಧವ್ಯ ಹೊಂದಿಲ್ಲ ಎಂಬ ನೋಟದ ಜೊತೆಗೆ ಅವರ ನಿಲುವು ಬೆಸೆದಿದೆ ಎಂಬುದನ್ನು ಸೂಚಿಸುತ್ತದೆ. ರಾಜ್ಯಪಾಲರು ಮಸೂದೆಯೊಂದಕ್ಕೆ ಒಪ್ಪಿಗೆ ಸೂಚಿಸಬಹುದು ಅಥವಾ ತಿರಸ್ಕರಿಸಬಹುದು, ಅಥವಾ ರಾಷ್ಟ್ರಪತಿಯವರ ಪರಿಗಣನೆಗೆ ಕಳುಹಿಸಬಹುದು. ಅಗತ್ಯ ಪ್ರಕರಣಗಳಲ್ಲಿ, ಮರುಮರಿಶೀಲನೆಗೆ ವಾಪಸ್ ಕಳುಹಿಸಬಹುದು. ಇದೇನಾಗಿದ್ದರೂ, ಮಸೂದೆಗಳ ವಿಷಯದ ಬಗ್ಗೆ ರಾಜ್ಯಪಾಲರ ವೈಯಕ್ತಿಕ ನಿಲುವುಗಳನ್ನು ಇವು ಆಧರಿಸಿರಬಾರದು. ಯಾವುದೇ ಮಸೂದೆ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬಂದರೆ ಅಂತಹ ವಿರಳ ಸಂದರ್ಭಗಳಲ್ಲಿ ಎತ್ತುವ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಬಹುದು, ಆದರೆ ಪ್ರತಿ ಬಾರಿ ಮಸೂದೆಯನ್ನು ಒಪ್ಪಿಗೆಗಾಗಿ ಮಂಡಿಸಿದಾಗ ಅದರೆ ಕಾನೂನುಬದ್ಧತೆಯನ್ನು ಅಥವಾ ಶಾಸನಾತ್ಮಕ ಅರ್ಹತೆಯನ್ನು ರಾಜ್ಯಪಾಲರು ನಿರ್ಧರಿಸಬೇಕೆ ಎಂಬುದನ್ನು ನ್ಯಾಯಾಲಯ ಅಧಿಕೃತವಾಗಿ ನಿರ್ಣಯಿಸಬೇಕಾಗಿರುವುದು ಈಗ ಪ್ರಮುಖ ಪ್ರಶ್ನೆಯಾಗಿದೆ. ಇತ್ತೀಚಿಗೆ ಸರ್ವೋಚ್ಚ ನ್ಯಾಯಲಯವೇ ಹೇಳಿದಂತೆ, ಸಾಂವಿಧಾನಿಕ ಸಂಸ್ಥೆಗಳ ನಡುವಿನ ಸಂವಾದ ಸ್ಪರ್ಧೆಯಾಗಿ ಪರಿಣಮಿಸಬಾರದು. ರಾಜಕೀಯ ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಸಾಂವಿಧಾನಿಕ ಕಾರ್ಯಗಳನ್ನು ಒತ್ತೆಯಿರಿಸಿಕೊಳ್ಳಬಾರದು.
This editorial has been translated from English, which can be read here.