ಯುಕ್ರೇನ್ನಲ್ಲಿ ರಷ್ಯಾದ ಯುದ್ಧವು ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಆದರೆ ಇಬ್ಬರೂ ಹಿಮ್ಮೆಟ್ಟುವ ಯಾವುದೇ ಲಕ್ಷಣ ತೋರುತ್ತಿಲ್ಲ. ಕಳೆದ ವರ್ಷ ಆಕ್ರಮಣ ಶುರು ಮಾಡಿದಾಗ ಹೂಡಿದ್ದ ಸೇನೆಯ ದುಪ್ಪಟ್ಟು ಐದು ಲಕ್ಷ ಬಲದ ದಳವನ್ನು ರಷ್ಯಾ ಜಮಾವಣೆ ಮಾಡಿದೆ. ಮುಂದೆ ರಷ್ಯಾ ತನ್ನ ಆಕ್ರಮಣವನ್ನು ಹುರಿಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಅತ್ತ ಕೀವ್ನ ಪ್ರಮುಖ ಹಣಕಾಸು ಮತ್ತು ಮಿಲಿಟರಿ ಬೆಂಬಲಿಗರಾದ ಪಶ್ಚಿಮದ ದೇಶಗಳು ಅದರ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಯುಕ್ರೇನಿಗೆ ಶಸ್ತ್ರಸಜ್ಜಿತ ವಾಹನಗಳು, ನಿಖರ ದಾಳಿಯ ಬಾಂಬ್ಗಳು, ಯುದ್ಧ ಟ್ಯಾಂಕ್ಗಳು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಕಳುಹಿಸುತ್ತಿದೆ. ಸೋಮವಾರ ಕೀವ್ಗೆ ಅನಿರೀಕ್ಷಿತ ಭೇಟಿ ನೀಡಿದ ಯುಎಸ್ ಅಧ್ಯಕ್ಷ ಜೋ ಬೈಡೆನ್ ಯುದ್ಧದಿಂದ ಜರ್ಜರಿತವಾಗಿರುವ ರಾಷ್ಟ್ರಕ್ಕೆ ಅಮೆರಿಕದ ದೀರ್ಘಕಾಲದ ಬೆಂಬಲದ ಆಶ್ವಾಸನೆ ನೀಡಿದರು. ಮರುದಿನ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಾವು ಸುದೀರ್ಘ ಯುದ್ಧಕ್ಕೆ ಸನ್ನದ್ಧವಾಗಿರುವ ಸೂಚನೆ ನೀಡಿದರಲ್ಲದೆ ನೂತನ START ಒಪ್ಪಂದದಿಂದ ರಷ್ಯಾ ಹೊರಬಂದಿದೆ ಎಂದು ಘೋಷಿಸಿದರು. ಇದು ಪಶ್ಚಿಮದೊಂದಿಗಿನ ಮುರಿದುಬಿದ್ದ ಸಂಬಂಧವನ್ನು ಸೂಚಿಸುತ್ತದೆ. ಇದು ಮತ್ತೆ ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಕೂಡಾ ಪ್ರಚೋದಿಸಬಹುದು. ಕಳೆದ ವರ್ಷ ಎಲ್ಲರಿಗೂ ಆಘಾತಕಾರಿಯಾಗಿತ್ತು. ತ್ವರಿತ ವಿಜಯವನ್ನು ಬಯಸಿದ್ದ ಪುಟಿನ್, ಯುಕ್ರೇನಿನ ಪ್ರತಿಕ್ರಿಯೆ ಮತ್ತು ಅದನ್ನು ಬೆಂಬಲಿಸುವ ಪಶ್ಚಿಮದ ಧೃಡ ಸಂಕಲ್ಪವನ್ನು ನಿರೀಕ್ಷಿಸಿರಲಿಲ್ಲ. ಯುಕ್ರೇನ್ ರಷ್ಯಾ ಭಾರಿ ಬೆಲೆ ತೆರುವಂತೆ ಮಾಡಿತು ನಿಜ, ಆದರೆ ತನ್ನ ಬಹು ಭೂಪ್ರದೇಶವನ್ನು ಅದು ಕಳೆದುಕೊಂಡಿದೆ. ರಷ್ಯಾ ಜೊತೆಗಿನ ಸಂಬಂಧಗಳ ಕುರಿತು ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪಶ್ಷಿಮವು ಒಗ್ಗಟ್ಟು ಕಾಪಾಡಿಕೊಂಡಿದೆಯಾದರೂ ಯುದ್ಧದ ಆರ್ಥಿಕ ವೆಚ್ಚದಡಿ ತತ್ತರಿಸುತ್ತಿದೆ.
ಆದರೆ ಹಿನ್ನಡೆಯ ನಡುವೆಯೂ ಯಾರೂ ಮಾತುಕತೆಗೆ ಸಿದ್ಧವಿಲ್ಲ. ಪುಟಿನ್ ಮತ್ತು ಪಶ್ಚಿಮವು ದೀರ್ಘಾವಧಿಯ ಯುದ್ಧಕ್ಕೆ ಸನ್ನದ್ಧರಾದಂತೆ ತೋರುತ್ತದೆ. ಆದರೆ ಇಡೀ ಯುದ್ಧ ತನ್ನ ನೆಲದಲ್ಲಿ ನಡೆಯುತ್ತಿರುವುದರಿಂದ ಯುಕ್ರೇನಿಗೆ ಇದು ದೊಡ್ಡ ದುರಂತವೇ ಸರಿ. ದೇಶವು ಈಗಾಗಲೇ ಭೂಮಿ, ಶಸ್ತ್ರಾಸ್ತ್ರಗಳು ಮತ್ತು ಹತ್ತಾರು ಸಾವಿರ ಜೀವಗಳನ್ನು ಕಳೆದುಕೊಂಡಿದೆ, ಅದರ ಮೂಲಸೌಕರ್ಯ ಮತ್ತು ಆರ್ಥಿಕತೆಯು ಜರ್ಜರಿತವಾಗಿದೆ. ಪಶ್ಚಿಮದಿಂದ ಶಸ್ತ್ರಾಸ್ತ್ರಗಳ ಸತತ ಪೂರೈಕೆಯಿಲ್ಲದೆ, ರಷ್ಯಾದ ಆಕ್ರಮಣವನ್ನು ಅದು ಎದುರಿಸಿ ನಿಲ್ಲುವುದು ಅಸಾಧ್ಯವಾಗಿದೆ. ಯುದ್ಧವು ಮುಂದುವರಿದರೆ, ರಷ್ಯಾ-ನ್ಯಾಟೋ ನೇರ ಸಂಘರ್ಷದ ಅಪಾಯಗಳು ಹೆಚ್ಚು. ಯುರೋಪ್ನಲ್ಲಿ ಮುರಿದು ಬೀಳುತ್ತಿರುವ ಭದ್ರತೆಯ ಸನ್ನಿವೇಶ ಮತ್ತು ಪ್ರಮುಖ ಶಕ್ತಿಗಳ ನಡುವಿನ ಆಳವಾದ ಅಪನಂಬಿಕೆ, ಮೊದಲ ವಿಶ್ವ ಯುದ್ಧದ ಪೂರ್ವದಲ್ಲಿದ್ದ ಪರಿಸ್ಥಿತಿಗೆ ಹೋಲಿಸಬಹುದು. ಪರಮಾಣು ಯುದ್ಧದ ಕರಿಮೋಡದ ಕೆಳಗೆ ಇಂದು ವಿಶ್ವದ ದೊಡ್ಡಣ್ಣರ ನಡುವಿನ ನೇರ ಸಂಘರ್ಷವು ದುರಂತದ ಸರಮಾಲೆಯನ್ನೇ ತಂದೊಡ್ಡಬಲ್ಲದು. ಅಂತಹ ಸನ್ನಿವೇಶವು ಯೂರೋಪಿನ ಸಮಸ್ಯೆ ಮಾತ್ರ ಆಗಿರುವುದಿಲ್ಲ. ಜಾಗತಿಕ ಭದ್ರತೆ ಮತ್ತು ಸುರಕ್ಷತೆಗಾಗಿ ಯುದ್ಧವನ್ನು ಕೊನೆಗೊಳಿಸುವುದು ಅತ್ಯಗತ್ಯ. ಯುದ್ಧಗಳು ಸಾಮಾನ್ಯವಾಗಿ ದಿಗ್ವಿಜಯಗಳು ಇಲ್ಲ ಮಾತುಕತೆಗಳ ಮೂಲಕ ಕೊನೆಗೊಳ್ಳುತ್ತವೆ. ಈ ಒಂದು ವರ್ಷದ ಬಳಿಕ ದಿಗ್ವಿಜಯವು ಇಬ್ಬರಿಗೂ ಗಗನಕುಸುಮ ಎಂಬುದು ಸ್ಪಷ್ಟ. ಹಾಗಾಗಿ ರಷ್ಯಾ, ಯುಕ್ರೇನ್ ಮತ್ತು ಪಶ್ಚಿಮವು ಶಾಂತಿ ಮಾತುಕತೆಗಳ ಮೂಲಕ ಯುದ್ಧಕ್ಕೆ ಇತಿಶ್ರೀ ಹಾಡಬೇಕಿದೆ. ಈ ಶಕ್ತಿಗಳು ಎಷ್ಟು ಬೇಗ ಮಾತುಕತೆಗೆ ಕೂರುತ್ತಾರೋ ಜಗತ್ತಿಗೆ ಅಷ್ಟು ಒಳ್ಳೆಯದು.
This editorial has been translated from English, which can be read here.