ಸಾಂವಿಧಾನಿಕ ಪದಾಧಿಕಾರಿಗಳು ಔಚಿತ್ಯ ಮರೆತು ದ್ವೇಷ ಸಾಧಿಸುವುದು ತರವಲ್ಲ. ಪಂಜಾಬ್ನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವಲ್ಲಿ ಪ್ರಬುದ್ಧತೆ ಪ್ರದರ್ಶಿಸಬೇಕು ಎಂಬುದು ಸುಪ್ರೀಂ ಕೋರ್ಟ್ನ ಸಲಹೆಯ ಸಾರ. ಈ ಹಿಂದೆ ತಾನು ಕೇಳಿದ ಕೆಲವು ಪ್ರಶ್ನೆಗಳಿಗೆ ಮುಖ್ಯಮಂತ್ರಿ ಭಗವಂತ ಮಾನ್ ಅವರ ಉತ್ತರಗಳ ಕುರಿತು ಕಾನೂನು ಸಲಹೆ ಪಡೆದ ನಂತರವಷ್ಟೆ ಮಂತ್ರಿ ಮಂಡಲದ ಸಲಹೆಯ ಮೇರೆಗೆ ವಿಧಾನಸಭೆ ಬಜೆಟ್ ಅಧಿವೇಶನ ಕರೆಯುವುದಾಗಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಹೇಳಿದ್ದು ಔಚಿತ್ಯದ ಗಡಿ ದಾಟಿತ್ತು. ರಾಜ್ಯಪಲರ ಈ ನಿಲುವು ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಲು ಪ್ರೇರೇಪಿಸಿತು. ನ್ಯಾಯಾಲಯವು ಈ ಕುರಿತು ತೀರ್ಪು ನೀಡುವ ಮುನ್ನವೇ ನಿಗದಿಯಂತೆ ಮಾರ್ಚ್ ೩ ರಂದು ರಾಜ್ಯಪಾಲರು ವಿಧಾನಸಭೆ ಅಧಿವೇಶನ ಕರೆದದ್ದರಿಂದ, ನ್ಯಾಯಾಂಗದ ಹಸ್ತಕ್ಷೇಪ ಇಲ್ಲದೆ ಈ ಸಮಸ್ಯೆ ಪರಿಹಾರ ಆಯಿತು. ಸಂವಿಧಾನದ ೧೪೭ನೆ ಪರಿಚ್ಛೇದ ಕಾಲಕಾಲಕ್ಕೆ ಸದನವನ್ನು “ತಾನು ಸೂಕ್ತವೆಂದು ಭಾವಿಸುವ ಸಮಯ ಮತ್ತು ಸ್ಥಳದಲ್ಲಿ ಭೇಟಿಯಾಗಲು” ರಾಜ್ಯಪಾಲರಿಗೆ ಅಧಿಕಾರ ನೀಡಿದರೂ ಕೂಡ, ೨೦೧೬ ರಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠವು ನಬಮ್ ರೆಬಿಯಾ ಪ್ರಕರಣದಲ್ಲಿ ರಾಜ್ಯಪಾಲರು ಸದನವನ್ನು ಮಂತ್ರಿ ಮಂಡಲದ ಸಲಹೆಯ ಮೇರೆಗೆ ಮಾತ್ರ ಕರೆಯಬಹುದು, ಅಧಿವೇಶನ ಮೊಟಕುಗೊಳಿಸಬಹುದು ಅಥವಾ ವಿಸರ್ಜಿಸಬಹುದು ಎಂದು ಹೇಳಿತು. ಪುರೋಹಿತ್ ಅವರಿಗೆ ಈ ಕುರಿತು ತಿಳಿದಿರಲಿಲ್ಲ ಎಂದಲ್ಲ, ಆದರೆ ರಾಜಭವನ ಮತ್ತು ಮುಖ್ಯಮಂತ್ರಿಗಳ ಕಚೇರಿಯ ನಡುವಿನ ಮುರಿದುಬಿದ್ದ ಸಂಬಂಧದ ಕಾರಣ ಅವರು ಇಂತಹ ನಿಲುವು ತೆಗೆದುಕೊಂಡಿರಬೇಕು.
ನ್ಯಾಯಾಲಯವು ಮುಖ್ಯಮಂತ್ರಿ ಭಗವಂತ ಮಾನ್ ಅವರ ಪ್ರಶ್ನಾರ್ಹ ನಿಲುವುಗಳ ಬಗ್ಗೆಯೂ ತನ್ನ ಟಿಪ್ಪಣಿ ಮಾಡಿದೆ. ಕೆಲವು ಶಾಲಾ ಮುಖ್ಯ ಶಿಕ್ಷಕರನ್ನು ತರಬೇತಿಗಾಗಿ ಸಿಂಗಾಪುರಕ್ಕೆ ಕಳುಹಿಸಿದ್ದನ್ನು ರಾಜ್ಯಪಾಲರು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದ ಅವರು, ತಾನು ಪಂಜಾಬ್ ಜನರಿಗೆ ಮಾತ್ರ ಉತ್ತರದಾಯಿಯಾಗಿದ್ದು ಕೇಂದ್ರ ನೇಮಿಸಿದ ರಾಜ್ಯಪಾಲರಿಗಲ್ಲ ಎಂದು ಉತ್ತರಿಸಿದ್ದರು. ಇದು ನಿಸ್ಸಂಶಯವಾಗಿ ತಪ್ಪು. ಸಂವಿಧಾನದ ೧೬೭ನೇ ಪರಿಚ್ಛೇದ “ರಾಜ್ಯಪಾಲರು ಕೇಳುವ ರಾಜ್ಯದ ವ್ಯವಹಾರಗಳ ಆಡಳಿತಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಶಾಸನದ ಪ್ರಸ್ತಾಪಗಳನ್ನು ಒದಗಿಸುವುದು ಮುಖ್ಯಮಂತ್ರಿಯ ಕರ್ತವ್ಯವಾಗಿದೆ...”, ಎಂದು ಸ್ಪಷ್ಟವಾಗಿ ಹೇಳಿದೆ. ವಿವಿಧ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಇಂತಹ ವೈಯಕ್ತಿಕ ಮೇಲಾಟ ಮತ್ತು ಜಿದ್ದಾಜಿದ್ದಿ ಏರ್ಪಡುತ್ತಿರುವುದು ದುರದೃಷ್ಟಕರ. ಇಬ್ಬರೂ ಸಾಂವಿಧಾನಿಕ ಗಡಿಗಳನ್ನು ಗಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕು. ಕೆಲವು ರಾಜ್ಯಪಾಲರು ತಮ್ಮ ವಿವೇಚನಾ ಅಧಿಕಾರವನ್ನು ಸಂವಿಧಾನದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ ಕ್ಷೇತ್ರಗಳನ್ನು ಮೀರಿ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸಬಹುದು ಎಂದು ಭಾವಿಸಿದಂತಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕಣ್ಣು ಮತ್ತು ಕಿವಿಗಳು ಎಂಬುದನ್ನು ಅನೇಕ ರಾಜ್ಯಪಾಲರು ಅಕ್ಷರಶಃ ತೆಗೆದುಕೊಂಡು ರಾಜಕೀಯಕ್ಕೂ ಬರುತ್ತಿದ್ದಾರೆ. ಅವರು ಮಾರ್ಗದರ್ಶನ ಮಾಡಬಹುದು, ಎಡವಿದಾಗ ಎಚ್ಚರಿಕೆ ಅಥವಾ ಸಲಹೆ ನೀಡಬಹುದಾದರೂ, ಕೆಲವು ರಾಜ್ಯಪಾಲರು ಈ ನಡುವೆ ವ್ಯಾಖ್ಯಾನಕಾರ, ವಿಮರ್ಶಕ ಮತ್ತು ಪ್ರತಿಪಕ್ಷ ನಾಯಕರ ಪಾತ್ರವನ್ನು ಸಹ ವಹಿಸುತ್ತಿದ್ದಾರೆ. ಇದು ಸಾಂವಿಧಾನಿಕ ಆಡಳಿತಕ್ಕೆ ಒಳ್ಳೆಯದಲ್ಲ.
This editorial has been translated from English, which can be read here.